Exclusive: 'ಅಣ್ಣಾವ್ರ ಮೊಮ್ಮಗನ ಚಿತ್ರಕ್ಕೆ ಇದೆಲ್ಲಾ ಬೇಕಿತ್ತಾ?' 'ಶಿವ 143' ಸಾಂಗ್ ನೋಡಿ ನೆಟ್ಟಿಗರಿಂದ ಆಕ್ರೋಶ!
ಧೀರೇನ್ ರಾಮ್ಕುಮಾರ್ ನಟನೆಯ 'ಶಿವ 143' ಸಿನಿಮಾ ನಾಳೆ (ಆಗಸ್ಟ್ 26) ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗಪ್ಪಳಿಸ್ತಿದೆ. ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಚಿತ್ರದ ಐಟಂ ಸಾಂಗ್ ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡುವ ಪ್ರಯತ್ನ ನಡೆದಿದೆ. ಆದರೆ ಈ ಸ್ಪೆಷಲ್ ಸಾಂಗ್ನಲ್ಲಿರುವ ಅದೊಂದು ಸಾಲು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಡಾ. ರಾಜ್ಕುಮಾರ್ ಮೊಮ್ಮಗ ಧೀರೇನ್ ರಾಮ್ಕುಮಾರ್ ಜೋಡಿಯಾಗಿ ಮಾನ್ವಿತಾ ಕಾಮತ್ ನಟಿಸಿದ್ದಾರೆ.
ಈಗಾಗಲೇ 'ಶಿವ 143' ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ನಟ ಧೀರೇನ್ ರಾಮ್ಕುಮಾರ್ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡಿ ಭರ್ಜರಿ ಪ್ರಚಾರ ಮಾಡಿ ಬಂದಿದ್ದಾರೆ. ಸದ್ಯ ರಿಲೀಸ್ ಆಗಿರುವ 'ನನ್ತಕ್ ಬಾ' ಸಾಂಗ್ನಲ್ಲಿ ನಮ್ರಿತಾ ಮಲ್ಲ ಬಿಂದಾಸ್ ಆಗಿ ಕುಣಿದಿದ್ದಾರೆ. ಆಕೆಯ ಜೊತೆ ಧೀರೇನ್ ಹಾಗೂ ಹಾಸ್ಯ ನಟ ಸಾಧು ಕೋಕಿಲ ಕೂಡ ಕುಣಿದು ಕುಪ್ಪಳಿಸಿದ್ದಾರೆ. ಅರ್ಜುನ್ ಜನ್ಯಾ ಮ್ಯೂಸಿಕ್ ಮಾಡಿರುವ ಸಾಂಗ್ಗೆ ಸ್ವತಃ ನಿರ್ದೇಶನ ಅನಿಲ್ ಕುಮಾರ್ ಲಿರಿಕ್ಸ್ ಬರೆದಿದ್ದಾರೆ. ತೆಲುಗಿನ ಗಾಯಕಿ ಮಂಗ್ಲಿ ಮಾದಕವಾಗಿ ಸಾಂಗ್ ಹಾಡಿದ್ದಾರೆ.
'ನನ್ತಕ್ ಬಾ' ಸ್ಪೆಷಲ್ ಸಾಂಗ್ನಲ್ಲಿ 'ವೈದ್ಯೋ ನಾರಾಯಣೋ ಹರಿಃ' ಎನ್ನುವ ಸಾಲನ್ನು ಬಳಸಿಕೊಂಡಿರುವ ಕೆಲವರಿಗೆ ಬೇಸರ ತಂದಿದೆ. ದ್ವಂದ್ವಾರ್ಥಗಳೇ ತುಂಬಿರುವ ಈ ಸಾಂಗ್ನಲ್ಲಿ ಈ ಸಾಲನ್ನು ಯಾಕೆ ಬಳಸಿಕೊಂಡಿದ್ದೀರಾ ಎಂದು ಕೇಳುತ್ತಿದ್ದಾರೆ. ಪುರಾಣಗಳಲ್ಲಿ ವೈದ್ಯರ ಮಹತ್ವವನ್ನು ಸಾರಿ ಹೇಳುವ ಸಮಯದಲ್ಲಿ ಈ ಶ್ಲೋಕ ಬರುತ್ತದೆ. "ಶರೀರೇ ಜರ್ಜರಿಭೂತೆ ವ್ಯಾಧಿಗ್ರಸ್ತೇ ಕಲೆಬರೆ, ಔಷಧಂ ಜಾಹ್ನವಿತೋಯಂ ವೈದ್ಯೋ ನಾರಾಯಣೋ ಹರಿಃ". ಈ ಶ್ಲೋಕದ ಅರ್ಥ "ಮಾನವನ ದೇಹ ರೋಗಗ್ರಸ್ತಗೊಂಡಾಗ ಪವಿತ್ರ ಗಂಗಾ ನೀರಿನಂತಹ ಔಷಧಿ ನೀಡುವ ವೈದ್ಯನು ಭಗವಂತ ನಾರಾಯಣನಿಗೆ ಸಮ".

