ಬಿಜೆಪಿ ಕಚೇರಿಗೆ ಬಂದ ಮಂಗ್ಲಿ: ಹಾಡಿಗೆ ಸಿಎಂ ಫಿದಾ!
ತೆಲುಗಿನ ಜನಪ್ರಿಯ ಗಾಯಕಿ ಮಂಗ್ಲಿ ಬೆಂಗಳೂರಿನ ಕರ್ನಾಟಕ ಬಿಜೆಪಿ ಕೇಂದ್ರ ಕಚೇರಿಗೆ ಬಂದಿದ್ದರು. ಸ್ವಾತಂತ್ರೋತ್ಸವದ ಸಂದರ್ಭ ವಿಶೇಷವಾಗಿ ಹಮ್ಮಿಕೊಂಡಿದ್ದ ನಡುರಾತ್ರಿ ಆಚರಣೆಯಲ್ಲಿ ಮಂಗ್ಲಿಯವರ ಗಾಯನ ಪ್ರಮುಖ ಆಕರ್ಷಣೆಯಾಗಿತ್ತು.
ತಮ್ಮ ಎಂದಿನ ಜೋಶ್ನಲ್ಲಿ ವೇದಿಕೆಗೆ ಬಂದ ಮಂಗ್ಲಿ 'ವಂದೇ ಮಾತರಂ' ಘೋಷಣೆಗಳೊಟ್ಟಿಗೆ ಕಾರ್ಯಕ್ರಮ ಆರಂಭಿಸಿದರು. ತಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ವೀಣಾ ರಾಮ ಮೂರ್ತಿಗೆ ಧನ್ಯವಾದ ಹೇಳಿದ ಮಂಗ್ಲಿ, ಬಳಿಕ ಸಿಎಂ ಬಸವರಾಜ ಬೊಮ್ಮಾಯಿ, ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಇತರರಿಗೆ ಧನ್ಯವಾದಗಳನ್ನು ಹೇಳಿ ಗಾಯನ ಆರಂಭಿಸಿದರು.
ದೇಶಭಕ್ತಿ ಗೀತೆಗಳು ಹಾಗೂ ಕೆಲವು ಸಿನಿಮಾ ಹಾಡುಗಳನ್ನು ಸಹ ಮಂಗ್ಲಿ ಹಾಡಿ ಜನರನ್ನು ರಂಜಿಸಿದರು. ನಡು ರಾತ್ರಿ ಬಿಜೆಪಿ ಕಚೇರಿ ಬಳಿ ಸ್ವಾತಂತ್ರ್ಯೋತ್ಸವ ಆಚರಣೆ ಕಳೆ ಕಟ್ಟಿತ್ತು. ಕಚೇರಿಯನ್ನು ಕೆಂಪು, ಬಿಳಿ, ಹಸಿರು ದೀಪಗಳಿಂದ ಅಲಂಕರಿಸಲಾಗಿತ್ತು.

ಮಂಗ್ಲಿಯ ಗಾಯನ ಕಾರ್ಯಕ್ರಮ ರಾಜ್ಯದ ಜನರಿಗೆ ಹೊಸದೇನೂ ಅಲ್ಲ. ಹಲವು ಸಂದರ್ಭಗಳಲ್ಲಿ ಮಂಗ್ಲಿಯ ಗಾಯನ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಆಯೋಜಿಸಲಾಗಿದೆ. ಕಳೆದ ಚುನಾವಣೆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ಚುನಾವಣಾ ಪ್ರಚಾರಕ್ಕೆ ಮಂಗ್ಲಿಯನ್ನು ಆಹ್ವಾನಿಸಿದ್ದರು.
ಮಂಗ್ಲಿ ತೆಲುಗಿನ ಜನಪ್ರಿಯ ಗಾಯಕಿ. ಆರಂಭದಲ್ಲಿ ಟಿವಿ ನಿರೂಪಕಿ ಆಗಿದ್ದ ಮಂಗ್ಲಿ ನಂತರ ಜನಪದ ಹಾಡುಗಳನ್ನು ಹಾಡಲು ಆರಂಭಿಸಿದರು. ಅವರ ಜನಪದ ಹಾಡುಗಳು ಯೂಟ್ಯೂಬ್ನಲ್ಲಿ ಭಾರಿ ಹಿಟ್ ಆದವು. ದರ್ಶನ್ ನಟನೆಯ 'ರಾಬರ್ಟ್' ಸಿನಿಮಾದ ತೆಲುಗು ಆವೃತ್ತಿಯಲ್ಲಿ ಮಂಗ್ಲಿ ಹಾಡಿದ 'ಕಣ್ಣೇ ಅದಿರಿಂದಿ' ಹಾಡು ದೊಡ್ಡ ಹಿಟ್ ಆಯಿತು. ಆ ನಂತರ ಕನ್ನಡದ ಕೆಲವು ಸಿನಿಮಾಗಳಲ್ಲಿ ಮಂಗ್ಲಿ ಹಾಡು ಹಾಡಿದರು.
ತೆಲುಗಿನಲ್ಲಿಯೂ ಮಂಗ್ಲಿ ಹಾಡಿರುವ 'ರಾಮುಲೋ ರಾಮುಲ', 'ಲವ್ ಸ್ಟೋರಿ' ಸಿನಿಮಾ 'ಸರಂಗ ಧರಿಯಾ' ಇನ್ನೂ ಹಲವು ಹಾಡುಗಳು ಸೂಪರ್ ಹಿಟ್ ಮಂಗ್ಲಿಯವರ 'ಬೋನಾಲ ಪಾಟ' ಅಂತೂ ಭಾರಿ ವೈರಲ್ ಆಗಿದೆ. ಕಳೆದ ಶಿವರಾತ್ರಿಗೆ ಸದ್ಗುರು ಅವರ ಆಶ್ರಮದಲ್ಲಿಯೂ ಮಂಗ್ಲಿಯವರ ವಿಶೇಷ ಗಾಯನ ಆಯೋಜಿಸಲಾಗಿತ್ತು.


Click it and Unblock the Notifications











