ಕ್ರಾಂತಿ ಎರಡನೇ ಹಾಡು ಬಿಡುಗಡೆಯ ದಿನಾಂಕ, ಸಮಯ ಹಾಗೂ ಸ್ಥಳ ಪ್ರಕಟ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚಿತಾ ರಾಮ್ ನಾಯಕ ಹಾಗೂ ನಾಯಕಿಯಾಗಿ ನಟಿಸಿರುವ, ವಿ ಹರಿಕೃಷ್ಣ ಆಕ್ಷನ್ ಕಟ್ ಹೇಳಿರುವ ಬಹು ನಿರೀಕ್ಷಿತ ಕ್ರಾಂತಿ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಮುಂದಿನ ಜನವರಿ 26ಕ್ಕೆ ಗಣರಾಜ್ಯೋತ್ಸವದ ಪ್ರಯುಕ್ತ ಕ್ರಾಂತಿ ಚಿತ್ರ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಇನ್ನು ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಪ್ರಚಾರದ ಕೆಲಸಗಳನ್ನು ಆರಂಭಿಸಿರುವ ಚಿತ್ರತಂಡ ಚಿತ್ರದ ಹಾಡುಗಳನ್ನು ಒಂದೊಂದಾಗಿ ಬಿಡುಗಡೆಗೊಳಿಸುತ್ತಿದೆ.
ಕಳೆದ ಡಿಸೆಂಬರ್ 10ರಂದು ಮೈಸೂರಿನಲ್ಲಿ ತನ್ನ ಮೊದಲ ಹಾಡು 'ಧರಣಿ'ಯನ್ನು ಬಿಡುಗಡೆ ಮಾಡಿದ್ದ ಕ್ರಾಂತಿ ಚಿತ್ರತಂಡ ಇದೀಗ ತನ್ನ ಎರಡನೇ ಹಾಡನ್ನು ಬಿಡುಗಡೆ ಮಾಡಲು ತಯಾರಾಗಿದೆ. ಇದೇ ಡಿಸೆಂಬರ್ 18ರ ಭಾನುವಾರದಂದು ಹೊಸಪೇಟೆಯ ಡ್ಯಾಮ್ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದಲ್ಲಿ ಸಂಜೆ 7 ಗಂಟೆಗೆ ಕ್ರಾಂತಿ ಚಿತ್ರದ ಎರಡನೇ ಹಾಡು 'ಬೊಂಬೆ ಬೊಂಬೆ' ಬಿಡುಗಡೆಗೊಳ್ಳಲಿದೆ.

ಈ ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ಕ್ರಾಂತಿ ಚಿತ್ರತಂಡ ಆಗಮಿಸಲಿದ್ದು, ಮೊದಲ ಹಾಡಿನಂತೆ ಈ ಹಾಡು ಬಿಡುಗಡೆ ಕಾರ್ಯಕ್ರಮಕ್ಕೂ ಸಹ ದರ್ಶನ್ ನಿರೂಪಕನಾಗಿ ನಿರೂಪಣೆ ಮಾಡಲಿದ್ದಾರೆ ಹಾಗೂ ಯಾರಾದರೊಬ್ಬರು ದರ್ಶನ್ ಅಭಿಮಾನಿ ಹಾಡನ್ನು ಬಿಡುಗಡೆ ಮಾಡಲಿದ್ದಾರೆ. ಇನ್ನು ಇದು ದರ್ಶನ್ ಹಾಗೂ ರಚಿತಾ ರಾಮ್ ನಡುವಿನ ಡ್ಯೂಯೆಟ್ ಹಾಡಾಗಿದ್ದು, ಸೋನು ನಿಗಮ್ ದನಿಯಲ್ಲಿ ಮೂಡಿಬಂದಿದೆ.
ಹಾಡಿನ ಸಣ್ಣ ತುಣುಕನ್ನು ಚಿತ್ರತಂಡ ಹಂಚಿಕೊಂಡಿದ್ದು, ಹಾಡು ಕಲರ್ಫುಲ್ ಆಗಿ ಮೂಡಿಬಂದಿರುವುದನ್ನು ಕಾಣಬಹುದಾಗಿದೆ. 'ಹೊಂಬಿಸಿಲಲ್ಲಿ.. ನಂಗ್ಯಾಕೆ ಕಂಡಳು... ಒಮ್ಮೆಲೆ ತಿರುಗಿ.. ಹಿಂಗ್ಯಾಕೆ ನಕ್ಕಳು' ಎಂಬ ಸಾಹಿತ್ಯದ ಸಣ್ಣ ತುಣುಕು ಬಿಡುಗಡೆಯಾಗಿದ್ದು, ಇದೊಂದು ಮೆಲೋಡಿಯಸ್ ಹಿಟ್ ಆಗಲಿದೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications











