ಸೆನ್ಸೇಷನ್ ಹುಟ್ಟುಹಾಕಲು ತುದಿಗಾಲಲ್ಲಿರುವ ಸಂಗೀತಗಾರ ಇವರೇ!
ಭಾರತದ ಹೆಮ್ಮೆಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರ ಕಾಲ್ ಶೀಟ್ ಸಿಗುವುದೇ ಕಷ್ಟ. ಅಂಥದ್ರಲ್ಲಿ, ಎಸ್.ಪಿ.ಬಿ ರವರಿಂದ 36 ಹಾಡುಗಳನ್ನ ಹಾಡಿಸಿ, 4 ಆಲ್ಬಂ ಮಾಡಿರುವ ಖ್ಯಾತಿ ಕನ್ನಡ ಚಿತ್ರರಂಗದ ಯುವ ಸಂಗೀತ ನಿರ್ದೇಶಕ ಗಿರಿಧರ್ ದಿವಾನ್ ರದ್ದು.
ಗಿರಿಧರ್ ದಿವಾನ್ ರವರ ಪರಿಚಯ ಮಾಡಿಕೊಡಬೇಕು ಅಂದ್ರೆ ''ಇಲ್ಲೆ ಇಲ್ಲೆ ಎಲ್ಲೋ...'' ಹಾಡಿನ ಬಗ್ಗೆ ಮೊದಲು ನಿಮಗೆ ಹೇಳ್ಬೇಕು.
2010 ರಲ್ಲಿ ತೆರೆಕಂಡ ಚಿರಂಜೀವಿ ಸರ್ಜಾ ಹಾಗೂ ಕ್ರಿತಿ ಖರಬಂಧ ಜೋಡಿಯಾಗಿ ಅಭಿನಯದ 'ಚಿರು' ಚಿತ್ರದ ಚಾರ್ಟ್ ಬಸ್ಟರ್ ಸಾಂಗ್ ''ಇಲ್ಲೆ ಇಲ್ಲೆ ಎಲ್ಲೋ..'' ಹಾಡನ್ನ ನೀವೆಲ್ಲಾ ಕೇಳೇ ಇರ್ತೀರಾ. [ಇಡೀ ಭಾರತದಲ್ಲಿ 'ಇವರೇ' ಮೊದಲು.! ಯಾವುದರಲ್ಲಿ? ಯಾರವರು?]
ಅಂತಹ ರೋಮ್ಯಾಂಟಿಕ್ ಗೀತೆಗೆ ಸಂಗೀತ ಸಂಯೋಜಿಸಿದವರು ಬೇರೆ ಯಾರೂ ಅಲ್ಲ, ಇದೇ ಗಿರಿಧರ್ ದಿವಾನ್.! ಕನ್ನಡ ಚಿತ್ರರಂಗದಲ್ಲಿ ಹೊಸ ಸೆನ್ಸೇಷನ್ ಹುಟ್ಟುಹಾಕಲು ಹಾತೊರೆಯುತ್ತಿರುವ ಸಂಗೀತ ನಿರ್ದೇಶಕ! ಮುಂದೆ ಓದಿ.....

ಸಂಗೀತ ಕುಟುಂಬದಲ್ಲೇ ಬೆಳೆದಿರುವ ಪ್ರತಿಭಾವಂತ!
ಸಂಗೀತ ಕುಟುಂಬದಲ್ಲೇ ಹುಟ್ಟಿ ಬೆಳೆದಿರುವ ಗಿರಿಧರ್ ದಿವಾನ್, ಕರ್ನಾಟಿಕ್ ಹಾಗೂ ಕ್ಲಾಸಿಕಲ್ ಸಂಗೀತ ಅಭ್ಯಾಸ ಮಾಡಿದ್ದಾರೆ. ತಬಲ, ಗಿಟಾರ್, ಫ್ಲೂಟ್ ಸೇರಿದಂತೆ ಅನೇಕ ವಾದ್ಯಗಳನ್ನ ಇವರು ಸುಶ್ರಾವ್ಯವಾಗಿ ನುಡಿಸಬಲ್ಲರು.

ಗಾಯನದಲ್ಲೇ ಡಿಪ್ಲೋಮೋ!
ಪ್ಲೇ ಬ್ಯಾಕ್ ಸಿಂಗಿಂಗ್ ನಲ್ಲಿ ಒಂದು ವರ್ಷ ಡಿಪ್ಲೋಮೋ ಮಾಡಿರುವ ಗಿರಿಧರ್ ದಿವಾನ್, ಜೆ.ಎಸ್.ಎಸ್ ಸ್ಕೂಲ್ ಆಫ್ ಫೈನ್ ಆರ್ಟ್ಸ್, ಮುಂಬೈನಲ್ಲಿ ಫೋಟೋಗ್ರಫಿಯಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ನಲ್ಲಿ ಡಿಪ್ಲೋಮೋ ಕೂಡ ಇವರಿಗಿದೆ.

