ಸದ್ಯದ ನಂಬರ್ 1 ಸಂಗೀತ ನಿರ್ದೇಶಕ ಯಾರು?

ಕಳೆದ ವರ್ಷ ಬಿಡುಗಡೆಗೊಂಡ 'ಗಾಳಿಪಟ' ಮತ್ತು 'ಗಜ' ಚಿತ್ರದ ಹಾಡುಗಳು ಯಾವಾಗ ಜನರ ಬಾಯಲ್ಲಿ ಗುನಗಲು ಶುರುವಾಯಿತೊ ಅಲ್ಲಿಂದ ಹರಿಕೃಷ್ಣ ಜಾತಕ ಬದಲಾಯಿತು. ಗಾಳಿಪಟ ಚಿತ್ರದ ಮಿಂಚಾಗಿ ನೀನು ಬರಲು.., ನದೀಂ ದೀನ್ ತನಾ..., ಗಜ ಚಿತ್ರದ ಐತ್ ಲಕಡಿ.. ಹಾಡುಗಳೂ ಜನಪ್ರಿಯವಾದವು. ಈ ಕಾರಣಕ್ಕಾಗಿ ದರ್ಶನ್ ಬ್ಯಾನರ್ ನ ಎಲ್ಲಾ ಚಿತ್ರಗಳಿಗೆ ಹರಿಕೃಷ್ಣ ಖಾಯಂ ಸಂಗೀತ ನಿರ್ದೇಶಕರಾಗಿ ಬದಲಾಗಿದ್ದಾರೆ. ಹರಿಕೃಷ್ಣ ಸಂಗೀತ ನಿರ್ದೇಶನದ ಇತರೆ ಚಿತ್ರಗಳೆಂದರೆ ಪಯಣ, ಇಂದ್ರ, ಸ್ನೇಹಾನಾ ಪ್ರೀತಿನಾ, ಕೃಷ್ಣ, ಪರಮೇಶ ಪಾನ್ ವಾಲ, ಅರ್ಜುನ್, ಭೂಪತಿ, ನವಗ್ರಹ.
2009ರಲ್ಲಿ ಹರಿಕೃಷ್ಣ ಸಂಗೀತ ನೀಡಿದ ಮೂರು ಚಿತ್ರಗಳು ತೆರೆಕಂಡಿವೆ.ಜನವರಿ ಅಂತ್ಯದಲ್ಲಿ ಎರಡು ಚಿತ್ರಗಳು ಬಿಡುಗಡೆಯಾಗಿದ್ದವು. ಅವುಗಳಲ್ಲಿ ಒಂದು 'ಅಂಬಾರಿ' ಮತ್ತೊಂದು 'ಮೇಘವೇ ಮೇಘವೇ'. ಅಂಬಾರಿ ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಅಂಬಾರಿ ಚಿತ್ರದ ಸರಸೋ ಸರಸೋ.. ಹಾಡು ಪಡ್ಡೆಗಳ ಬಾಯಲ್ಲಿ ಗುನುಗುತ್ತಿದೆ ಹಾಗೂ ಈ ಚಿತ್ರಕ್ಕೆ ಒಳ್ಳೆ ಪ್ರಶಂಸೆ ಕೂಡ ವ್ಯಕ್ತವಾಗಿದೆ. ಹರಿಕೃಷ್ಣ ಸಂಗೀತ ನಿರ್ದೇಶನದ ಜಂಗ್ಲಿ ಚಿತ್ರದ ಹಾಡುಗಳು ಸಾಕಷ್ಟು ಜನಪ್ರಿಯವಾಗಿವೆ. ಅದರಲ್ಲೂ ಹಳೆ ಪಾತ್ರೆ...ಹಳೆ ಕಬ್ಬಿಣ ಹಾಡು ಎಲ್ಲ ಕಡೆ ಕೇಳಿ ಬರುತ್ತಿದೆ. ಈ ಎಲ್ಲ ಕಾರಣಗಳಿಗೆ ಹರಿಕೃಷ್ಣ ಸಂಗೀತಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆಯಂತೆ. ಎಷ್ಟೇ ಆಗಲಿ ಹರಿಕೃಷ್ಣ ಅವರು ಜಿ.ಕೆ.ವೆಂಕಟೇಶರ ಕುಟುಂಬಕ್ಕೆ ಅಳಿಮಯ್ಯ ಅಲ್ಲವೇ! [ಅತ್ಯುತ್ತಮ ಹಿನ್ನೆಲೆ ಗಾಯಕಿ ಎಂದು ಕಳೆದ ಸಾಲಿನ ರಾಜ್ಯ ಪ್ರಶಸ್ತಿ ಪಡೆದ ವಾಣಿ ಅವರು ಖ್ಯಾತ ಸಂಗೀತಗಾರ ಜಿ.ಕೆ. ವೆಂಕಟೇಶ್ ಅವರ ಮೊಮ್ಮಗಳು.ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಪತ್ನಿ]
(ದಟ್ಸ್ ಕನ್ನಡ ಚಿತ್ರವಾರ್ತೆ)
ಕೆಟ್ಟ ಚಿತ್ರಗಳಿಗೆ ಕಲ್ಲೆಸೆದು ಪಾಠ ಕಲಿಸಿ: ರಾಜೇಶ್


Click it and Unblock the Notifications











