ಕರುನಾಡ ಚಕ್ರವರ್ತಿ 'ಶಿವ'ಣ್ಣ ಮೆಚ್ಚಿದ 'ರುದ್ರತಾಂಡವ'
ರೀಲ್ ಮೇಲೆ ಸೆಂಚುರಿ ಬಾರಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಹೊಸಬರನ್ನ ಹುರಿದುಂಬಿಸುವುದರಲ್ಲಿ ಎತ್ತಿದ ಕೈ. ಇಂಡಸ್ಟ್ರಿಗೆ ಯಾರೇ ಕಾಲಿಟ್ಟರೂ, ಯುವ ಪ್ರತಿಭೆಗಳಿಗೆ ಸಪೋರ್ಟ್ ಮಾಡುವ ಶಿವಣ್ಣ ಇದೀಗ 'ರುದ್ರತಾಂಡವ' ನಿರ್ದೇಶಕರನ್ನ ಹಾಡಿ ಹೊಗಳಿದ್ದಾರೆ.
''ನಿರ್ದೇಶಕ ಗುರು ದೇಶಪಾಂಡೆ ಒಳ್ಳೊಳ್ಳೆ ಸಿನಿಮಾಗಳನ್ನ ಮಾಡುತ್ತಿದ್ದಾರೆ. ಅವರಿಗೆ ಟೈಟಲ್ ವಿಚಾರದಲ್ಲಿ ಒಳ್ಳೆ ಟೇಸ್ಟ್ ಇದೆ. ಅವರ ಎಲ್ಲಾ ಚಿತ್ರಗಳ ಟೈಟಲ್ ನಂಗೆ ಇಷ್ಟ. ಮಾಸ್ ಕಮ್ ಪವರ್ ಫುಲ್ ಟೈಟಲ್ ಗಳನ್ನ ಚೆನ್ನಾಗಿ ಸೆಲೆಕ್ಟ್ ಮಾಡುತ್ತಾರೆ'', ಅಂತ ಶಿವಣ್ಣ ಗುರು ದೇಶಪಾಂಡೆ ಮೇಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಸಲಿಗೆ ಆಗಿದ್ದು ಇಷ್ಟೆ, ಇತ್ತೀಚೆಗಷ್ಟೇ ಗುರು ದೇಶಪಾಂಡೆ ನಿರ್ದೇಶನದ 'ರುದ್ರತಾಂಡವ' ಚಿತ್ರದ ಆಡಿಯೋ ರಿಲೀಸ್ ಆಯ್ತು. ಹಾಗೆ, 'ರುದ್ರತಾಂಡವ' ಚಿತ್ರದ ಧ್ವನಿಸುರುಳಿಯನ್ನ ಹೊರತಂದಿದ್ದು ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್.
'ರುದ್ರತಾಂಡವ' ಹಾಡುಗಳನ್ನ ಕೇಳಿ ತಲೆದೂಗಿದ ಶಿವಣ್ಣ, ಆಡಿಯೋ ರಿಲೀಸ್ ಮಾಡುವುದಕ್ಕೆ ಒಪ್ಪಿಕೊಂಡರಂತೆ. ಅದ್ರಲ್ಲೂ, ವಿ.ಹರಿಕೃಷ್ಣ ಮ್ಯೂಸಿಕ್ ನಲ್ಲಿ ಅಪ್ಪು ದನಿಯಾಗಿರುವ ಹಾಡು, ಶಿವಣ್ಣನಿಗೆ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ. ['ರುದ್ರತಾಂಡವ'ದಲ್ಲಿ ಪವರ್ ಸ್ಟಾರ್ ಪುನೀತ್ ಗಾನಸುಧೆ]

ಹಾಗೆ, ಅದಾಗಲೇ ಗುರು ದೇಶಪಾಂಡೆ ನಿರ್ದೇಶನದ 'ವಾರಸ್ದಾರ, ರಾಜಾಹುಲಿ' ಸಿನಿಮಾಗಳನ್ನ ನೋಡಿ ಮೆಚ್ಚಿಕೊಂಡಿರುವ ಶಿವಣ್ಣ, 'ರುದ್ರತಾಂಡವ' ಹಾಡುಗಳನ್ನ ಹೊರತರುವುದಕ್ಕೆ ಮುಂದೆ ಬಂದಿದ್ದಾರೆ. [ಚಿರು, ರಾಧಿಕಾ 'ರುದ್ರ ತಾಂಡವ' ಭರ್ಜರಿ ಕ್ಲೈಮಾಕ್ಸ್]
ನಿರ್ದೇಶಕ ಗುರು ದೇಶಪಾಂಡೆ ಟೇಸ್ಟ್ ಗೆ ಫಿದಾ ಆಗಿರುವ ಶಿವಣ್ಣ ಸದ್ಯಕ್ಕೆ ಅವರ ಮೇಲೆ ನುಡಿಮುತ್ತುಗಳನ್ನ ಉದುರಿಸಿದ್ದಾರೆ. ಇದರ ಅರ್ಥ ಸದ್ಯದಲ್ಲೇ ಶಿವಣ್ಣನ ಹೊಸ ಸಿನಿಮಾಗೆ ನಿರ್ದೇಶಕ ಗುರು ದೇಶಪಾಂಡೆ ಆಕ್ಷನ್ ಕಟ್ ಹೇಳ್ತಾರೆ ಅಂತ ಗಾಂಧಿನಗರ ಈಗಾಗಲೇ ಲೆಕ್ಕಾಚಾರ ಹಾಕುತ್ತಿದೆ. ಅದನ್ನ ನಿಜ ಮಾಡುವುದು ಬಿಡುವುದು ಗುರು ದೇಶಪಾಂಡೆ ಕೈಯಲ್ಲಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











