Bombe Bombe Song: ಕಿವಿಗೂ ಇಂಪು ಕಣ್ಣಿಗೂ ತಂಪು: ದರ್ಶನ್- ರಚಿತಾ ಕೆಮೆಸ್ಟ್ರಿ ಸೂಪರ್
'ಧರಣಿ' ಹಾಡಿನ ಸದ್ದು ಕಮ್ಮಿ ಆಗುವುದಕ್ಕು ಮೊದ್ಲೆ 'ಕ್ರಾಂತಿ' ಚಿತ್ರದ 'ಬೊಂಬೆ ಬೊಂಬೆ' ಹಾಡು ಕೇಳೊಕೆ ಶುರುವಾಗಿದೆ. ಮೆಲೋಡಿ ಟ್ಯೂನು, ಸೋನು ವಾಯ್ಸ್ ಸಖತ್ ಕಿಕ್ ಕೊಡ್ತಿದೆ. ಇನ್ನು ಯೋಗರಾಜ್ ಭಟ್ರ ಸಾಹಿತ್ಯ ಮಜವಾಗಿದೆ. ಅಭಿಮಾನಿಗಳು ರಿಪೀಟ್ ಮೋಡ್ನಲ್ಲಿ ಸಾಂಗ್ ಕೇಳ್ತಾ ಕೇಳ್ತಾ ಹಾಡ್ತಿದ್ದಾರೆ.
ಬಹುನಿರೀಕ್ಷಿತ 'ಕ್ರಾಂತಿ' ಸಿನಿಮಾ ರಿಲೀಸ್ಗೆ ದಿನಗಣನೆ ಶುರುವಾಗಿದೆ. ಚಿತ್ರತಂಡ ಕೂಡ ಸಿನಿಮಾ ಪ್ರಚಾರ ಆರಂಭಿಸಿದೆ. ಮೈಸೂರಿನಲ್ಲಿ ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಿದ್ದ ಚಿತ್ರತಂಡ ಎರಡನೇ ಹಾಡನ್ನು ಹೊಸಪೇಟೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ಈ ಹಾಡಿನ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ರೊಮ್ಯಾಂಟಿಕ್ ಸಾಂಗ್ನಲ್ಲಿ ದರ್ಶನ್ ಹಾಗೂ ನಾಯಕಿ ರಚಿತಾ ರಾಮ್ ಮೋಡಿ ಮಾಡಿದ್ದಾರೆ.
'ಕ್ರಾಂತಿ' ಚಿತ್ರದಲ್ಲಿ ಒಂದಕ್ಕಿಂತ ಒಂದು ಸಾಂಗ್ ಸೂಪರ್ ಆಗಿದೆ. ಥೀಮ್ ಸಾಂಗ್ ನಂತರ ನಾಯಕ-ನಾಯಕಿಯ ಡ್ಯುಯೆಟ್ ಸಾಂಗ್ ಬಂದಿದೆ. ಭೂಷಣ್ ಮಾಸ್ಟರ್ ಕೊರಿಯೋಗ್ರಫಿ ಇದೆ. ಸದ್ಯ ಸಣ್ಣ ಸಣ್ಣ ಝಲಕ್ ಜೊತೆಗೆ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದೆ.

ತ್ರಿಮೂರ್ತಿಗಳ ಸಂಗಮ
ಹರಿಕೃಷ್ಣ ಸಂಗೀತದಲ್ಲಿ ಯೋಗರಾಜ್ ಭಟ್ರು ಬರೆದ ಹಾಡನ್ನು ಸೋನು ನಿಗಮ್ ಹಾಡಿ ಈ ಹಿಂದೆ ಗೆದ್ದಿದ್ದರು. ಈ ಮೂವರು ಮತ್ತೊಮ್ಮೆ 'ಕ್ರಾಂತಿ' ಚಿತ್ರದ 'ಬೊಂಬೆ ಬೊಂಬೆ' ಸಾಂಗ್ಗಾಗಿ ಜೊತೆಯಾಗಿದ್ದಾರೆ. ಜೊತೆಗೆ ಹಳೇ ಮ್ಯಾಜಿಕ್ ರಿಪೀಟ್ ಮಾಡಿದ್ದಾರೆ. ಕೇಳ್ತಾ ಕೇಳ್ತಾ ಸಾಂಗ್ ನಿಧಾನವಾಗಿ ಆವರಿಸಿಕೊಳ್ಳುತ್ತದೆ. 'ಹೃದಯ ಒಂಟಿ ಕುಪ್ಪಲು, ಅದಕ್ಕೆ ಕಾಲು ಇಟ್ಟಳು' ಹುಕ್ ಲೈನ್ ಪದೇ ಪದೇ ಗುನುಗುವಂತಿದೆ.