ಮನುಷ್ಯ ಅನಾರೋಗ್ಯ ಎಂದಾಕ್ಷಣ ಮೊದಲು ಹುಡುಕಿಕೊಂಡು ಹೋಗುವುದು ವೈದ್ಯರನ್ನು. ಇಂತಹ ವೈದ್ಯರನ್ನು ಭಗವಂತ ನಾರಾಯಣನಿಗೆ ಹೋಲಿಸಲಾಗಿದೆ. ಈ ಶ್ಲೋಕ ವೈದ್ಯಕೀಯ ಕ್ಷೇತ್ರದವರಿಗೆ ಬಹಳ ಹೆಮ್ಮೆ ತರುವಂತಹದ್ದು. ಆದರೆ ಈ ಶ್ಲೋಕವನ್ನು ಈ ರೀತಿ ಐಟಂ ಸಾಂಗ್ಗೆ ಬಳಸಿಕೊಂಡಿರುವುದು ತಪ್ಪು, ಕೂಡಲೇ ಅದನ್ನು ತೆಗೆಯಿರಿ ಎಂದು ಕೆಲವರು ಆಗ್ರಹಿಸಿದ್ದಾರೆ. 'ವೈದ್ಯೋ ನಾರಾಯಣೋ ಹರಿಃ' ಸಾಲನ್ನು 'ಪ್ರೇಮಂ ಪೂಜ್ಯಂ' ಹಾಗೂ 'ಭಜರಂಗಿ-2' ಸಿನಿಮಾ ಸಾಂಗ್ಗಳಲ್ಲೂ ಬಳಸಿಕೊಂಡಿದ್ದರು. ಅದರಲ್ಲಿ ವೈದ್ಯರ ಮಹತ್ವವನ್ನು ಸಾರಿ ಹೇಳಿದ್ದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ 'ಶಿವ 143' ಚಿತ್ರದ ಐಟಂ ಸಾಂಗ್ನಲ್ಲಿ ಬಳಸಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಕೆಲವರಂತೂ ಅಣ್ಣಾವ್ರ ಮೊಮ್ಮಗನ ಸಿನಿಮಾದಲ್ಲಿ ಇದೆಲ್ಲಾ ಏನು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವೇಶ್ಯಾಗ್ರಹದಲ್ಲಿ ಈ ಸಾಂಗ್ ಮೂಡಿ ಬರುವಂತೆ ಕಾಣಿಸ್ತಿದೆ. ಆರಂಭದಲ್ಲೇ 'ಇಂಗ್ಲಿಷ್ ಮೆಡಿಸನ್ ಬಂದು, ನಾಟಿ ವಿದ್ಯೆ, ನಾನಾ ವಿದ್ಯೆ ಮೂಲೆ ಸೇರಿರುವ ಹೊತ್ತಲ್ಲಿ, ನಾನು ವಿದ್ಯೆ ಕಲಿತು ಸಮಾಜ ಸೇವೆ ಮಾಡ್ತೀನಿ. ಹೆಂಡತಿ ಬೈದಾಗ ನನ್ತಕ್ ಬಾ' ಅನ್ನುವ ಸಾಲುಗಳು ಬರುತ್ತದೆ. ಮುಂದೆ 'ವೈದ್ಯೋ ನಾರಾಯಣೋ ಹರಿಃ', ನಿನ್ ದುಡಿದಿದ್ದು ಹುಂಡಿಗೆ ಸುರಿ' ಎಂದು ಸಾಹಿತ್ಯ ಸಾಗುತ್ತದೆ. ಈ ಬಗ್ಗೆ ಚಿತ್ರತಂಡ ಏನ್ ಹೇಳುತ್ತದೋ ಕಾದು ನೋಡಬೇಕು.


Click it and Unblock the Notifications











