ಧ್ವನಿಸುರುಳಿ ವಿಮರ್ಶೆ: ತಾಜಾತನದ ’ಉಳಿದವರು ಕಂಡಂತೆ’
ಚಿತ್ರದ ಆಡಿಯೋ ಬಿಡುಗಡೆಯಾಗಿದೆ, ಹೇಗಿದೆ ಎನ್ನುವುದಕ್ಕಿಂತ ಹೀಗೂ ಇರಬಹುದು ಎನ್ನುವಂತೆ ವಿಭಿನ್ನವಾಗಿದೆ ಹಾಡುಗಳು. "ಕಣ್ಣು ನಿನ್ನದಾದರೇನು ನೋಡೋದು ಬೇರೆಯವರನ್ನು, ನೋಡೋದು ಬೇರೆಯವರಾದರೇನು? ಅಲ್ಲಿ ಹುಡ್ಕು ನೀನು ನಿನ್ನತನವನ್ನು" ಎಂಬ ಅರ್ಥದ ಸಾಲುಗಳು ಚಿತ್ರದ ಗೀತೆಯೊಂದರಲ್ಲಿದೆ.
ಅಂತೆಯೇ ಚಿತ್ರದ ಹಾಡುಗಳಿಗೆ ತನ್ನದೇ ಆದ ತನ್ನತನವಿದೆ, ತಾಜಾತನವಿದೆ, ಹೊಸತನವಿದೆ. (ಪ್ರೇಮಿಗಳ ದಿನ ಹೊಸ ಪ್ರಣಯ ರಾಜನ ನೋಡಿ)
ಬ್ಯಾನರ್: ಸುವಿನ್ ಸಿನಿಮಾಸ್
ನಿರ್ಮಾಪಕರು: ಹೇಮಂತ್, ಸುನಿ, ಅಭಿ
ನಿರ್ದೇಶಕರು: ರಕ್ಷಿತ್ ಶೆಟ್ಟಿ
ಸಂಗೀತ : ಬಿ ಅಜನೀಶ್ ಲೋಕನಾಥ್
ತಾರಾಗಣ: ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ, ಅಚ್ಯುತ್ ಕುಮಾರ್
ಚಿತ್ರದ ಹಾಡಿನ ವಿಮರ್ಶೆ, ಸ್ಲೈಡಿನಲ್ಲಿ..

ಥೀಮ್ ಹಣೆಪಟ್ಟಿಯ ಹಿನ್ನಲೆ ಸಂಗೀತ
ಥೀಮ್ ಆಫ್ ಉಳಿದವರು
ಹಾಡಿರುವವರು : ವಿಜಯ್ ಪ್ರಕಾಶ್
ಸಾಹಿತ್ಯ: ಚಂದನ್ ಶೆಟ್ಟಿ
ಚಿತ್ರದ ಥೀಮ್ ಸಂಗೀತ ಎಂಬ ಹಣೆಪಟ್ಟಿಯ ಹಿನ್ನಲೆ ಸಂಗೀತದ ಈ ಟ್ರ್ಯಾಕ್ ನ ಸಂಗೀತ ಉತ್ತಮವಾಗಿದ್ದು, ಮೀನುಗಾರರ, ಹಡಗು ಕಾರ್ಮಿಕರ, ಸಮುದ್ರಯಾನದ ಹಿನ್ನಲೆ ಧ್ವನಿ, ಯಾವುದೋ ಘಟನೆ, ಕಥೆಯನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡು ಮೆಲ್ಲಗೆ ಬಿಚ್ಚುತ್ತಾ ಹೋಗುತ್ತದೆ. ಅತ್ಯುತ್ತಮ ಎನ್ನಬಹುದಾದ ವಾದ್ಯ ಸಂಯೋಜನೆ.