ದರ್ಶನ್-ರಚ್ಚು ಕೆಮಿಸ್ಟ್ರಿ ಸೂಪರ್
ಸಿಕ್ಕಾಪಟ್ಟೆ ಅದ್ಧೂರಿ ಸೆಟ್ನಲ್ಲಿ 'ಬೊಂಬೆ ಬೊಂಬೆ' ಸಾಂಗ್ ಶೂಟ್ ಮಾಡಿದ್ದಾರೆ. ಒಂದಷ್ಟು ಡ್ಯಾನ್ಸರ್ಸ್ ಜೊತೆಗೆ ರಚಿತಾ ರಾಮ್ ಸುತ್ತಾ ದರ್ಶನ್ ಸುತ್ತಾಡಿದ್ದಾರೆ. ಇಬ್ಬರು ಸಿಂಪಲ್ ಸ್ಟೆಪ್ಸ್ ಹಾಕಿ ರಂಜಿಸಿದ್ದಾರೆ. ರಚ್ಚು ಸೀರೆಗಳಲ್ಲಿ ಕಂಗೊಳಿದರೆ, ದರ್ಶನ್ ವೆರೈಟಿ ವೆರೈಟಿ ಕಾಸ್ಟ್ಯೂಮ್ಸ್ನಲ್ಲಿ ಸ್ಟೈಲಿಶ್ ಲುಕ್ನಲ್ಲಿ ಮಿಂಚಿದ್ದಾರೆ. ಸಂಪೂರ್ಣ ಹಾಡು ಕಣ್ಣಿಗೆ ಹಬ್ಬ ಎನ್ನುವಂತಿದೆ. ಲಕ್ಷ ಲಕ್ಷ ವೀವ್ಸ್, ಲೈಕ್ಸ್ ಗಿಟ್ಟಿಸಿಕೊಳ್ತಿದೆ.

ಗಮನ ಸೆಳೆಯುವ ದರ್ಶನ್ ಸ್ಟೆಪ್ಸ್
ನಟ ದರ್ಶನ್ ಮೊದಲಿನಿಂದಲೂ ನನಗೆ ಡ್ಯಾನ್ಸ್ ಬರೊಲ್ಲ ಎಂದು ಹೇಳುತ್ತಾ ಬಂದಿದ್ದರು. ಆದರೆ 'ರಾಬರ್ಟ್' ಚಿತ್ರದಲ್ಲಿ ಬೊಂಬಾಟ್ ಸ್ಟೆಪ್ಸ್ ಹಾಕಿ ಅಭಿಮಾನಿಗಳ ಮನಗೆದ್ದಿದ್ದರು. ಆ ಚಿತ್ರದಲ್ಲಿ ದರ್ಶನ್ನ ಕುಣಿಸಿದ್ದ ಭೂಷಣ್ ಮಾಸ್ಟರ್ 'ಕ್ರಾಂತಿ' ಚಿತ್ರದಲ್ಲೂ ಕುಣಿಸಿದ್ದಾರೆ. 'ಬೊಂಬೆ ಬೊಂಬೆ' ಹಾಡಿನಲ್ಲಿ ಕೊರಿಯೋಗ್ರಫಿ ಹೊಸದಾಗಿದೆ. ಕಿವಿಗೆ ಇಂಪೆನಿಸುವ ಹಾಡು ಕಣ್ಣಿಗೆ ತಪ್ಪು ಎನಿಸುವಂತೆ ಕಟ್ಟಿಕೊಟ್ಟಿದ್ದಾರೆ.

ಜನವರಿ 26ಕ್ಕೆ 'ಕ್ರಾಂತಿ' ತೆರೆಗೆ
ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಚಿತ್ರಕ್ಕೆ ಶೈಲಜಾ ನಾಗ್ ಹಾಗೂ ಬಿ. ಸುರೇಶ ಬಂಡವಾಳ ಹಾಕಿದ್ದಾರೆ. ದರ್ಶನ್, ರಚಿತಾ ರಾಮ್ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಅಚ್ಯುತ್ಕುಮಾರ್ ಸೇರಿದಂತೆ ಅನುಭವಿ ಕಲಾವಿದರು ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ಗೆ ಪ್ಲ್ಯಾನ್ ನಡೀತಿದೆ.


Click it and Unblock the Notifications











