ದರ್ಶನ್ 'ಬೃಂದಾವನ' ಹಾಡು ಯೂಟ್ಯೂಬ್ ಗೆ ಲಗ್ಗೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಕೌಟುಂಬಿಕ ಕಥಾಹಂದರದ ಚಿತ್ರ 'ಬೃಂದಾವನ'. ಕೆ.ಮಾದೇಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಹಾಡಿನ ತುಣುಕೊಂದು ಈಗ ಯೂಟ್ಯೂಬ್ ಗೆ ಲಗ್ಗೆ ಹಾಕಿದೆ. ಶುಕ್ರವಾರ, ಆಗಸ್ಟ್ 30ರಂದು ಯೂಟ್ಯೂಬ್ ಸೇರಿರುವ ಈ ಹಾಡು ನಿಧಾನಕ್ಕೆ ಟೇಕಾಫ್ ಆಗುತ್ತಿದೆ.
ವಿ ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಈ ಹಾಡಿನಲ್ಲಿ ದರ್ಶನ್ ಜೊತೆ ನಾಯಕಿಯರಾದ ಕಾರ್ತಿಕಾ ನಾಯರ್, ಮಿಲನಾ ಹಾಗೂ ಸಾಯಿಕುಮಾರ್ ಸೇರಿದಂತೆ ಹಲವರು ಈ ಗ್ರೂಪ್ ಸಾಂಗ್ ನಲ್ಲಿ ಹೆಜ್ಜೆಹಾಕಿದ್ದಾರೆ.
"ಅಣ್ಣ-ತಮ್ಮ ಒಂದೆ ಬಳ್ಳಿ ಹೂವು ಎಂದು ನಾವು ಬದುಕೋದೆ ಚೆಂದ... ಮನೆ ತುಂಬ ನಗು ಎಂಬ ತಂಪು ಗಾಳಿ ಇದ್ರೆ ತಾನೆ ಚೆಂದ.. ಧೀಂ ತಕದಿಮಿ ಧೀಂ ತಕಧಿಮಿ ಬೃಂದಾವನ... ಶ್ರೀಕೃಷ್ಣ ಕಾಲಿಟ್ಟ ಕಡೆಯಲ್ಲಾ ಬೃಂದಾವನ..." ಎಂದು ಎಲ್ಲರೂ ಹೆಜ್ಜೆ ಹಾಕಿದ್ದಾರೆ.
ಕೇವಲ ಒಂದು ನಿಮಿಷ ಆರು ಸೆಕೆಂಡ್ ಕಾಲಾವಧಿಯ ಹಾಡಿನ ತುಣುಕಿನಲ್ಲಿ ಹರಿಕೃಷ್ಣ ಭರ್ಜರಿ ಸಂಗೀತದಲ್ಲಿ ಕೊಚ್ಚಿ ಹಾಕಿದ್ದಾರೆ. ಚಿತ್ರಕ್ಕೆ ಕೆ.ವಿ.ರಾಜು ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರಮೇಶ್ ಬಾಬು ಅವರ ಛಾಯಾಗ್ರಹಣವಿದೆ.
ಪಾತ್ರವರ್ಗದಲ್ಲಿ ಜೈಜಗದೀಶ್, ದೊಡ್ಡಣ್ಣ, ಸಾಧು ಕೋಕಿಲಾ, ಸಂಪತ್, ಕುರಿ ಪ್ರತಾಪ್, ಕೇಡಿ ವೆಂಕಟೇಶ್, ವೀಣಾ ಸುಂದರ್ ಮುಂತಾದ ಕನ್ನಡ ಚಿತ್ರಗಳ ರೆಗ್ಯುಲರ್ ಕಲಾವಿದರಿದ್ದಾರೆ. ಬಿಗ್ ಬಜೆಟ್ ಚಿತ್ರವಾಗಿರುವ 'ಬೃಂದಾವನ' ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