ಆಕಾಶವಾಣಿಯಿಂದ ಬೆಳಕಿಗೆ ಬಂದ ಪ್ರತಿಭೆ
ಎಸ್.ಎಸ್.ಎಲ್.ಸಿ ಓದುವಾಗಲೇ ಆಕಾಶವಾಣಿಯ ಯುವವಾಣಿಯಲ್ಲಿ ಕಂಪೋಸರ್ ಆಗಿ ಕಾರ್ಯಕ್ರಮಗಳನ್ನ ನೀಡಲು ಆರಂಭಿಸಿದ ಗಿರಿಧರ್ ದಿವಾನ್, 2001ರಲ್ಲಿ ಮೊದಲ ಆಲ್ಬಂ ಹೊರತಂದರು. 2006 ರವರೆಗೂ ಅನೇಕ ಭಾಷೆಗಳಲ್ಲಿ 60ಕ್ಕೂ ಹೆಚ್ಚು ಆಲ್ಬಂ ಮಾಡಿರುವ ಗಿರಿಧರ್ ಗೆ, ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಜೊತೆ 4 ಆಲ್ಬಂ ಮಾಡಿರುವ ಹೆಮ್ಮೆ ಇದೆ.

ಸೀರಿಯಲ್ ಗಳಿಗೆ ಇವರದ್ದೇ ಟ್ರ್ಯಾಕ್ ಬೇಕು!
ಉದಯ ಟಿವಿ, ಸುವರ್ಣ ವಾಹಿನಿ, ಕಲರ್ಸ್ ವಾಹಿನಿ ಹಾಗೂ ಜೀ ಕನ್ನಡ...ಹೀಗೆ ವಿವಿಧ ಚಾನೆಲ್ ಗಳಲ್ಲಿ ಸದ್ಯ ಪ್ರಸಾರವಾಗುತ್ತಿರುವ 'ಮೊಗ್ಗಿನ ಮನಸ್ಸು', 'ಸಾಕ್ಷಿ', 'ಅಮ್ಮ', 'ಮಿಲನ', 'ದೇವತೆ' ಸೇರಿದಂತೆ ಎಂಟು ಧಾರಾವಾಹಿಗಳ ಟೈಟಲ್ ಟ್ರ್ಯಾಕ್ ಗಳಿಗೆ ಮ್ಯೂಸಿಕ್ ನೀಡಿರುವವರು ಇದೇ ಗಿರಿಧರ್ ದಿವಾನ್. ಅಲ್ಲದೆ, ಹೊಸದಾಗಿ ಶುರುವಾಗುತ್ತಿರುವ ಬಹುತೇಕ ಸೀರಿಯಲ್ ಗಳ ಟೈಟಲ್ ಟ್ರ್ಯಾಕ್ ಗಳಿಗೆ ಸಂಗೀತ ಸಂಯೋಜಿಸಲು ಗಿರಿಧರ್ ದಿವಾನ್ ಫಿಕ್ಸ್ ಆಗಿದ್ದಾರೆ.

13 ಸಿನಿಮಾಗಳಿಗೆ ಸಂಗೀತ ನಿರ್ದೇಶನ
ಚಿರಂಜೀವಿ ಸರ್ಜಾ ಅಭಿನಯದ 'ಚಿರು' ಹಾಗೂ ಹರೀಶ್ ರಾಜ್ ನಟಿಸಿರುವ 'ಕಲಾಕಾರ್' ಸೇರಿದಂತೆ ಒಟ್ಟು 13 ಸಿನಿಮಾಗಳಿಗೆ ಗಿರಿಧರ್ ದಿವಾನ್ ಸಂಗೀತ ನೀಡಿದ್ದಾರೆ. 'ಚಿರು' ಚಿತ್ರಕ್ಕಾಗಿ ಎರಡು ಪ್ರಶಸ್ತಿಗಳನ್ನ ಪಡೆದಿದ್ದಾರೆ.

ಪ್ರತಿಭೆ ಇದ್ದರೂ....
ಪ್ರತಿಭೆ ಇದ್ದರೂ, ಉತ್ತಮ ಸಂಗೀತ ಸಂಯೋಜಿಸಿದರೂ, ಗಿರಿಧರ್ ದಿವಾನ್ ಖ್ಯಾತಿ ಗಳಿಸದೆ ಇರಲು ಕಾರಣ ಚಿತ್ರಗಳ ಸೋಲು. ''Music is the invitation for the films. ಸಂಗೀತವನ್ನ ಹೈಲೈಟ್ ಮಾಡಬೇಕು. ಸಿನಿಮಾದಲ್ಲಿ ಸಾಂಗ್ಸ್ ಇರಬೇಕು ಅಂತ ಕೆಲವರು ಮಾಡಿಸುತ್ತಾರೆ. ಆದ್ರೆ, ಹಾಗಲ್ಲ. ಆಮಂತ್ರಣ ಪತ್ರಿಕೆ ಚೆನ್ನಾಗಿದ್ದರೆ, ಥಿಯೇಟರ್ ಗೆ ಬರುವ ಜನರು ಜಾಸ್ತಿ ಆಗ್ತಾರೆ'' ಅಂತ ಹೇಳ್ತಾರೆ ಗಿರಿಧರ್ ದಿವಾನ್.

