ಶಿವರಾಜ್ ಕುಮಾರ್ಗೆ ಚಿನ್ನದ ಸರ ಕೊಟ್ಟ ರಾಮು
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಕೋಟಿ ನಿರ್ಮಾಪಕ ರಾಮು ಪ್ರೀತಿಯಿಂದ ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. 'ಶಕ್ತಿ' ಚಿತ್ರಕ್ಕೆ ಹಾಡೊಂದನ್ನು ಹಾಡಿರುವ ಶಿವಣ್ಣ ಅವರ ಗಾನಸುಧೆಯನ್ನು ಮೆಚ್ಚಿ ರಾಮು ಈ ಕಾಣಿಕೆ ನೀಡಿದ್ದಾರೆ.
ಶಿವಣ್ಣ ತಮ್ಮ ಬಿಜಿ ಶೆಡ್ಯೂಲ್ ನಡುವೆ ರಾಮು ನಿರ್ಮಾಣದ 'ಶಕ್ತಿ' ಚಿತ್ರಕ್ಕಾಗಿ ಗೀತೆಯೊಂದನ್ನು ಹಾಡಿದ್ದಾರೆ. ಪ್ರೇಮಕವಿ ಕೆ ಕಲ್ಯಾಣ್ ಬರೆದಿರುವ "ಬಂಡಿ ಸಾಗುತಿದೆ ಒಂಟಿ ಬಂಡಿ ಸಾಗುತಿದೆ ಎಲ್ಲೋ ದೂರದಲ್ಲಿ ನಿನ್ನ ನಾಳೆ ಕಾಯುತಿದೆ...ಯುದ್ಧವ ಸಾರಿಕೋ ಭಂಡರ ಮುಂದೆ, ಬುದ್ಧನ ಹಾಗಿರುವ ಬಡವರ ಹಿಂದೆ..ಕತ್ತಿಯ ಮೇಲೆ ನಡೆದಿದೆ ಬಾಳು..." ಎಂಬ ಹಾಡನ್ನು ಹಾಡಿದ್ದಾರೆ.
ಮಾಲಾಶ್ರೀ ಮುಖ್ಯಭೂಮಿಕೆಯಲ್ಲಿರುವ 'ಶಕ್ತಿ' ಪಕ್ಕಾ ಆಕ್ಷನ್ ಪ್ರಧಾನ ಚಿತ್ರ. ಈ ಚಿತ್ರದ ಹಾಡೊಂದನ್ನು ಶಿವಣ್ಣ ಹಾಡಬೇಕು ಎಂಬುದು ಚಿತ್ರತಂಡದ ಆಸೆಯಾಗಿತ್ತು. ಹಾಗಾಗಿ ಶಿವಣ್ಣ ಹಾಡಿದ್ದಾರೆ. ವರ್ಧನ್ ಸಂಗೀತ ಸಂಯೋಜಿಸಿರುವ ಈ ಗೀತೆಗೆ ಶಿವರಾಜಕುಮಾರ್ ಆಕಾಶ್ ಸ್ಟುಡಿಯೋದಲ್ಲಿ ಧ್ವನಿ ನೀಡಿದ್ದಾರೆ. ಶಿವಣ್ಣ ಕಂಠಸಿರಿಯಲ್ಲಿ ಮೇಲಿನ ಗೀತೆ ಉತ್ತಮವಾಗಿ ಮೂಡಿಬಂದಿದೆ. ಈ ಹಾಡು ಜನರ ಪ್ರಶಂಸೆಗೂ ಪಾತ್ರವಾಗಲಿದೆ ಎಂಬ ಅಭಿಪ್ರಾಯ ರಾಮು ಅವರದು.
ಚಿತ್ರದ ಪ್ರಧಾನ ಪಾತ್ರದಲ್ಲಿ ಮಾಲಾಶ್ರೀ ಅಭಿನಯಿಸಿದ್ದಾರೆ. ಅನಿಲ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ರಾಜೇಶ್ ಅವರ ಛಾಯಾಗ್ರಹಣವಿರುವ ಶಕ್ತಿ ಗೆ ಥ್ರಿಲ್ಲರ್ಮಂಜು, ರವಿವರ್ಮ, ರಾಮ್ಲಕ್ಷ್ಮಣ್ ಮತ್ತು ಪಳನಿರಾಜ್ ಅವರ ಸಾಹಸ ನಿರ್ದೇಶನವಿದೆ. ಲಕ್ಷ್ಮಣ್ ರೆಡ್ಡಿ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ರವಿಶಂಕರ್, ಶಯಾಜಿರಾವ್ ಶಿಂಧೆ, ವಿನಯಾಪ್ರಸಾದ್, ಅವಿನಾಶ್, ಶರತ್ ಲೋಹಿತಾಶ್ವಾ, ಸಾಧುಕೋಕಿಲಾ, ಕುರಿಗಳು ಪ್ರತಾಪ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











