ಬಾಡಿ ಶೇಮಿಂಗ್ ಆರೋಪ: ಮುಂಬೈ ಪತ್ರಕರ್ತೆಯ ಕ್ಷಮೆ ಕೋರಿದ ನಟ ದುಲ್ಕರ್ ಸಲ್ಮಾನ್
ಮಲಯಾಳಂನ ಖ್ಯಾತ ನಟ ದುಲ್ಕರ್ ಸಲ್ಮಾನ್ ವಿವಾದದಲ್ಲಿ ಸಿಲುಕ್ಕಿದ್ದಾರೆ. ಮುಂಬೈ ಮೂಲದ ಪತ್ರಕರ್ತೆಯ ಫೋಟೋವನ್ನು ಒಪ್ಪಿಗೆ ಇಲ್ಲದೆ ಬಳಸಿರುವುದಲ್ಲದೆ ಬಾಡಿ ಶೇಮಿಂಗ್ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ನಟ ದುಲ್ಕರ್ ಸದಾ ಸಿನಿಮಾ ವಿಚಾರವಾಗಿ ಸದ್ದು ಮಾಡುತ್ತಿರುತ್ತಾರೆ. ವಿವಾದಗಳಿಂದ ದೂರ ಇರುವ ನಟ ದುಲ್ಕರ್ ಈಗ ಪತ್ರಕರ್ತೆಯ ಫೋಟೋವನ್ನು ಒಪ್ಪಿಗೆ ಇಲ್ಲದೆ ಬಳಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
Recommended Video
ದುಲ್ಕರ್ ಸಲ್ಮಾನ್ ನಿರ್ಮಾಣದ ಮೊದಲ ಸಿನಿಮಾ 'ವಾರಣೆ ಅವಶ್ಯಮುಂದ್' ರಿಲೀಸ್ ಆಗಿ ತಿಂಗಳುಗಳಾಗಿದೆ. ಆದರೀಗ ಈ ಸಿನಿಮಾ ತೊಂದರೆಯಲ್ಲಿ ಸಿಲುಕಿದೆ. ಫೆಬ್ರವರಿ 7 ರಂದು ರಿಲೀಸ್ ಆದ ಈ ಸಿನಿಮಾದ ವಿರುದ್ಧ ಮುಂಬೈ ಮೂಲದ ಪತ್ರಕರ್ತೆ ಸಿಡಿದೆದ್ದಿದ್ದಾರೆ. ಮುಂದೆ ಓದಿ..

ಸಿನಿಮಾದ ಜಾಹಿರಾತಿನಲ್ಲಿ ಪತ್ರಕರ್ತೆಯ ಫೋಟೋ
ವಾರಣೆ ಅವಶ್ಯಮುಂದ್ ಸಿನಿಮಾದಲ್ಲಿ ಮುಂಬೈ ಮೂಲಕ ಪತ್ರಕರ್ತೆಯ ಫೋಟೋವನ್ನು ಒಪ್ಪಿಗೆ ಇಲ್ಲದೆ ಸಿನಿಮಾದಲ್ಲಿ ಜಾಹಿರಾತುಗಾಗಿ ಬಳಸಲಾಗಿದೆ ಎಂದು ಪತ್ರಕರ್ತೆ ಚಿತ್ರದ ನಿರ್ಮಾಪಕ ದುಲ್ಕಾರ್ ಸಲ್ಮಾನ್ ವಿರುದ್ಧ ಕಿಡಿಕಾರಿದ್ದಾರೆ. ಬಾಡಿ ಶೇಮಿಂಗ್ ಮಾಡಲಾಗಿದೆ ಎಂದು ಆರೋಪ ಮಾಡಿದ್ದು, ದುಲ್ಕರ್ ಸಾರ್ವಜನಿಕವಾಗ ಕ್ಷಮೆಯಾಚಿಸಬೇಕು, ಇಲ್ಲವಾದರೆ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.

ಪತ್ರಕರ್ತೆಯ ಟ್ವೀಟ್
ಈ ಬಗ್ಗೆ ಪತ್ರಕರ್ತೆ ಟ್ವೀಟ್ ಮಾಡಿದ್ದು, "ಆತ್ಮೀಯ ದುಲ್ಕರ್ ಸಲ್ಮಾನ್ ನಿಮ್ಮ ಸಿನಿಮಾ ವೈಶಿಷ್ಟ್ಯಕ್ಕಾಗಿ ಧನ್ಯವಾದಗಳು. ಆದರೆ ಸಾರ್ವಜನಿಕ ವೇದಿಕೆಯಲ್ಲಿ ಬಾಡಿ ಶೇಮಿಂಗ್ ಮಾಡಿರುವುದನ್ನು ಸಹಿಸಲ್ಲ. ನನ್ನ ಒಪ್ಪಿಗೆ ಮತ್ತು ಜ್ಞಾನವಿಲ್ಲದೆ ನನ್ನ ಫೋಟೋವನ್ನು ಹೇಗೆ ಬಳಸಲಾಗಿದೆ" ಎಂದು ಟ್ವೀಟ್ ಮಾಡಿದ್ದರು.

ಕ್ಷಮೆಯಾಚಿಸಿದ ದುಲ್ಕರ್
ಪತ್ರಕರ್ತೆ ಟ್ವೀಟ್ ಮಾಡುತ್ತಿದ್ದಂತೆ ನಟ ದುಲ್ಕರ್ ಸಲ್ಮಾನ್ ತಕ್ಷಣ ಪ್ರತಿಕ್ರಿಯೆ ನೀಡಿದ್ದಾರೆ. "ತಪ್ಪಿನ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಈ ಫೋಟೋವನ್ನು ಹೇಗೆ ಬಳಸಿಕೊಳ್ಳಲಾಗಿದೆ ಎಂದು ಸಂಬಂಧಪಟ್ಟವರಲ್ಲಿ ಪರಿಶೀಲಿಸುತ್ತಿದ್ದೇನೆ. ನನ್ನ ಕಡೆಯಿಂದ ಮತ್ತು ಚಿತ್ರತಂಡದಿಂದಾದ ತೊಂದರೆಗೆ ಕ್ಷಮೆಯಾಚಿಸುತ್ತೇನೆ. ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲ" ಎಂದು ಹೇಳಿದ್ದಾರೆ.

ನಿರ್ದೇಶಕ ಹೇಳಿದ್ದೇನು?
ಇನ್ನೂ ದುಲ್ಕರ್ ಸಲ್ಮಾನ್ ಮಾತ್ರವಲ್ಲದೆ ನಿರ್ದೇಶಕ ಅನೂಪ್ ಸತ್ಯನ್ ಸಹ ಕ್ಷಮೆಯಾಚಿಸಿದ್ದಾರೆ. "ಮೊದಲನೆಯದಾಗಿ ಕ್ಷಮೆ ಕೇಳುತ್ತೇನೆ. ಈ ಚಿತ್ರದ ವಿಷಯವು ಲಿಂಗಭೇದಭಾವಕ್ಕೆ ವಿರುದ್ಧವಾಗಿರುವುದರಿಂದ ಮಹಿಳೆಯರನ್ನು ಅಗೌರವಗೊಳಿಸುವ ಯಾವುದೆ ಉದ್ದೇಶವಿರಲಿಲ್ಲ. ಈ ಚಿತ್ರದ ತಾಂತ್ರಿಕ ಸಿಬ್ಬಂದಿಯ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











