ಎಲೆಮರೆಯ ಹಾಡು ಹಕ್ಕಿಗಳಿಗೆ ವಿಷ್ಣು ಆಹ್ವಾನ!
ವೃತ್ತಿಯಲ್ಲಿ ಗಾಯಕರಲ್ಲದವರು ಪ್ರವೃತ್ತಿಯಲ್ಲಿ ಹಾಡುಗಾರರಾಗಿರುತ್ತಾರೆ. ಅಂತಹವರು ತಮ್ಮ ಕಂಠಸಿರಿಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಸಿಕ್ಕಿರುವುದಿಲ್ಲ. ಬಾತ್ ರೂಂ ಸಿಂಗರ್ ಗಳಾಗಿಯೇ ಉಳಿದು ಬಿಡುತ್ತಾರೆ. ಹಾಗಾಗಬಾರದು ಅಂತ ಡಾ.ವಿಷ್ಣುವರ್ಧನ್ ಅವರ 'ಸ್ನೇಹಲೋಕ' ತಂಡ 'ಸ್ನೇಹಲೋಕ ಕರೋಕೆ ಕ್ಲಬ್' ಹುಟ್ಟುಹಾಕಿದೆ.
'ಕರೋಕೆ ಸಂಜೆ' ಕಾರ್ಯಕ್ರಮ ಪ್ರತಿ ತಿಂಗಳ ಎರಡನೇ ಶನಿವಾರ ನಡೆಯಲಿದೆ.ತಮ್ಮಲ್ಲಿರುವ ಗಾಯಕನನ್ನು ವೇದಿಕೆಗೆ ಪರಿಚಯಿಸಬಹುದು. ಒಳ್ಳೆ ಧ್ವನಿ ಇರಬೇಕು ಅಂತೇನಿಲ್ಲ. ಹಾಡುವ ಮನಸ್ಸಿದ್ದರೆ ಅಷ್ಟೇ ಸಾಕು. ಅಂಜಿಕೆ ಬಿಟ್ಟು ವೇದಿಕೆಗೆ ಬಂದು ಹಾಡಿ. ಈ ಕಾರ್ಯಕ್ರಮ ಇಂಥವರಿಗಷ್ಟೇ ಸೀಮಿತಲ್ಲ. ವೃತ್ತಿಯಲ್ಲಿ ಗಾಯಕರಾದವರಿಗೂ ಸ್ವಾಗತವಿದೆ ಎನ್ನುತ್ತಾರೆ ನಟ ವಿಷ್ಣುವರ್ಧನ್.
ಸ್ನೇಹಲೋಕ ಕರೋಕೆ ಕ್ಲಬ್ ನ ಮೊದಲ ಕಾರ್ಯಕ್ರಮ ಶನಿವಾರ(ಏಪ್ರಿಲ್ 11) ನಡೆಯಿತು. ಡಾ.ವಿಷ್ಣು, ಭಾರತಿ, ಸುಮಲತಾ ಅಂಬರೀಷ್, ವಿಷ್ಣು ಸಹೋದರಿ ಪೂರ್ಣಿಮಾ, ಅಳಿಯ ಅನಿರುದ್ಧ್ ಮುಂತಾದವರು ಕನ್ನಡದ ಜನಪ್ರಿಯ ಗೀತೆಗಳನ್ನು ಹಾಡಿದರು. ಮಹಮದ್ ರಫಿ, ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ ಮೊದಲಾದವರ ಹಾಡುಗಳೇ ಹೆಚ್ಚಾಗಿ ತೇಲಿಬಂದವು. ಸಂಗೀತ ನಿರ್ದೇಶಕ ವಿ.ಮನೋಹರ್, ನಿರ್ಮಾಪಕ ಕೆ ಮಂಜು, ನಟ ಶಿವರಾಂ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಿಮಗೂ ಹಾಡುವ ಆಸಕ್ತಿ ಇದ್ದರೆ ಮೊದಲು ಕ್ಲಬ್ ನ ಸದಸ್ಯತ್ವ ಪಡೆಯಬೇಕು. ನಂತರ ಎಲೆಮರೆಯಲ್ಲಿ ಹಾಡುತ್ತ್ತಿರುವ ಹಕ್ಕಿಗಳಿಗೆ ಕ್ಲಬ್ ನಲ್ಲಿ ಹಾಡುವ ಅವಕಾಶ ಕಲ್ಪಿಸಲಾಗುತ್ತದೆ. ವಿಷ್ಣು ಹೇಳುವುದಿಷ್ಟು, ಸಂಗೀತ ನಮ್ಮ ತಾಯಿ ಇದ್ದ ಹಾಗೆ. ಆ ತಾಯಿಗೆ ಅವಮಾನ ಮಾಡಬಾರದು. ಹಾಡುವವರು ತಕ್ಕಮಟ್ಟಿಗಾದರೂ ಸಂಗೀತ ಕಲಿತು ಹಾಡುವುದು ಒಳಿತು ಎಂಬುದು ಅವರ ಹಿತೋಕ್ತಿ. ಈ ಬಗ್ಗೆ ಹೆಚ್ಚಿನ ವಿವರಗಳನ್ನು [email protected] ಗೆ ಇಮೇಲ್ ಮಾಡುವ ಮೂಲಕ ಪಡೆಯಬಹುದು.(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











