ಮಲಯಾಳಂ ಖ್ಯಾತ ಗೀತರಚನೆಕಾರ ಪೂವಾಚಲ್ ಖಾದರ್ ನಿಧನ
ಮಲಯಾಳಂ ಸಿನಿ ಇಂಡಸ್ಟ್ರಿಯ ಖ್ಯಾತ ಗೀತರಚನೆಕಾರ ಪೂವಾಚಲ್ ಖಾದರ್ (72) ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಜೂನ್ 17 ರಂದು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಖಾದರ್ ಇಂದು (ಜೂನ್ 22) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.
ಪೂವಾಚಲ್ ಖಾದರ್ ಕೊರೊನಾ ವೈರಸ್ ಸಂಬಂಧಿತ ರೋಗಲಕ್ಷಣಗಳಿಂದ ಬಳಲುತ್ತಿದ್ದರು. ಅದಕ್ಕಾಗಿ ಆಸ್ಪತ್ರೆಗೆ ಸೇರಿ ಚಿಕಿತ್ಸೆಯಲ್ಲಿದ್ದರು. ಉಸಿರಾಟ ತೊಂದರೆ ಉಂಟಾಗಿ ವೆಂಟಿಲೇಟರ್ ಬೆಂಬಲದಲ್ಲಿದ್ದ ಖಾದರ್ ಇಂದು ಕೊನೆಯುಸಿರೆಳೆದರು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ ಖಾದರ್ ಅಂತ್ಯಕ್ರಿಯೆ ಜುಮ ಮಸೀದಿಯಲ್ಲಿ ನಡೆಯಲಿದೆ.
ಪೂವಾಚಲ್ ಖಾದರ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದು, ''ಮಲಯಾಳಂ ಸಾಹಿತ್ಯ ಕ್ಷೇತ್ರಕ್ಕೆ ಮತ್ತು ಚಿತ್ರರಂಗಕ್ಕೆ ದೊಡ್ಡ ನಷ್ಟ'' ಎಂದಿದ್ದಾರೆ.

1948ರಲ್ಲಿ ತಿರುವನಂತಪುರಂನಲ್ಲಿ ಜನಿಸಿದ ಪೂವಾಚಲ್ ಖಾದರ್ 'ಕವಿತಾ' ಸಿನಿಮಾ ಮೂಲಕ ಗೀತರಚನೆಕಾರರಾಗಿ ಚಿತ್ರರಂಗಕ್ಕೆ ಬಂದರು. ಈ ಚಿತ್ರವನ್ನು ವಿಜಯ ನಿರ್ಮಲಾ ನಿರ್ದೇಶನ ಮಾಡಿದ್ದರು. 70-80ರ ದಶಕದ ಖ್ಯಾತ ಗೀತಾರಚನೆಕಾರ ಎನಿಸಿಕೊಂಡರು.
ಸುಮಾರು 300 ಚಿತ್ರಗಳಲ್ಲಿ 2000ಕ್ಕೂ ಅಧಿಕ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಪೀಟರ್ ರುಬೆನ್, ಎಟಿ ಉಮ್ಮರ್, ಶ್ಯಾಮ್, ಕೆವಿ ಮಹಾದೇವನ್, ಇಳಯರಾಜ, ಶಂಕರ್ ಗಣೇಶನ್ ಅಂತಹ ಸಂಗೀತಗಾರ ಜೊತೆ ಕೆಲಸ ಮಾಡಿದ್ದರು.


Click it and Unblock the Notifications











