ಅಣ್ಣಾವ್ರ ಹುಟ್ಟುಹಬ್ಬ ವಿಶೇಷ ರಸಮಂಜರಿ ಕಾರ್ಯಕ್ರಮ
ವರನಟ, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ (ಏಪ್ರಿಲ್ 24) ಇನ್ನು ಕೇವಲ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈ ಬಾರಿಯ ಹುಟ್ಟುಹಬ್ಬಕ್ಕೆ ಹಲವಾರು ಕಾರ್ಯಕ್ರಮಗಳು ಅಭಿಮಾನಿ ದೇವರುಗಳಿಗೆ ಕಾದಿವೆ.
ಪ್ರತಿವರ್ಷ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ರಕ್ತದಾನ, ನೇತ್ರದಾನದಂತಹ ಮಹತ್ವದ ಕೆಲಸಗಳಲ್ಲಿ ಭಾಗಿಯಾಗುತ್ತಿರುವುದು ಗೊತ್ತೇ ಇದೆ. ಈ ಬಾರಿಯ ಹುಟ್ಟುಹಬ್ಬವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲು ಅಸಹಾಯಕರ ಆಸರೆಯ 'ಸಮರ್ಥನಂ' ಅಂಗವಿಕಲರ ಸ್ವಯಂ ಸೇವಾ ಸಂಸ್ಥೆ ಮುಂದಾಗಿದೆ. [ಅಣ್ಣಾವ್ರ ಹುಟ್ಟುಹಬ್ಬಕ್ಕಿಲ್ಲ ಶಿವಣ್ಣನ 'ಬಾದ್ ಷ'..!?]
ಕಳೆದ 18 ವರ್ಷಗಳಿಂದ ಸಮರ್ಥನಂ ಸಂಸ್ಥೆ ಅಂಧರಿಗೆ, ದೈಹಿಕವಾಗಿ ಅಂಗವೈಕಲ್ಯ ಇರುವವರಿಗೆ ಆಶ್ರಯ ನೀಡುತ್ತಿದೆ. ಈ ಬಾರಿ ರಾಜ್ ಹುಟ್ಟುಹಬ್ಬದ ನಿಮಿತ್ತ ನಿಧಿ ಸಂಗ್ರಹಿಸಲು 'ಡಾ.ರಾಜ್ ಕುಮಾರ್ ರಸಮಂಜರಿ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. [ಡಾ. ರಾಜ್ ನಟಿಸಿದಂತಹ ಕೌಟುಂಬಿಕ ಚಿತ್ರಗಳು ಮರಳಿ ಬರಬಹುದೇ?]

ಈ ಕಾರ್ಯಕ್ರಮದ ಮೂಲಕ ಸಂಗ್ರಹವಾದ ಹಣವನ್ನು ವಿಕಲಚೇತನರ ಕಲ್ಯಾಣಕ್ಕಾಗಿ ಸಂಸ್ಥೆ ಬಳಸಿಕೊಳ್ಳಲಿದೆ. ಈ ಮಹತ್ತರ ಕಾರ್ಯಕ್ಕೆ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರು ಕೈಜೋಡಿಸಿ ತಮ್ಮ ಸಂಪೂರ್ಣ ಸಹಾಕವನ್ನು ನೀಡಿದ್ದಾರೆ.
ಸಂಗೀತ ಮಾಂತ್ರಿಕ ಇಳಯರಾಜಾ, ಡಾ. ಕೆಜೆ ಯೇಸುದಾಸ್, ವಾಣಿ ಜಯರಾಮ್, ಎಸ್ ಜಾನಕಿ, ಮಂಜುಳಾ ಗುರುರಾಜ್ ಸಂಗೀತ ಸಂಜೆಗೆ ಮೆರುಗು ನೀಡಲಿದ್ದಾರೆ. ಅಣ್ಣಾವ್ರ ಹಾಡುಗಳನ್ನು ಹಾಡಿ ಅಭಿಮಾನಿ ದೇವರುಗಳನ್ನು ರಂಜಿಸಲಿದ್ದಾರೆ.
ಈ ವಿಶೇಷ ಸಂಗೀತ ಕಾರ್ಯಕ್ರಮಕ್ಕೆ ಡಾ.ಬಿ ಸರೋಜಾದೇವಿ, ರೂಪಿಣಿ, ಶ್ರೀನಗರ ಕಿಟ್ಟಿ, ಪಂಕಜ್, ರಿಷಿಕಾ ಸಿಂಗ್, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವು ಸೆಲೆಬ್ರಿಟಿಗಳು ಪಾಲ್ಗೊಳ್ಳುತ್ತಿದ್ದು ಇನ್ನಷ್ಟು ಮೆರುಗು ನೀಡಲಿದ್ದಾರೆ. ಮಾಲೂರು ಶ್ರೀನಿವಾಸ್ ಅವರ ನೃತ್ಯ ಸಂಯೋಜನೆಯಲ್ಲಿ ಇವರು ಹೆಜ್ಜೆ ಹಾಕಲಿದ್ದಾರೆ.
ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ವಿ ಹರಿಕೃಷ್ಣ, ಗುರುಕಿರಣ್ ಸಂಗೀತ ಚಿತ್ರಕ್ಕಿರುತ್ತದೆ. ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಕಾರ್ಯಕ್ರಮ ಏಪ್ರಿಲ್ 25ರ ಸಂಜೆ 5.30ರಿಂದ ಆರಂಭ. ಪ್ರವೇಶ ಶುಲ್ಕ ರು.500ರಿಂದ ರು.5,000ತನಕ ನಿಗದಿಪಡಿಸಲಾಗಿದೆ.
ವಿಐಪಿ ಡೋನರ್ ಪಾಸ್ (ರು.5000), ಪ್ಲಾಟಿನಂ (ರು.2000), ಗೋಲ್ಡ್ (ರು.1000) ಹಾಗೂ ಸಿಲ್ವರ್ (ರು.500) ಪಾಸ್ ಗಳನ್ನು ಬುಕ್ ಮೈ ಶೋನಲ್ಲಿ ಕಾದಿರಿಸಬಹುದು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