ಹೊಸಬರಿಗೆ ಸಪೋರ್ಟ್
''ನನ್ನ ಮೊದಲ ಪ್ರಾಮುಖ್ಯತೆ ಟೀಮ್. ನಾನು ಯಾವತ್ತೂ ಬ್ಯಾನರ್ ನೋಡುವುದಕ್ಕೆ ಹೋಗಲ್ಲ. ಇವತ್ತಿನವರೆಗೂ ಪಾಪ್ಯುಲರ್ ಬ್ಯಾನರ್ ಸಿನಿಮಾ ಮಾಡಬೇಕು ಅಂತ ಕಾದು ಕುಳಿತಿಲ್ಲ. ಕನ್ನಡ ಚಿತ್ರಗಳನ್ನು ಸಪೋರ್ಟ್ ಮಾಡುವ ಒಳ್ಳೆಯ ಜನರು ನನಗೆ ಬೇಕು. ಅಂತಹವರಿಗೆ ನಾನು ಸಹಾಯ ಮಾಡಲು ಸಿದ್ಧ. ಕಥೆ ಚೆನ್ನಾಗಿರಬೇಕು. ನಾಯಕ-ನಾಯಕಿ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಹೊಸಬರ ಸಿನಿಮಾಗಳು ಹಿಟ್ ಆಗಿರುವ ಉದಾಹರಣೆ ಸುಮಾರಿದೆ. ಒಳ್ಳೆಯ ಸಿನಿಮಾಗಳಿಗೆ ಕೆಲಸ ಮಾಡುವುದು ನನ್ನ ಉದ್ದೇಶ'' ಎಂದು ಹೇಳುವ ಗಿರಿಧರ್ ದಿವಾನ್ ಉತ್ತಮ ಕಥೆ ಇರುವ ಚಿತ್ರಗಳಿಗಾಗಿ ಎದುರು ನೋಡುತ್ತಿದ್ದಾರೆ.

ಬೆಂಗಳೂರಿನಲ್ಲಿದೆ ದೊಡ್ಡ ಸ್ಟುಡಿಯೋ
ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಇವರದ್ದೇ ದೊಡ್ಡ ಸ್ಟುಡಿಯೋ ಇದೆ. ಕಂಪೋಸರ್ ಜೊತೆಗೆ ಸೌಂಡ್ ಎಂಜಿನಿಯರ್ ಕೂಡ ಇವರೇ ಆಗಿರುವುದು ಮತ್ತೊಂದು ವಿಶೇಷ.

ಬೇಸರ ಇದೆ!
''ಚಿರು' ಆದ್ಮೇಲೆ 6 ಸಿನಿಮಾ ಡಬ್ಬಕ್ಕೆ ಹೋಯ್ತು. ಹೀಗಾಗಿ ನನ್ನ ಕೆಲಸವನ್ನ ಜನ ಗುರುತಿಸಲೇ ಇಲ್ಲ. ಸಿನಿಮಾ ಓಡಿಲ್ಲ ಅಂದ್ರೆ ಹಾಡನ್ನ ಯಾರೂ ಕೇಳುವುದಿಲ್ಲ. ದಿನೇಶ್ ಬಾಬು ಗಾಗಿ ಮೂರು ಸಿನಿಮಾ ಮಾಡ್ದೆ. ಆದ್ರೆ, ಚಿತ್ರ ಓಡ್ಲಿಲ್ಲ. ನನ್ನ ಕೆಲಸ ಹೊರಗಡೆ ಬರಲೇ ಇಲ್ಲ'' ಅಂತ ಬೇಸರ ಹೊರಹಾಕುವ ಗಿರಿಧರ್ ದಿವಾನ್ ಸ್ಯಾಂಡಲ್ ವುಡ್ ನಲ್ಲಿ ಹೊಸ ಸೆನ್ಸೇಷನ್ ಹುಟ್ಟುಹಾಕುವ ಉತ್ಸಾಹ ಹೊಂದಿದ್ದಾರೆ. ಅವರಿಗೆ ಶುಭಹಾರೈಸೋಣ.


Click it and Unblock the Notifications











