ಖ್ಯಾತ ಮಲಯಾಳಂ ನಟ ನೆಡುಮುಡಿ ವೇಣು ನಿಧನ
ದಕ್ಷಿಣ ಭಾರತದ ಖ್ಯಾತ ಹಿರಿಯ ನಟ ನೆಡುಮುಡಿ ವೇಣು (73) ತಿರುವನಂತಪುರಂನಲ್ಲಿ ನಿಧನರಾದರು ಎಂಬ ಸುದ್ದಿ ವರದಿಯಾಗಿದೆ. ಪಿತ್ತಜನಕಾಂಗ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನೆಡುಮುಡಿ ವೇಣು ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಅಕ್ಟೋಬರ್ 11) ಕೊನೆಯುಸಿರೆಳೆದರು.
ನೆಡುಮುಡಿ ವೇಣು ಅವರ ಅನಿರೀಕ್ಷಿತ ಸಾವಿಗೆ ಇಡೀ ದಕ್ಷಿಣ ಚಿತ್ರರಂಗ ಮರುಗಿದೆ. ಸಾಮಾಜಿಕ ಜಾಲತಾಣದ ಮೂಲಕ ವೇಣು ಅವರಿಗೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ನೆಡುಮುಡಿ ವೇಣು ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ನಂತರ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದ್ರೀಗ, ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾದ ಕಾರಣ ಮತ್ತೆ ಆಸ್ಪತ್ರೆಗೆ ಸೇರಿ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು ಎಂದು ವರದಿಯಾಗಿದೆ.

ನೆಡುಮುಡಿ ವೇಣು ನಿಧನದ ಸುದ್ದಿ ಕೇಳಿ ಪೃಥ್ವಿರಾಜ್ ಸುಕುಮಾರನ್, ದುಲ್ಕರ್ ಸಲ್ಮಾನ್, ಖುಷ್ಬು ಸುಂದರ್, ಜಿವಿ ಪ್ರಕಾಶ್ ಕುಮಾರ್, ವೇದಿಕಾ, ನಿವಿನ್ ಪೌಲಿ, ಸತೀಶ್, ಸೌಂಡ್ ಡಿಸೈನರ್ ರೆಸುಲ್ ಪೂಕುಟ್ಟಿ ಸೇರಿದಂತೆ ಅನೇಕರು ಟ್ವಿಟರ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದರು.
''ನಿಮಗೆ ವಿದಾಯ ಅಂಕಲ್, ನಿಮ್ಮ ಕೆಲಸ ಹಾಗೂ ಅನುಭವ ಮುಂದಿನ ಪೀಳಿಗೆಗೆ ಸಂಶೋಧನಾ ವಸ್ತುವಾಗಿ ಇರುತ್ತದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪೃಥ್ವಿರಾಜ್ ಸುಕುಮಾರನ್ ಟ್ವೀಟ್ ಮಾಡಿದ್ದಾರೆ.
''ನಮ್ಮ ಅತ್ಯುತ್ತಮ ನಟರಲ್ಲಿ ಒಬ್ಬರು ಮತ್ತು ಒಳ್ಳೆಯ ಮನುಷ್ಯರಲ್ಲಿ ಒಬ್ಬರಾಗಿದ್ದ ವೇಣು ಅಂಕಲ್, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ನಟ ದುಲ್ಕಾರ್ ಸಲ್ಮಾನ್ ಟ್ವೀಟ್ ಮಾಡಿದ್ದಾರೆ.
''ಲೆಜಂಡರಿ ಕಲಾವಿದ ನೆಡಮುಡಿ ವೇಣು ನಿಧನ ಸುದ್ದಿ ಕೇಳಿ ದುಃಖವಾಯಿತು. ಅವರೊಬ್ಬರ ಅದ್ಭುತ ಕಲಾವಿದ ಮಾತ್ರವಲ್ಲ, ಓರ್ವ ಅದ್ಭುತ ವ್ಯಕ್ತಿ. ನನ್ನ ಪತಿಯೂ ಅವರ ಒಂದು ಸಿನಿಮಾವನ್ನು ನಿರ್ದೇಶಿಸಿರುವುದು ಗೌರವ ತಂದಿದೆ. ನಿಜಕ್ಕೂ ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ'' ಎಂದು ನಟಿ ಖುಷ್ಬೂ ಟ್ವೀಟ್ ಮಾಡಿದ್ದಾರೆ.
ಹಿರಿಯ ನಟ ವೇಣು ತಮ್ಮ ವೃತ್ತಿಜೀವನದಲ್ಲಿ ತಮಿಳು ಸೇರಿದಂತೆ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂಡಿಯನ್, ಅನ್ನಿಯನ್, ಸರ್ವಂ ತಾಳ ಮಾಯಂ ಚಿತ್ರಗಳಲ್ಲಿ ಅವರ ಪಾತ್ರ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ನೆಡುಮುಡಿ ನಟನೆಗೆ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಆರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಿಕ್ಕಿವೆ.


Click it and Unblock the Notifications











