ಸಂಗೀತ ಮಾಂತ್ರಿಕ ಇಳಯರಾಜಾಗೆ ಹೃದಯಾಘಾತ
ಸಂಗೀತ ಮಾಂತ್ರಿಕ ಇಳಯರಾಜಾ (70) ಅವರು ಲಘು ಹೃದಯಾಘಾತಕ್ಕೆ ಒಳಗಾದ ಕಾರಣ ಅವರನ್ನು ಕೂಡಲೆ ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯಕ್ಕೆ ಅವರ ಆರೋಗ್ಯ ಸ್ಥಿರವಾಗಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಚೆನ್ನೈನ ತಮ್ಮ ಖಾಸಗಿ ಸ್ಟುಡಿಯೋದಲ್ಲಿ ಚಿತ್ರವೊಂದರ ಸಂಗೀತ ನಿದೇರ್ಶನದಲ್ಲಿ ತೊಡಗಿದ್ದ ಸಂದರ್ಭದಲ್ಲಿಯೇ ಇಳಯರಾಜ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಅವರನ್ನು ಕೂಡಲೇ ಅಪೋಲೋ ಆಸ್ಪತ್ರೆ ದಾಖಲು ಮಾಡಲಾಗಿದೆ. ಅವರನ್ನು ವೈದ್ಯರು ಪರೀಕ್ಷಿಸಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ಹೇಳಿದ್ದಾರೆ. ಇಂದು ಸಂಜೆ ಅಥವಾ ನಾಳೆ ಅವರನ್ನು ಡಿಸ್ಚಾರ್ಜ್ ಮಾಡುವುದಾಗಿ ಇಳಯರಾಜಾ ಸಂಬಂಧಿ ವೆಂಕಟಪ್ರಭು ತಿಳಿಸಿದ್ದಾರೆ.

ಇದುವರೆಗೂ ಇಳಯರಾಜಾ ಅವರು 4,500ಕ್ಕೂ ಹೆಚ್ಚು ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಭಾರತದ ವಿವಿಧ ಭಾಷೆಯ ಚಿತ್ರಗಳಿಗೆ ಹಿನ್ನೆಲೆ ಸಂಗೀತ, ಗೀತೆಗಳಿಗೆ ರಾಗಸಂಯೋಜನೆಯೇ 950 ಸಂಖ್ಯೆಯಲ್ಲಿದೆ. ಇಳಯರಾಜಾ ಅವರಿಗೆ ಮೂರು ಮಕ್ಕಳಿದ್ದಾರೆ. ಕಾರ್ತಿಕ್ ರಾಜಾ, ಯುವನ್ ಶಂಕರ್ ರಾಜಾ ಹಾಗೂ ಭಾವತರಣಿ. ಇವರೆಲ್ಲರೂ ಸಂಗೀತ ಸಂಯೋಜನೆ ಹಾಗೂ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ.
'ಗೀತಾ, ಪಲ್ಲವಿ ಅನು ಪಲ್ಲವಿ, ನಮ್ಮೂರ ಮಂದಾರ ಹೂವೆ' ಚಿತ್ರದ ಹಾಡಿಗಳನ್ನು ನೀವು ಕೇಳಿದ್ದರೆ - ಇಳಯರಾಜಾ ಅವರ ಸಂಗೀತದ ಮಾಧುರ್ಯ ಗೊತ್ತಿರಲೇಬೇಕು. ಸಂಗೀತವೇ ನನ್ನ ಜೀವ. ನಾನು ಸಂಗೀತಕ್ಕಾಗಿ ಕೆಲಸ ಮಾಡುತ್ತೇನೆ ಎಂದಿದ್ದ ಇಳಯರಾಜಾ ಅವರು ಆದಷ್ಟು ಬೇಗ ಚೇತರಿಸಿಕೊಂಡು ಇನ್ನಷ್ಟು ಹೊಸ ಹಾಡುಗಳನ್ನು ಸಂಗೀತ ಪ್ರೇಮಿಗಳಿಗೆ ಕೊಡಲಿ.


Click it and Unblock the Notifications