ಸಮಯದ ತಿರುವು ಹಾಡು
ಸಮಯದ ತಿರುವು ಹಾಡು
ಹಾಡಿರುವವರು : ಸಿ ಆರ್ ಬಾಬಿ
ಸಾಹಿತ್ಯ: ಮನೋಜವ ಗಲಗಲಿ, ವಿಘ್ನೇಶ್ವರ್ ವಿಶ್ವ
ಸಿ. ಅರ್.ಬಾಬಿಯವರ ಮಾದಕ ಧ್ವನಿಯಲ್ಲಿ ಮೂಡಿ ಬಂದಿರುವ ಈ ಗೀತೆಯ ಹಿನ್ನಲೆಯಲ್ಲಿ ಬರುವ ವಾದ್ಯ ಸಂಗೀತವೂ ಅಷ್ಟೇ ಮಾದಕವಾಗಿದ್ದು ಕರಾವಳಿಯ ಬಿಸಿಯ ನಡುವೆಯೂ ಬೀಸುವ ತಂಗಾಳಿಗೆ ಓಲಾಡುವ ತೆಂಗಿನ ಗರಿಗಳಂತೆ ಕೇಳುತ್ತದೆ. Knock Knock ಎನ್ನುತ್ತ ಹೃದಯದ ಬಾಗಿಲನ್ನು ತಟ್ಟುತ್ತಲೇ ಮುಗಿದು ಹೋಗುವ ಸುಂದರ ಗೀತೆಗೆ ಮನೋಜವ ಗಲಗಲಿ, ವಿಘ್ನೇಶ್ವರ ವಿಶ್ವರ ಸಾಹಿತ್ಯ ಇದ್ದೂ ಇಲ್ಲದಂತಿದೆ.

ಥೀಮ್ ಹಾಡುಗಳು
ರಿಚ್ಚೀಸ್ ಥೀಮ್ : ಮತ್ತೊಂದು ಹಿನ್ನಲೆ ಸಂಗೀತದ ಟ್ರ್ಯಾಕ್. ನಡುನಡುವೆ ಮಾತು, ನಗು ಕೇಕೆ, ಎಲ್ಲವೂ ಇದೆ. ಸಂಗೀತ ಏನಿದು ಹೀಗಿದೆ ಎಂದು ನಕ್ಕಿರೋ ಜೋಕೆ!!! ರಪ್ಪನೆ ಕೇಳಿ ಬರುತ್ತದೆ ಏನೋ ಬೋ* ಮಕ್ಳಾ ನಗ್ತೀರಾ? ಶೂಟ್ ಮಾಡಬೇಕಾ? ಎಂಬ ಉದ್ಘಾರ.
ಹುಲಿವೇಷ : ಈ ಟ್ರ್ಯಾಕ್ ಕೇಳುತ್ತಾ ಕೇಳುತ್ತಾ ನಮ್ಮ ಹಳ್ಳಿ ಜಾತ್ರೆ, ತೇರು, ಮೆರವಣಿಗೆಗಳಲ್ಲಿನ ಬ್ಯಾಂಡ್ ಸೆಟ್ ನೆನಪಿಗೆ ಬರಲಿಲ್ಲವೆಂದರೆ ಕೇಳಿ. ಕ್ಲಾಸ್ ಗುಂಗಿನಲ್ಲೇ ಆರಂಭವಾಗಿ 'ಬಾ ಬಾರೋ ರಣಧೀರ ಹಾಡಿನ ಸಂಗೀತದಿಂದ ಪಕ್ಕಾ ಮಾಸ್ ಗೆ ತಿರುಗಿ ಅಲ್ಲೇ ಮೆರೆದಾಡುತ್ತದೆ. ತಮಟೆ, ತಾಸೆ, ಜಲ್ ಜಲ್ ಸದ್ದಂತೂ ಬಾಲ್ಯ ದಿನಗಳ ನೆನಪತ್ತ ಕರೆದುಕೊಂಡು ಹೋಗುತ್ತದೆ. ಕೂತ್ತಲ್ಲೇ ಹುಲಿವೇಷದ ಒಂದೆರೆಡು steps ಹಾಕುವಂತೆ ಮಾಡುತ್ತದೆ. ಈ ಟ್ರ್ಯಾಕ್. ಕೇವಲ ಹಿನ್ನಲೆ ಸಂಗೀತದಲ್ಲೂ ಇಷ್ಟೊಂದು ತುಂಟತನವೇ? ಡ್ಯಾನ್ಸ್ ಮಲ್ಪರೆಗು ಸರಿಯಾನ ಟ್ರ್ಯಾಕ್.
The Final Countdown: ಮೊದಲೇ ಹೇಳಿದಂತೆ ಇಲ್ಲಿನ ಪ್ರತಿಯೊಂದು ಹಿನ್ನಲೆ ಸಂಗೀತವೂ, ಪ್ರತಿಯೊಂದು ಟ್ರ್ಯಾಕ್ಕೂ ಯಾವುದೋ ಒಂದು ಕಥೆಯನ್ನೋ ಘಟನೆಯನ್ನೋ ತೀವ್ರವಾಗಿ ಹೇಳುತ್ತಾ ಹೋಗುತ್ತದೆ. ಈ ಟ್ರ್ಯಾಕ್ ಸಂಗೀತವೂ ಅದರಿಂದ ಹೊರತಾಗಿಲ್ಲ. ನಿರ್ದೇಶಕ ರಕ್ಷಿತ್ ಸಂಗೀತದಲ್ಲೇ ಕಥೆಯನ್ನು ಮುನ್ನಡೆಸುವ ನಿರ್ಧಾರ ಮಾಡಿದಂತಿದೆ.

