ಗೀತಸಾಹಿತಿ 'ವಿ ನಾಗೇಂದ್ರ ಪ್ರಸಾದ್' ಸಂದರ್ಶನ

ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿನ 1000 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿರುವ ನಾಗೇಂದ್ರ ಪ್ರಸಾದ್, 'ಸತ್ಯ' ಚಿತ್ರದ 'ಹುಟ್ಟು ಎರಡಕ್ಷರ...' ಹಾಡಿಗೆ 'ರಾಜ್ಯ ಪ್ರಶಸ್ತಿ' ಪಡೆದವರು. ದೀಪಕ್ ನಟನೆಯ 'ಶಿಷ್ಯ' ಹಾಗೂ 'ಅಂಬಿ' ಚಿತಗಳಿಗೆ ಸಂಗೀತ ನೀಡಿದ್ದಾರೆ. ಕಿಚ್ಚ ಸುದೀಪ್ ನಟನೆಯ 'ನಲ್ಲ' ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸೂಪರ್ ಹಿಟ್ 'ಶ್ರೀ ಮಂಜುನಾಥ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಇಂಥ ಬಹುರೂಪಿ ಬರಹಗಾರ ನಾಗೇಂದ್ರ ಪ್ರಸಾದ್ 'ಒನ್ ಇಂಡಿಯಾ ಕನ್ನಡ'ದ ಶ್ರೀರಾಮ್ ಭಟ್ ಜೊತೆ ನಡೆಸಿದ ಮಾತುಕತೆ ಇಲ್ಲಿದೆ, ಓದಿ...
* ಹುಟ್ಟೂರು, ವಿದ್ಯಾಭ್ಯಾಸ ಹಾಗೂ ಸಾಹಿತ್ಯದ ಹಿನ್ನೆಲೆ ಬಗ್ಗೆ ಹೇಳಿ...
ಹುಟ್ಟೂರು ದೊಡ್ಡಬಳ್ಳಾಪುರ. ನಮ್ಮಪ್ಪ ವೆಂಕಟರಮಣಪ್ಪ, ಅಮ್ಮ ಚಂದ್ರಮ್ಮ. ಪ್ರಾಥಮಿಕ ಶಿಕ್ಷಣ ಮುಗಿಸಿದ್ದು ಅಜ್ಜಿಮನೆ ನಾಗಮಂಗಲದಲ್ಲಿ. ನಂತರ ಪ್ರೌಢ ಶಿಕ್ಷಣ, ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನಲ್ಲಿ ಮುಗಿಸಿದ್ದೇನೆ.
* ಸಿನಿಮಾ ಸಾಹಿತ್ಯ ಬರವಣಿಗೆ ಪ್ರಾರಂಭವಾದದ್ದು? ಈ 'ಜರ್ನಿ' ಬಗ್ಗೆ ಒಂದಷ್ಟು ಹೇಳಿ...
ಸಾಹಿತ್ಯದ ಹಿನ್ನೆಲೆ ನಮ್ಮ ಕುಟುಂಬಕ್ಕೆ ಇದೆ. ನಮ್ಮ ತಾತ ವೆಂಕಟಸುಬ್ಬಯ್ಯನವರು ನಾಟಕಕಾರರಾಗಿದ್ದರು. ಹೀಗಾಗಿ ನನಗೂ ನಾಟಕ ಹಾಗೂ ರಂಗಭೂಮಿಯ ನಂಟು ಹರಿದು ಬಂತು. ನಾನು ಹೈಸ್ಕೂಲ್ ನಲ್ಲಿದ್ದಾಗಲೇ ಬರೆದ ಕವಿತಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು.
ನಂತರ ನಾನು ಅಭಿನಯ ತರಂಗ ನಾಟಕಶಾಲೆಯಲ್ಲಿ ಡಿಪ್ಲೋಮಾ ಮುಗಿಸಿದೆ. ಸಾವಿರಕ್ಕೂ ಹೆಚ್ಚು ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದೇನೆ. 15 ರಿಂದ 20 ಬೀದಿ ನಾಟಕಗಳನ್ನು ರಚಿಸಿದ್ದೇನೆ. ಹಾಗೇ, 15 ರೇಡಿಯೋ ನಾಟಕಗಳ ರಚನೆ ಮತ್ತು ನಿರ್ದೇಶನವನ್ನೂ ಮಾಡಿದ್ದೇನೆ. ನಂತರ ಸಿನಿಮಾಗೆ ಹಾಡು ಬರೆಯುವ ಅವಕಾಶ ದೊರೆಯಿತು.
ಕೆ ವಿ ಜಯರಾಂ ನಿರ್ದೇಶನ ಹಾಗೂ ಗಂಧರ್ವ ಸಂಗೀತ ನಿರ್ದೇಶನದ 'ಗಾಜಿನ ಮನೆ' ಚಿತ್ರಕ್ಕೆ ಎಲ್ಲಾ ಗೀತೆಗಳಿಗೆ ಸಾಹಿತ್ಯ ಬರೆಯುವ ಮೂಲಕ ನಾನು ಚಿತ್ರಗೀತೆಗಳ ರಚನೆ ಪ್ರಾರಂಭಿಸಿದೆ. ನಂತರ ಒಂದಾದ ಮೇಲೆ ಇನ್ನೊಂದರಂತೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರುಗಳಾದ ಗುರುಕಿರಣ್, ವಿ ಹರಿಕೃಷ್ಣ, ಹಂಸಲೇಖ, ಇಳೆಯರಾಜ, ಸಾಧು ಕೋಕಿಲ, ಎಲ್ ಎನ್ ಶಾಸ್ತ್ರಿ ಮುಂತಾದವರ ಸ್ವರಸಂಯೋಜನೆಗಳಲ್ಲಿ 300 ಕ್ಕೂ ಮೀರಿದ ಚಿತ್ರಗಳಿಗೆ 1000ಕ್ಕೂ ಹೆಚ್ಚು ಚಿತ್ರಗೀತೆಗಳಿಗೆ ಸಾಹಿತ್ಯ ಬರೆದಿದ್ದೇನೆ. ಮುಂದಿನ ಪುಟ ನೋಡಿ...


Click it and Unblock the Notifications











