ಸ್ಯಾಂಡಲ್ ವುಡ್ಡಿಗೆ 'ಕೊಲವೆರಿಡಿ' ಸಂಗೀತ ನಿರ್ದೇಶಕ
ಕಾಲಿವುಡ್ ಸಿನಿ ಪ್ರಿಯರಿಗೆ ಅನಿರುದ್ಧ್ ರವಿಚಂದರ್ ಪರಿಚಯ ಇದ್ದೇ ಇದೆ. ಸೂಪರ್ ಡ್ಯೂಪರ್ ''ವೈ ದಿಸ್ ಕೊಲವೆರಿಡಿ...'' ಹಾಡನ್ನ ಸಂಯೋಜಿಸಿ ವಿಶ್ವದಾದ್ಯಂತ ಸುದ್ದಿ ಮಾಡಿದ ಯುವ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್.
ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಈಗಾಗಲೇ ಬಹು ಬೇಡಿಕೆಯ ಸಂಗೀತ ನಿರ್ದೇಶಕನಾಗಿರುವ ಅನಿರುದ್ಧ್ ರವಿಚಂದರ್ ಈಗ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ. 'ಜಲ್ವಂತಂ' ಚಿತ್ರದ ಹಾಡೊಂದಕ್ಕೆ ಗಾನಸುಧೆ ಹರಿಸುವ ಮೂಲಕ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ ಅನಿರುದ್ಧ್ ರವಿಚಂದರ್.

ನಿನ್ನೆಯಷ್ಟೇ ಚೆನ್ನೈನಲ್ಲಿರುವ ಎ.ಆರ್.ರೆಹಮಾನ್ ಸ್ಟುಡಿಯೋದಲ್ಲಿ ಅನಿರುದ್ಧ್ ದನಿಯಾಗಿರುವ ಹಾಡಿನ ರೆಕಾರ್ಡಿಂಗ್ ನಡೆದಿದೆ. 'ಜ್ವಲಂತಂ' ಚಿತ್ರದ ಹೀರೋ ಇಂಟ್ರೊಡಕ್ಷನ್ ಸಾಂಗ್ ಗೆ ಅನಿರುದ್ಧ್ ಹಾಡಿದ್ದಾರೆ.

ನವ ಪ್ರತಿಭೆ ವಿಕ್ರಮ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಕ್ಯಾಚಿ ಟ್ಯೂನ್ ಗೆ ಅನಿರುದ್ಧ್ ಮಜವಾಗಿ ಹಾಡಿದ್ದಾರಂತೆ. ರೈತರ ಸಮಸ್ಯೆ, ಪ್ರಸಕ್ತ ರಾಜಕೀಯ ವಿದ್ಯಮಾನಗಳು ಮತ್ತು ಸಮಾಜದ ಜ್ವಲಂತ ಸಮಸ್ಯೆಗಳೇ 'ಜ್ವಲಂತಂ' ಚಿತ್ರದ ಹೂರಣ.
ಹೊಸಬರ ಹೊಸ ಪ್ರಯತ್ನವಾಗಿರುವ 'ಜ್ವಲಂತಂ' ಚಿತ್ರದಲ್ಲಿ ಜ್ವಾಲಾ, ದೀಪ್ತಿ ಮತ್ತು ದೀಪಾ ಗೌಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಯುವ ಪ್ರತಿಭೆ ಅಂಬರೀಷ್ 'ಜ್ವಲಂತಂ'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಕಾಲಿವುಡ್ ನಲ್ಲಿ 'ಕೊಲವೆರಿಡಿ' ಮೂಲಕ ಸೆನ್ಸೇಷನ್ ಹುಟ್ಟಿಹಾಕಿದ ಅನಿರುದ್ಧ್ ಕನ್ನಡದಲ್ಲೂ ತಮ್ಮ ಗಾಯನದ ಮೂಲಕ ಸಂಚಲನ ಮೂಡಿಸಿದ್ರೆ, ಅನಿರುದ್ಧ್ ಗಾಂಧಿನಗರದಲ್ಲೂ ಬಿಜಿಯಾಗುವುದು ಪಕ್ಕಾ.


Click it and Unblock the Notifications