ಕಣ್ಣಾಮುಚ್ಚೆ ಹಾಡು
ಕಣ್ಣಾಮುಚ್ಚೆ ಹಾಡು
ಹಾಡಿರುವವರು: ಶಂಕರ್ ಮಹಾದೇವನ್, ವಾಣಿ ಹರಿಕೃಷ್ಣ
ಸಾಹಿತ್ಯ: ಸುನಿ
ಥೀಮ್ ಸಾಂಗುಗಳ ಭರಾಟೆಯಿಂಡ ಕೇಳುಗರನ್ನು ಮಾಧುರ್ಯದ ಲೋಕಕ್ಕೆ ತಂದು ನಿಲ್ಲಿಸುವ ಗೀತೆಗೆ ಸುನಿಯವರ ಸಾಹಿತ್ಯವಿದೆ. ಶಂಕರ್ ಮಹಾದೇವನ್ ಗೆ ಸಾಟಿಯಾಗಿ ವಾಣಿ ಧ್ವನಿಗೂಡಿಸಿದ್ದಾರೆ. ಹಿನ್ನಲೆಯಲ್ಲಿ ಬರುವ ವಾದ್ಯ ಸಂಗೀತದಲ್ಲಿ ಸಂಗೀತ ನಿರ್ದೇಶಕ ತೋರಿರುವ ಸಂಯಮ ಅದ್ಭುತ. ಉತ್ತಮ ಸಾಹಿತ್ಯ, ಅದ್ಭುತ ಗಾಯನದ ನಡುವೆ ಅಜನೀಶ್ ತಮ್ಮ ಸಂಗೀತದಿ೦ದ ಎತ್ತರದಲ್ಲಿ ನಿಲ್ಲುತ್ತಾರೆ.

ಮಳೆ ಮರೆತು ಬೆರುಗುಗೊಳಿಸುತ್ತದೆ
ಮಳೆ ಮೆರೆತು
ಹಾಡಿರುವವರು: ವಿಜಯ್ ಪ್ರಕಾಶ್
ಸಾಹಿತ್ಯ : ವಿಘ್ನೇಶ್ವರ್ ವಿಶ್ವ
ಅಜನೀಶ್ ತಮ್ಮ ವಾದ್ಯ ಸಂಯೋಜನೆಯಿಂದ ಬೆರಗುಗೊಳಿಸಿದರೆ, ವಿಘ್ನೇಶ್ವರ ವಿಶ್ವರ ಸಾಹಿತ್ಯ ಮೋಡಿ ಮಾಡುತ್ತದೆ. ಉತ್ತಮ ರಾಗಕ್ಕೆ ಒಳ್ಳೆಯ ಸಾಹಿತ್ಯ ದೊರಕಿ ವಿಜಯ್ ಪ್ರಕಾಶರ ಧ್ವನಿ ಸಿಕ್ಕ ಮೇಲೆ ಕೇಳಬೇಕೇ? ವಿಜಯ್ ಸಂದರ್ಭಕ್ಕೆ ತಕ್ಕಂತೆ ತಮ್ಮ ಧ್ವನಿಯನ್ನು ಬದಲಾಯಿಸಿಕೊಂಡು ಹಾಡಿದಂತೆ ಭಾಸವಾಗುವುದು ಒಂದು ಉತ್ತಮ ಬೆಳವಣಿಗೆ.

