ಜಯಲಲಿತಾ ಮನಗೆದ್ದಿದ್ದ ಬಹುಭಾಷಾ ಗಾಯಕಿ ಸಂಗೀತಾ ಸಜಿತ್ ನಿಧನ: ಕಂಬನಿ ಮಿಡಿದ ಚಿತ್ರರಂಗ
ಮಲಯಾಳಂ ಚಿತ್ರರಂಗದ ಸುಪ್ರಸಿದ್ಧ ಗಾಯಕಿ ಸಂಗೀತಾ ಸುಜಿತ್ ಅನಾರೋಗ್ಯದಿಂದ ಇಂದು( ಮೇ 222) ಕೊನೆಯುಸಿರೆಳೆದಿದ್ದಾರೆ. ಹಲವು ದಿನಗಳಿಂದ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಯಿಂದ ಗಾಯಕಿ ಬಳಲುತ್ತಿದ್ದರು. ಸಂಗೀತಾ ಸಜಿತ್ ಅವರ ಸಹೋದರಿ ಮನೆಯಲ್ಲಿ ವಾಸವಿದ್ದು, ಅಲ್ಲಿಂದಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಸಮಸ್ಯೆ ಉಲ್ಭಣಗೊಂಡಿದ್ದರಿಂದ ಇಂದು ( ಮೇ 22) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಸಂಗೀತಾ ಸಜಿತ್ ಇದೂವರೆಗೂ ಸುಮಾರು 200ಕ್ಕೂ ಅಧಿಕ ಸಿನಿಮಾಗಳಿಗೆ ಹಾಡುಗಳನ್ನು ಹಾಡಿದ್ದಾರೆ. ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚು ಹಾಡನ್ನು ಹಾಡಿದ್ದರೂ, ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ಹಾಡಿದ್ದಾರೆ. ತಮಿಳು, ತೆಲುಗು ಸೇರಿದಂತೆ ಕನ್ನಡ ಭಾಷೆಯಲ್ಲೂ ಸಂಗೀತಾ ಸಜಿತ್ ಹಾಡಿದ್ದಾರೆ.
ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಸಂಗೀತ ನೀಡಿದ್ದ 'ಮಿಸ್ಟರ್ ರೋಮಿಯೋ' ಅನ್ನುವ ತಮಿಳು ಸಿನಿಮಾಗೆ ಹಾಡಿದ್ದರು. ಈ ಚಿತ್ರದ "ತನ್ನೇರೈ ಕಾಥಲಿಕ್ಕುಂ... " ಎಂಬ ಹಾಡು ಸಂಗೀತಾ ಸಜಿತ್ ಅವರ ವೃತ್ತಿ ಬದುಕಿನಲ್ಲಿ ಅತೀ ದೊಡ್ಡ ಹಿಟ್ ಕಂಡ ಹಾಡು.
1998ರಲ್ಲಿ ತೆರೆಕಂಡಿದ್ದ ಮಲಯಾಳಂ ಸಿನಿಮಾ ' ಎನ್ನು ಸ್ವಂತಂ ಜಾನಕಿಕುಟ್ಟಿ' ಸಿನಿಮಾದ "ಅಂಬಲಿ ಪೂವೆಟ್ಟಂ... " ಎಂಬ ಹಾಡು 90 ದಶಕದ ಕೊನೆಯಲ್ಲಿ ಸೂಪರ್ ಹಿಟ್ ಆಗಿತ್ತು. ಮಲಯಾಳಂ ಸಿನಿ ರಸಿಕರು ಈ ಹಾಡನ್ನು ಗುನುಗುತ್ತಿದ್ದರು. ತನ್ನ ವೃತ್ತಿ ಬದುಕಿನಲ್ಲಿ ಸೂಪರ್ ಹಿಟ್ ಹಾಡುಗಳನ್ನು ನೀಡಿದ ಗಾಯಕಿ ನಿಧನದಿಂದ ಮಲಯಾಳ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.

ಮಲಯಾಳಂ ಸೂಪರ್ಸ್ಟಾರ್ ಮಮ್ಮುಟ್ಟಿ ಅಭಿನಯದ 'ಪಳಸ್ಸಿರಾಜ' ಸಿನಿಮಾದ ಹಾಡು " ಒಡತಾಂಡಿಲ್ ಥಾಲಂ ಕೊಟ್ಟುಂ..", 'ರಕ್ಕಿಲಿಪಟ್ಟು' ಸಿನಿಮಾದ "ಧುಮ್ ಧುಮ್ ಧುಮ್ ದೊರೆಯತ್ತೋ...", 'ಕಕ್ಕ ಕುಯಿಲ್' ಸಿನಿಮಾದ "ಆಲಾರೆ ಗೋವಿಂದ...", ಹೀಗೆ ಮಲಯಾಳಂ ಚಿತ್ರರಂಗದ ಸೂಪರ್ ಹಿಟ್ ಹಾಡುಗಳಿಗೆ ಸಂಗೀತಾ ಸಜಿತ್ ಧ್ವನಿಯಾಗಿದ್ದರು.
ಹಿಂದೊಮ್ಮೆ 'ಜ್ಞಾನಪಳತೆ ಪಿಳಿಂತ್' ಎಂಬ ಕೆ ಬಿ ಸುಂದರಂಬಲ್ ಅವರ ಹಾಡನ್ನು ಸಂಗೀತಾ ಸಜಿತ್ ಹಾಡಿದ್ದರು. ಈ ಹಾಡಿನಿಂದ ಸಂಗೀತಾ ಸಜಿತ್ ಫೇಮಸ್ ಆಗಿದ್ದರು. ಈ ಹಾಡನ್ನು ತಮಿಳುನಾಡು ಸರ್ಕಾರದ ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿ ಸಂಗೀತಾ ಹಾಡಿದ್ದರು. ಅಂದಿನ ತಮಿಳುನಾಡಿನ ಮುಖ್ಯ ಮಂತ್ರಿಯಾಗಿದ್ದ ಜಯಲಲಿತಾ ಇವರ ಧ್ವನಿ ಮರುಳಾಗಿ, ಅದೇ ಕಾರ್ಯಕ್ರಮದಲ್ಲಿ 10 ಸವರನ್ ಬಂಗಾರದ ಸೆಕ್ಲೆಸ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ನಟಿಸಿದ 'ಕುರುಥಿ' ಸಿನಿಮಾದ ಥೀಮ್ ಹಾಡಿಗೆ ಧ್ವನಿಯಾಗಿದ್ದರು. ಅದೇ ಇವರ ಕೊನೆಯ ಹಾಡಾಗಿತ್ತು. ಕೇರಳದ ತಿರುವನಂತಪುರಂನ ತೈಕಾಡ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.


Click it and Unblock the Notifications











