ಉಪೇಂದ್ರ ಪರಂಪರೆಗೆ ಮಧುಚಂದ್ರ ಈಗ ರಾಯಭಾರಿ

ತಮ್ಮ ಚೊಚ್ಚಲು ಚಿತ್ರವನ್ನು ನಿರ್ದೇಶನ ಮಾಡಿರುವ ಮಧುಚಂದ್ರ, ಚಿತ್ರದ ಆಡಿಯೋ ಬಿಡುಗಡೆಯನ್ನು ಕಳೆದ ಭಾನುವಾರ (17 ಜೂನ್ 2012) ಚಿತ್ರಕ್ಕೊಂದು ಹೆಸರೂ ಇಲ್ಲದೇ ಮಾಡಿ ಮುಗಿಸಿದ್ದಾರೆ. ಪತ್ರಿಕೆಗಳಲ್ಲಿ ಪದಬಂಧ ನೀಡಿ ಜನರೇ ತನ್ನ ಚಿತ್ರದ ಹೆಸರು ಕಂಡುಹಿಡಿಯಿರಿ ಎಂದು ಜಾಹೀರಾತು ನೀಡಲಿದ್ದಾರೆ ಮಧುಚಂದ್ರ. ಇಷ್ಟೇ ಅಲ್ಲ, ಚಿತ್ರದ ನಾಯಕ ಯಾರು ಎಂಬದೂ ಸಸ್ಪೆನ್ಸ್!
ಚಿತ್ರ ಬಿಡುಗಡೆಯಾದ ದಿನ ಮಾರ್ನಿಂಗ್ ಮೊದಲ ಶೋನಲ್ಲಿ ಚಿತ್ರದ ಹೆಸರು ಹಾಗೂ ನಾಯಕನಟನ ಹೆಸರನ್ನು ಬಹಿರಂಗಗೊಳಿಸುತ್ತೇನೆ ಎಂದಿದ್ದಾರೆ ಮಧುಚಂದ್ರ. ಈ ಚಿತ್ರದಲ್ಲಿ ಹೆಸರಾಂತ ನಾಯಕ ನಟ ಅಭಿನಯಿಸುತ್ತಿಲ್ಲ ಎಂಬ ಗುಟ್ಟು ಈಗಾಗಲೇ ರಟ್ಟಾಗಿದೆ. ಹಾಗಿದ್ದ ಮೇಲೆ ಇಷ್ಟೆಲ್ಲಾ ಡವ್ ಯಾಕೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ.
ಗುರು ಉಪೇಂದ್ರರ ದಾರಿಯನ್ನೇ ಅನುಸರಿಸುತ್ತಿದ್ದಾರೆ ಶಿಷ್ಯ ಮಧು ಎನ್ನುತ್ತಿದೆ ಗಾಂಧಿನಗರ. ಸೂಪರ್ ಚಿತ್ರಕ್ಕೆ 'ಕೈ' ಚಿಹ್ನೆ ತೋರಿಸಿ ನೀವೇ ಹೆಸರಿಟ್ಟುಕೊಳ್ಳಿ ಎಂದಿದ್ದರು ರಿಯಲ್ ಸ್ಟಾರ್ ಉಪೇಂದ್ರ. ಕೊನೆಗೆ ಸಾಕಾಗಿ ಮಾಧ್ಯಮದವರೇ ಅದಕ್ಕೆ 'ಸೂಪರ್' ಅಂತ ಹೆಸರಿಟ್ಟುಕೊಂಡು ಹಾಗೇ ಹೇಳಿದರು, ಬರೆದರು. ಗುರು ಪರಂಪರೆ ಮುಂದಕ್ಕೆ ಚಲಿಸಿ ಮಧುಚಂದ್ರರವರೆಗೆ ಮುಂದುವರಿದಿದೆ. ಇಷ್ಟೇ ಅಲ್ಲ, ಈ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದು ಸಾಕ್ಷಾತ್ ಉಪೇಂದ್ರ!
ಒಟ್ಟಿನಲ್ಲಿ ಸಿನಿಮಾ ಬಿಡುಗಡೆ ನಂತರವಷ್ಟೇ ಮಧುಚಂದ್ರರ ಸಿನಿಮಾಕ್ಕೊಂದು ಹೆಸರು ಗತಿ ಎಂಬಂತಾಗಿದೆ. ಉಪೇಂದ್ರರ ಗಿಮಿಕ್ ಸೂತ್ರದ ಮೂಲಕ ಇನ್ನೊಂದು ಗಾಳಿಪಟವೂ ಹಾರಾಡಲು ಹೊರಟಿದೆ. ಸಿನಿಮಾ ಹೆಸರನ್ನು ಜನರು ಅದೇನೆಂದು ಇಡುತ್ತಾರೋ! ಆದರೆ ನಿರ್ದೇಶಕರ ಹೆಸರು 'ಮಧುಚಂದ್ರ' ಎನ್ನುವುದೇ ಎಲ್ಲಕ್ಕಿಂತ ಚೆನ್ನಾಗಿದೆ, ಏನಂತೀರಾ? ಅಂದಹಾಗೆ ಈ 'ಹನಿಮೂನ್' ನಿರ್ದೇಶರು ಬಿಡುಗಡೆ ದಿನಾಂಕವನ್ನೂ ಇನ್ನೂ ಘೋಷಿಸಿಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications











