ಆಡಿಯೋ 'ಅದ್ದೂರಿ' ಬಿಡುಗಡೆಗೆ ದರ್ಶನ್, ಸುದೀಪ್
ಅದ್ದೂರಿ ಚಿತ್ರದ ಆಡಿಯೋ ಬಿಡುಗಡೆ ಪ್ರೇಮಿಗಳ ದಿನದಂದು ಮೊನ್ನೆ (ಫೆಬ್ರವರಿ 14, 2012) ಅದ್ದೂರಿಯಾಗಿ ನೆರವೇರಿತು. ನಿರ್ದೇಶಕ, ಅಂಬಾರಿ ಖ್ಯಾತಿಯ ಎ. ಪಿ. ಅರ್ಜುನ್ ಚಿತ್ರ ಅದ್ದೂರಿ ಹಾಡುಗಳ ಬಿಡುಗಡೆ ವೇದಿಕೆ ಮೇಲೆ ಸ್ಟಾರ್ ಗಳ ದಂಡೇ ನೆರೆದಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಲವ್ಲಿ ಸ್ಟಾರ್ ಪ್ರೇಮ್, ನಿರ್ದೇಶಕ ಪ್ರೇಮ್ ಜೊತೆ ಅದ್ದೂರಿ ನಾಯಕ ಧ್ರುವ, ಅವರಣ್ಣ ಚಿರಂಜೀವಿ ಸರ್ಜಾ ಹಾಗೂ ಇತರರಿದ್ದರು.
ಅದ್ದೂರಿಯ ಕಥೆ, ಚಿತ್ರಕಥೆ ಹಾಗೂ ಚಿತ್ರೀಕರಣವನ್ನು ಸಾಕಷ್ಟು ಸಿದ್ಧತೆಯೊಂದಿಗೆ ಮಾಡಿರುವ ಅರ್ಜುನ್, ಅಂಬಾರಿ ಚಿತ್ರವನ್ನೂ ಮೀರಿಸಿ ಇದು ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಡುಗಳು ಹೆಚ್ಚು ಯುವಜನತೆಯನ್ನು ಕೇಂದ್ರೀಕರಿಸಿದ್ದರೂ ಮಾಧುರ್ಯಪ್ರಧಾನವಾಗಿದ್ದು ಎಲ್ಲ ವರ್ಗದ ಜನೆತೆಯನ್ನು ಆಕರ್ಷಿಸಿ ಹಿಟ್ ಆಗುವಂತಿದೆ ಎಂಬುದು ಚಿತ್ರತಂಡದ ಅನಿಸಿಕೆ.
ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಅಂಬಾರಿ ನಂತರ ನಿರ್ದೇಶಕ ಅರ್ಜುನ್ ಅವರ ಯಾವುದೇ ಚಿತ್ರ ಬಿಡುಗಡೆ ಆಗಿಲ್ಲ. ಹಾಗಾಗಿ ಅದ್ದೂರಿ ಬಹಳ ನಿರೀಕ್ಷೆ ಹುಟ್ಟಿಸಿದೆ. ನಾಯಕ ಧ್ರುವ ಸರ್ಜಾಗೆ ಇದು ಸ್ಯಾಂಡಲ್ ವುಡ್ ಮೊದಲ ಎಂಟ್ರಿ. ಅರ್ಜನ್ ಸರ್ಜಾ ಅಳಿಯ, ಚಿರಂಜೀವಿ ಸರ್ಜಾ ತಮ್ಮನಾಗಿರುವ ಧ್ರುವ, ಕಲಾವಿದರ ಕುಟುಂಬದ ಕುಡಿ. ಹಾಗಾಗಿ ಪ್ರೇಕ್ಷಕರಿಗೆ ಧ್ರುವ ಬಗ್ಗೆ ಸಹಜ ಕುತೂಹಲವಿದೆ.
ಅದ್ದೂರಿ ಚಿತ್ರದ ನಾಯಕಿಯಾಗಿ ಹ್ಯಾಟ್ರಿಕ್ ಫಿಲಂ ಫೇರ್ ಪ್ರಶಸ್ತಿ ವಿಜೇತ ನಟಿ ರಾಧಿಕಾ ಪಂಡಿತ್ ಇದ್ದಾರೆ. ಹರಿಕೃಷ್ಣ ಸಂಗೀತದಲ್ಲಿ ಎಲ್ಲ ಹಾಡುಗಳೂ ಚೆನ್ನಾಗಿವೆ. ಆದರೆ ಪ್ರೇಕ್ಷಕರ ಪ್ರತಿಕ್ರಿಯೆ ಇನ್ನಷ್ಟೇ ತಿಳಿಯಬೇಕಿದೆ. ಒಟ್ಟಿನಲ್ಲಿ, ಆಡಿಯೋ ಬಿಡುಗಡೆಯನ್ನು ಅದ್ದೂರಿಯಾಗಿ ಮುಗಿಸಿರುವ ಅರ್ಜುನ್, ಚಿತ್ರ ಬಿಡುಗಡೆಗೆ ಕಾಯುವಂತೆ ಮಾಡಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