ಘಾಟಿಯ ಇಳಿದು ಹಾಡು
ಘಾಟಿಯ ಇಳಿದು
ಹಾಡಿರುವವರು : ವಿಜಯ್ ಪ್ರಕಾಶ್
ಸಾಹಿತ್ಯ : ರಕ್ಷಿತ್ ಶೆಟ್ಟಿ
ಸಾಹಿತ್ಯ, ಸಂಗೀತ, ವಾದ್ಯ ಸಂಯೋಜನೆ, ಮಣ್ಣಿನ ವಾಸನೆ ಎಲ್ಲವೂ ಒಟ್ಟಾಗಿ ಉತ್ತಮವಾಗಿ ಜೊತೆಗೂಡಿ ಬಂದಾಗ ಒಂದು ಗೀತೆ ಏನಾಗಬಹುದೋ, ಇಲ್ಲಿ ಅದೇ ಆಗಿದೆ. ಹೆಚ್ಚಿಗೆ ಬರೆಯಲು ಏನಿಲ್ಲ. ಕೇಳಿ ಆನಂದಿಸಬೇಕಷ್ಟೇ. ರಕ್ಷಿತ್ ರ ಸಾಹಿತ್ಯ 'ಚಂದವುಂಟು ಮಾರಾಯ್ರೇ' ಅನ್ನುವಂತಿದೆ. ನಡುವೆ ಬರುವ ತುಳು ಮಾತುಗಳು ಗೀತೆಗೆ ಮೆರಗು ತಂದುಕೊಟ್ಟಿದೆ. ಪದ ಭಾರೀ ಸೋಕು ಉಂಡಿಯೇ..

ಪೇಪರ್.. ಪೇಪರ್
ಪೇಪರ್.. ಪೇಪರ್
ಹಾಡಿರುವವರು : ಹೃಷಿಕೇಶ್, ಆದಿತ್ಯ ಸುನೀಲ್ ದತ್, ಮಲ್ಲೇಶ್ ಹೂಗಾರ್, ಪುಟ್ಟರಾಜ್ ಹೂಗಾರ್, ಗಗನ್, ಜಿ ಗಾಂವ್ಕರ್
ಸಾಹಿತ್ಯ : ರಕ್ಷಿತ್ ಶೆಟ್ಟಿ
ಅಜನೀಶ್ ಲೋಕನಾಥರ ಉತ್ತಮವಾದ ಸಂಗೀತವನ್ನು ಮೀರಿ ನಿಲ್ಲುವಂತೆ ಮೋಡಿ ಮಾಡುವುದು ಗಾಯನ ಹಾಗೂ ರಕ್ಷಿತರ ತುಂಟ ಸಾಹಿತ್ಯ. 'ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಕಟ್ಟಲಿ ಬಡವನಯ್ಯಾ? ಎನ್ನುತ್ತಲೇ ಗೀತೆ ಅನೇಕ ಅರ್ಥಗಳನ್ನು ಕಟ್ಟಿಕೊಡುತ್ತದೆ. ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ವಿಭಿನ್ನ.

