ಯಕ್ಷಗಾನ ರಂಗಸ್ಥಳದಲ್ಲಿ ಕಾಂತಾರಾದ ಹಾಡು: ಸಂಪ್ರದಾಯಬದ್ಧ ಪ್ರೇಕ್ಷಕರ ಅಸಮಾಧಾನ
ಭಾರತ ಚಿತ್ರರಂಗದಲ್ಲಿ ಮೋಡಿ ಮಾಡಿದ 'ಕಾಂತಾರ' ಚಿತ್ರ ಹಲವು ವಿನೂತನ ಪ್ರಯೋಗಗಳಿಗೆ ವೇದಿಕೆ ಮಾಡಿಕೊಟ್ಟಿದೆ. 'ಕಾಂತಾರ' ಸಿನಿಮಾದ ಹಾಡುಗಳಂತೂ ಸೂಪರ್ ಹಿಟ್ ಆಗಿದ್ದು, ರೀಲ್ಸ್ಗಳಲ್ಲಿ ಸೇರಿದಂತೆ ಹಲವೆಡೆ ಬಳಕೆಯಾಗುತ್ತಿವೆ. ಇದೀಗ ಕಾಂತಾರಾದ ಹಾಡು ಈಗ ಯಕ್ಷಗಾನದ ರಂಗಸ್ಥಳಕ್ಕೂ ಕಾಲಿರಿಸಿದೆ.
'ವರಾಹ ರೂಪಂ'ನ ವಿವಾದದ ನಡುವೆಯೂ 'ಕಾಂತಾರ' ಸಿನಿಮಾದ ಹಾಡುಗಳು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆದಿದೆ. ಈ ಬಾರಿ 'ಕಾಂತಾರ' ಸಿನಿಮಾದ ಹಾಡುಗಳು ಯಕ್ಷಗಾನ ರಂಗಸ್ಥಳವನ್ನೂ ಏರಿ ಪ್ರೇಕ್ಷಕರನ್ನು ರಂಜಿಸಲಿದೆ.
ತೆಂಕುತಿಟ್ಟಿನ ಸಸಿಹಿತ್ಲು ಶ್ರೀ ಭಗವತಿ ಮೇಳ, ಬಡಗಿನ ಸಾಲಿಗ್ರಾಮ ಶ್ರೀ ಗುರುಪ್ರಸಾದಿತ ಮೇಳ ನೂತನ ಪ್ರಸಂಗದಲ್ಲಿ 'ಕಾಂತಾರ' ಸಿನಿಮಾದ ಹಿಟ್ ಹಾಡುಗಳಾದ 'ವರಾಹ ರೂಪಂ' ಹಾಗೂ 'ಸಿಂಗಾರ ಸಿರಿಯೇ' ಹಾಡುಗಳು ಬಳಕೆಯಾಗಿವೆ. ಖ್ಯಾತ ಭಾಗವತರುಗಳಾದ ಡಾ.ಪ್ರಖ್ಯಾತ್ ಶೆಟ್ಟಿ ಹಾಗೂ ಚಂದ್ರಕಾಂತ ರಾವ್ ಮೂಡುಬೆಳ್ಳೆಯವರು 'ಕಾಂತಾರ'ದ ಹಾಡಿನ ಧಾಟಿಯಲ್ಲಿ ಭಾಗವತಿಕೆ ಮಾಡಿದ್ದಾರೆ. ಎರಡೂ ಮೇಳಗಳಲ್ಲೂ ಸ್ತ್ರೀ ಪಾತ್ರದ ನಾಟ್ಯಕ್ಕಾಗಿಯೇ ಈ ಹಾಡುಗಳನ್ನು ಬಳಸಲಾಗಿದೆ.

ಯಕ್ಷಗಾನಕ್ಕೆ ಯಕ್ಷಗಾನದ್ದೇ ಮಟ್ಟಿನ ರಾಗಗಳು ಇದೆ. ಆದರೆ ಇಂದು ಪ್ರೇಕ್ಷಕರ ರಂಜನೆಗೆ ಬೇಕಾಗಿ ಯಕ್ಷಗಾನದಲ್ಲಿ ಸಿನಿಮಾ ಧಾಟಿಯ ರಾಗಗಳನ್ನು ಬಳಸಲಾಗುತ್ತಿದೆ. ಈ ಬಗ್ಗೆ ಆಕ್ಷೇಪವೂ ವ್ಯಕ್ತವಾಗುತ್ತಿದೆ. ಆದರೆ ಯಕ್ಷಗಾನ ಮೇಳಗಳು ಪ್ರೇಕ್ಷಕರ ಆಕರ್ಷಣೆಗೆ ಪ್ರಸ್ತುತ ಘಟನೆ, ವಿಚಾರಗಳನ್ನು ಪ್ರಸಂಗಗಳಲ್ಲಿ ಜೋಡಣೆ ಮಾಡುವುದು ಮಾತ್ರ ಸರ್ವೇ ಸಾಮಾನ್ಯವಾಗಿದೆ.
ಕಾಂತಾರಾ ಚಿತ್ರದ ಹಾಡನ್ನು ಯಕ್ಷಗಾನದಲ್ಲಿ ಬಳಕೆ ಮಾಡಿರೋದು ಸಂಪ್ರದಾಯಬದ್ಧ ಯಕ್ಷಗಾನ ಪ್ರೇಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ. ಯಕ್ಷಗಾನದಲ್ಲಿ ವಿನೂತನತೆಯನ್ನು ತುರುಕುವ ಭರದಲ್ಲಿ ಸಂಪ್ರದಾಯದ ಹಾದಿ ತಪ್ಪಬಾರದು ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಕಾಂತಾರ' ಸಿನಿಮಾದ ಪ್ರಭಾವದಿಂದ ದೈವದ ವೇಷ ಹಾಕುವವರ ಸಂಖ್ಯೆಯೂ ಹೆಚ್ಚಾಗಿದೆ. ಮನೊರಂಜನೆಗಾಗಿ ಕಾರ್ಯಕ್ರಮದ ವೇದಿಕೆಗಳಲ್ಲಿ ದೈವದ ವೇಷ ಹಾಕಲಾಗುತ್ತಿದೆ. ದೈವ ಪೂಜಿಸುವ ಸಂಪ್ರದಾಯ ಇರದ ಮೈಸೂರು, ಬೆಂಗಳೂರು ಇನ್ನಿತರೆ ಪ್ರದೇಶಗಳಲ್ಲಿ ಸಹ ದೈವಾರಧನೆ ಮಾಡಲಾಗುತ್ತಿದೆ. ಇದು ಸಹ ತೀವ್ರ ಟೀಕೆಗೆ ಒಳಗಾಗಿದೆ. ಹಣಕ್ಕಾಗಿ ದೈವಾರಾಧನೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದೈವಾರಾಧಾಕರು ಅಸಮಾಧಾನ ವ್ಯಕ್ತಪಡಿಸಲಾಗಿದೆ.


Click it and Unblock the Notifications











