ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿಗೆ 25 ಲಕ್ಷ ರೂಪಾಯಿ ಬಹುಮಾನ
ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ 57ನೇ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಸಂಗೀತ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನ ವಿಶ್ವದಾದ್ಯಂತ ಹಾರಿಸಿದ್ದಾರೆ.
ಪ್ರತಿಷ್ಟಿತ ಗ್ರ್ಯಾಮಿ ಪ್ರಶಸ್ತಿಯನ್ನ ಸ್ವೀಕರಿಸಿ ಬೆಂಗಳೂರಿಗೆ ವಾಪಸ್ಸಾಗಿರುವ ರಿಕ್ಕಿ ಕೇಜ್ ಗೆ ಇಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನ ಮಾಡಿದ್ದಾರೆ. ಸಿ.ಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸನ್ಮಾನ ಕಾರ್ಯಕ್ರಮ ನಡೆದಿದ್ದು, ಪತ್ನಿ ಸಮೇತ ರಿಕ್ಕಿ ಕೇಜ್ ಸನ್ಮಾನ ಸ್ವೀಕರಿಸಿದರು.
ಸರ್ಕಾರದ ಪರವಾಗಿ ರಿಕ್ಕಿ ಕೇಜ್ ರನ್ನ ಸನ್ಮಾನಿಸಿದ ಮುಖ್ಯಮಂತ್ರಿಗಳು, 25 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

''ರಿಕ್ಕಿ ಕೇಜ್ ರವರಿಗೆ ಗ್ರ್ಯಾಮಿ ಪ್ರಶಸ್ತಿ ಸಿಕ್ಕಿರೋದು ಸಂತಸವಾಗಿದೆ. ಸರ್ಕಾರದ ವತಿಯಿಂದ ರಾಜ್ಯದ ಜನರ ಪರವಾಗಿ ಅಭಿನಂದನೆಗಳನ್ನ ಕೋರುತ್ತೇನೆ. ಅವರ ಸಾಧನೆ ನಮ್ಮ ರಾಜ್ಯಕಷ್ಟೇ ಅಲ್ಲ. ಇಡೀ ಭಾರತಕ್ಕೆ ಕೀರ್ತಿ ತರುವ ಸಂಗತಿ. ನಮ್ಮ ರಾಜ್ಯದವರು ಎನ್ನುವುದು ನಮ್ಮ ಹೆಮ್ಮೆ'' ಅಂತ ಸಿ.ಎಂ.ಸಿದ್ದರಾಮಯ್ಯ ಹೇಳಿದ್ದಾರೆ. [ಬೆಂಗಳೂರಿನ ಸಂಗೀತಗಾರ ರಿಕ್ಕಿ ಕೇಜ್ ಗೆ ಗ್ರ್ಯಾಮಿ ಪ್ರಶಸ್ತಿ]

ಇದೇ ವೇಳೆ ಸಚಿವೆ ಉಮಾಶ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಭಾರತ ಮತ್ತು ಆಫ್ರಿಕಾ ಸಂಗೀತಗಾರರ ಜೊತೆಗಾರಿಕೆಯಲ್ಲಿ ಮೂಡಿಬಂದಿರುವ 'ವಿಂಡ್ಸ್ ಆಫ್ ಸಂಸಾರ' ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕುರಿತಾದ ಫ್ಯೂಶನ್ ಹಾಡುಗಳನ್ನ ಒಳಗೊಂಡಿರುವ ಆಲ್ಬಂ.
'ಬೆಸ್ಟ್ ನ್ಯೂ ಏಜ್ ಆಲ್ಬಂ' ವಿಭಾಗದಲ್ಲಿ ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿಯನ್ನ ಸ್ವೀಕರಿಸಿದ್ದರು. ರಿಕ್ಕಿ ಕೇಜ್ ಅವರ ಸಂಗೀತ ಸಂಯೋಜನೆಯ ಭಾಗವಾಗಿರುವ ಬೆಳಗಾವಿ ಮೂಲದ ಕೀರ್ತಿ ನಾರಾಯಣ್ ಅವರು ಕೀ ಬೋರ್ಡ್ ವಾದಕ ಹಾಗೂ ಸಂಗೀತ ಪರಿಕರ ಸಂಯೋಜನೆಯ ಹೊಣೆಹೊತ್ತಿರುವುದು ಆಲ್ಬಂನ ಮತ್ತೊಂದು ವಿಶೇಷ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