ಯಾರಿಗೆ ಹೆಚ್ಚು ಮಾರ್ಕ್
ಕಾಕಿಗ್ ಬಣ್ಣ ಕಾಂತ
ಹಾಡಿರುವವರು: ಶ್ರೇಯಾ ಘೋಷಾಲ್
ಸಾಹಿತ್ಯ : ರಕ್ಷಿತ್ ಶೆಟ್ಟಿ
ಗೀತೆ ಕೇಳುತ್ತಾ ಕೇಳುತ್ತಾ ಯಾರಿಗೆ ಹೆಚ್ಚು ಮಾರ್ಕ್ಸ್, ಯಾರಿಗೆ ಹೆಚ್ಚು ಅಭಿನಂದನೆ ಸಲ್ಲಬೇಕು ಎಂಬ ಗೊಂದಲದಲ್ಲಿ ಮಂಡೆ ಬಿಸಿಯಾಗದಿದ್ದರೆ ಕೇಳಿ. ರಕ್ಷಿತ್ ರ ಸಾಹಿತ್ಯದ ಒಂದೊಂದು ಪದಕ್ಕೂ ಶ್ರೇಯಾ ಘೋಶಾಲ್ ಎಂಬ ಅದ್ಘುತ ಪ್ರತಿಭೆ ತಂದು ಕೊಟ್ಟಿರುವ ಜೀವ,ಮೆರುಗು, ಬಣ್ಣಕ್ಕೆ ಎಲ್ಲೂ ಭಂಗ ಬರದಂತೆ ಸೈಡಲ್ಲಿದ್ದುಕೊಂಡು ಮಜಾ ತೆಗೆದುಕೊಂಡಿರುವ ಅಜನೀಶರ ಸಂಗೀತ ಖುಷಿ ಕೊಡುತ್ತದೆ. ಕೊನೆಗೆ ಶ್ರೇಯಾಗೆ hats off ಹೇಳುತ್ತದೆ ಮನಸ್ಸು.

ಉಳಿದವರು ಕಂಡಂತೆ
ಉಳಿದವರು ಕಂಡಂತೆ
ಹಾಡಿರುವವರು : ಅಜನೀಶ್ ಲೋಕನಾಥ್
ಸಾಹಿತ್ಯ : ಸುನಿ
ಎಲ್ಲಾ ಗೀತೆಗಳ ನಂತರ ಉಳಿದುಕೊಂಡಂತೆ ಬರುವ ಈ ಗೀತೆಗೆ ಸುನಿಯವರ ಸಾಹಿತ್ಯ ಸಕ್ಕತ್ತಾಗಿಯೇ ಒದಗಿ ಬಂದಿದೆ.ಮಿಕ್ಕೆಲ್ಲಾ ಗೀತೆಗಳಲ್ಲಿ ಇನ್ನೇನಾದರೂ ಉಳಿದುಕೊಂಡಿದ್ದರೆ ತಗ್ಗೊಳ್ಳಿ ಎಂಬಂತಿದೆ ಈ ಗೀತೆ. ಸ್ವತ: ಅಜನೀಶ್ ಲೋಕನಾಥ್ ರ ಧ್ವನಿ ಭಿನ್ನವಾಗಿದ್ದು ಗೀತೆಗೆ ಪೂರಕವಾಗಿದೆ.

ಉಳಿದವರು ಕಂಡಂತೆ ಟೈಟಲ್ ಟ್ರ್ಯಾಕ್
ಉಳಿದವರು ಕಂಡಂತೆ
ಹಾಡಿರುವವರು : ಅಜನೀಶ್ ಲೋಕನಾಥ್, ರಕ್ಷಿತ್ ಶೆಟ್ಟಿ
ಸಾಹಿತ್ಯ : ಯೋಗರಾಜ್ ಭಟ್
"ಡೀಸಲ್ ಗಾಡಿ ಪೆಟ್ರೋಲ್ ಅಲ್ಲಿ ಓಡೊಲ್ವಂತೆ : ಟ್ರೈ ಮಾಡಿ ನೋಡೋಕೆ ಇವರಿಗೇನು ಧಾಡಿಯಂತೆ" ಎಂಬ ಯೋಗರಾಜ ಭಟ್ಟರ ಸಾಲು ಈ ಗೀತೆಗೆ ಹೇಳಿ ಮಾಡಿಸಿದಂತಿದೆ. ಸಾಹಿತ್ಯ, ಸಂಗೀತ, ಗಾಯನ ಎಲ್ಲದರಲ್ಲೂ ತುಂಟತನ, ಹೊಸತನ ಬೆರೆಸಿ ಟ್ರೈ ಮಾಡಿ ನೋಡಲಾಗಿದೆ ಹಾಗೂ ಅದರಿಂದಲೇ ಇಷ್ಟವೂ ಆಗುತ್ತದೆ. A Fitting finish to the album.


Click it and Unblock the Notifications











