ಯುಕೆ, ಯುಎಸ್ ನಲ್ಲಿ ಅರ್ಜುನ್ ಜನ್ಯ ಸಂಗೀತ ಸುಧೆ
ಸ್ಯಾಂಡಲ್ ವುಡ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ಹೊರದೇಶಗಳಲ್ಲಿ ಸಂಗೀತ ಕಚೇರಿ ನಡೆಸಲು ಸಜ್ಜಾಗಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಅರ್ಜುನ್ ಜನ್ಯ ಗಾನಗೋಷ್ಠಿ ಯುಎಸ್ ಹಾಗೂ ಯುಕೆಯಲ್ಲಿ ಮೊಳಗಲಿದೆ.
ಇದು ಅರ್ಜುನ್ ಜನ್ಯ ಹಾಗೂ ಅವರ ಅಭಿಮಾನಿಗಳ ಪಾಲಿಗೆ ಮರೆಯಲಾಗದ ರಸಗಳಿಗೆ. ಈ ಗಾನಗೋಷ್ಠಿಯ ವಿಶೇಷ ಎಂದರೆ ಬೇರೆಯವರು ಸಂಗೀತ ಸಂಯೋಜಿಸಿರುವ ಹಾಡುಗಳನ್ನೂ ಅರ್ಜುನ್ ಜನ್ಯ ಹಾಡುತ್ತಿರುವುದು. ಒಟ್ಟು ಆರು ಶೋಗಳನ್ನು ನಡೆಸಿಕೊಡಲಿದ್ದಾರೆ.
ಗಾನಗಂಧರ್ವ ಡಾ.ರಾಜ್ ಕುಮಾರ್, ಸಾಹಸಸಿಂಹ ಡಾ.ವಿಷ್ಣುವರ್ಧನ್ ಹಾಗೂ ಶಂಕರ್ ನಾಗ್ ಅವರ ಚಿತ್ರಗೀತೆಗಳು ವಿದೇಶದಲ್ಲಿರುವ ಕನ್ನಡಿಗರ ಮನಸೂರೆಗೊಳ್ಳಲಿವೆ. ಈ ಗಾನಗೋಷ್ಠಿಯ ಮತ್ತೊಂದು ವಿಶೇಷ ಎಂದರೆ ಹಲವಾರು ಗಾಯಕರು ಭಾಗಿಯಾಗುತ್ತಿರುವುದು.

ಸುಮಾರು ಒಂದು ತಿಂಗಳ ಕಾಲಾವಧಿಯ ಪ್ರವಾಸದಲ್ಲಿ ಯುಎಸ್, ಯುಕೆ ಕನ್ನಡಿಗರಿಗೆ ರಂಜನೆಯ ಮಹಾಪೂರವನ್ನೇ ಹರಿಸಲು ಅರ್ಜುನ್ ಸಿದ್ಧವಾಗಿದ್ದಾರೆ. ಯುಎಸ್, ಯುಕೆ ಗಾನಗೋಷ್ಠಿಯ ಹೆಚ್ಚಿನ ವಿವರಗಳನು ನಿರೀಕ್ಷಿಸಲಾಗಿದೆ.
ಸಂಗೀತ ನಿರ್ದೇಶಕ ವಿ ಮನೋಹರ್ ಹಾಗೂ ಕೆ ಕಲ್ಯಾಣ್ ಅವರ ಜೊತೆ ಕೀ ಬೋರ್ಡ್ ಕಲಿತ ಅರ್ಜುನ್ ಜನ್ಯ ಅವರು ಎ.ಆರ್. ರೆಹಮಾನ್ ಅವರ ಅಪ್ಪಟ ಅಭಿಮಾನಿ. ಹಾಗಾಗಿ ಅವರನ್ನು ಸ್ಯಾಂಡಲ್ ವುಡ್ ನ ಎಆರ್ ರೆಹಮಾನ್ ಎಂದೇ ಗುರುತಿಸುತ್ತಾರೆ. ಈ ಬಗ್ಗೆ ಅರ್ಜುನ್ ಜನ್ಯ ಅವರಿಗೆ ಹೆಮ್ಮೆ ಇದೆ.
'ಅಲೆಮಾರಿ' ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ, ಫಿಲಂಫೇರ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 'ವಿಕ್ಟರಿ' ಚಿತ್ರದ "ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು..." ಹಾಡು ಅವರನ್ನು ಹೆಚ್ಚು ಜನಪ್ರಿಯವಾಗಿಸಿತು. (ಏಜೆನ್ಸೀಸ್)


Click it and Unblock the Notifications











