ಖಾಲಿ ಕ್ವಾಟ್ರು ಆಯ್ತು ಈಗ ವಿಜಯ್ ಕೈಲಿ ಸಿಗರೇಟ್!
ನಟ, ನಿರ್ದೇಶಕ ನಾಗಶೇಖರ್ ಅವರು ಅಭಿನಯಿಸುತ್ತಿರುವ ವಿಭಿನ್ನ ಚಿತ್ರ ಸಿಗರೇಟ್. ಈ ಚಿತ್ರದ ವಿಶೇಷ ಹಾಡಿಗಾಗಿ ಚಿತ್ರದ ನಿರ್ದೇಶಕ ಲಕ್ಕಿ ಶಂಕರ್ ಸಾಕಷ್ಟು ಬೆವರು ಹರಿಸಿದ್ದಾರೆ. ಇಪ್ಪತ್ತು ಭಾಷೆಗಳ ಪದಗಳನ್ನು ಆಯ್ಕೆ ಮಾಡಿಕೊಂಡು 'ಸಿಗರೇಟ್' ಹಾಡನ್ನು ಸಿದ್ಧಪಡಿಸುತ್ತಿದ್ದಾರೆ. ಈ ಹಾಡಿನ ಉದ್ದೇಶ ಏನಪ್ಪಾ ಅಂದರೆ ನಮ್ಮ ದೇಶದ 'ಸಿಗರೇಟ್' ಶಾಶ್ವತ ಬಿಡಬೇಕು ಎಂಬುದು. ಇದು ರಾಷ್ಟ್ರದ ಸಿಗರೇಟ್ ಗೀತೆ ಆದರೂ ಆಗಹಬುದು ಎನ್ನುತ್ತಾರೆ ನಿರ್ದೇಶಕರು.
ಸದ್ಯಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಗಿಸಿ ಹಾಡುಗಳ ಚಿತ್ರೀಕರಣಕ್ಕೆ 'ಸಿಗರೇಟ್' ಚಿತ್ರ ಅಣಿಯಾಗುತ್ತಿದೆ. ಇದಿಷ್ಟೇ ಅಲ್ಲದೆ ಈ 'ಸಿಗರೇಟ್' ಗೀತೆಗೆ ಸಿಗರೇಟ್ ಬಿಟ್ಟಿರುವ ನಮ್ಮ ದೇಶದ ಸೆಲಿಬ್ರಿಟಿಗಳ ಕೈಲಿ ಒಂದು ಸಂದೇಶ ಹೇಳಿಸುವ ಪ್ರಯತ್ನ ನಡೆಯುತ್ತಿದೆ. ಮನಸ್ಸು ಮಾಡಿದರೆ ಯಾವುದೂ ದೊಡ್ಡದಲ್ಲ. ಮನಸ್ಸು ದೃಢ ಮಾಡಿ ಸಿಗರೇಟ್ ಬಿಡಿ ಎಂದು ಕಾಳಜಿಯಿಂದ ಹೇಳುವ ಈ ಚಿತ್ರದಲ್ಲಿ ಹಾಸ್ಯ, ರೊಮಾನ್ಸ್, ಮನತಟ್ಟುವ ಸನ್ನಿವೇಶಗಳಿರುತ್ತವೆ. [ಸಿಗರೇಟು ಸೇದ್ಬೇಡಿ ಪ್ರೀತಿ ಮಾಡ್ಬೇಡಿ: ನಾಗಶೇಖರ್]

ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಕವಿ ಬಿ.ಆರ್ ಲಕ್ಷ್ಮಣ್ ರಾವ್ ಅವರು ಬರೆದಿರುವ "ಬಿಡಲಾರೆ ನಾ ಸಿಗರೇಟ್...ಅದು ನಿನ್ನಂತೆಯೇ ಥೇಟ್.." ಹಾಡನ್ನು ಸಹ 'ಸಿಗರೇಟ್' ಸಿನೆಮಾದಲ್ಲಿ ಬಳಸಿಕೊಳ್ಳಲು ನಿರ್ದೇಶಕರು ಸಂಬಂಧಪಟ್ಟ ವ್ಯಕ್ತಿಗಳಿಂದ ಅನುಮತಿಯನ್ನು ಕೋರಲಿದ್ದಾರೆ.
ಚಿತ್ರದ ಮತ್ತೊಂದು ಹಾಡು "ಸಾಫ್ಟ್ ವೇರ್ ಹುಡುಗಿ, ಅಂಡರ್ ವೇರ್ ಹುಡುಗ...." ಎಂಬ ಗೀತೆಯನ್ನು ಮಲೇಷಿಯಾ ದೇಶದಲ್ಲಿ ಚಿತ್ರೀಕರಿಸಲು ಲಕ್ಕಿ ಶಂಕರ್ ಯೋಚಿಸಿದ್ದಾರೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್, ಶಿರ್ಕಿ ಅಪಾರ್ಟ್ ಮೆಂಟ್ ಕೆಂಗೇರಿ, ಸದಾಶಿವನಗರ, ವಿಮಾನ ನಿಲ್ದಾಣ ಸುತ್ತಮುತ್ತ, ನಾಗರಾಭಾವಿ, ಒರಿಯನ್ ಮಾಲ್ ಹಾಗೂ ಇನ್ನಿತರ ಕಡೆ ಶೇ. 60 ಚಿತ್ರೀಕರಣ ಮಾಡಲಾಗಿದೆ.
ನಿರ್ದೇಶಕ ಹಾಗೂ ನಟ ನಾಗಶೇಖರ್ ಅವರು ಈ ಸಿನಿಮಾದ ಮುಖ್ಯ ಪಾತ್ರದಾರಿ. ಸಿನೆಮಾ ಹೆಸರೇ 'ಸಿಗರೇಟ್' ಆಗಿರುವುದರಿಂದ ನಾಗಶೇಖರ್ ಅವರು ಸಿಗರೇಟ್ ಸೇದುವುದನ್ನೇ ತ್ಯಜಿಸಿ ಅಭಿನಯ ಮಾಡುತ್ತಿದ್ದಾರೆ. ಈ ಹಿಂದೆ ಲಕ್ಕಿ ಶಂಕರ್ ಅವರು 'ದೇವರಾಣೆ ಹಾಗೂ 90' ಎಂಬ ಜನಪ್ರಿಯ ಸಿನಿಮಾಗಳನ್ನು ಮಾಡಿದ್ದಾರೆ.
'ಸಿಗರೇಟ್' ಚಿತ್ರದ ಅಡಿಬರಹ "ಸೇದಬೇಡಿ ಪ್ರೀತಿ ಮಾಡಬೇಡಿ" ಎಂಬುದು. ಶಿವು ಕಬ್ಬಿಣ ಅವರು ಈ ಸಿನಿಮಾದ ನಿರ್ಮಾಪಕರು. ರಮೇಶ್ ರಾಜ್ ಅವರ ಛಾಯಾಗ್ರಹಣ, ಇಂದ್ರಸೇನ ಅವರ ಸಂಗೀತ, ಸುಪ್ರೀತ್ ಅವರ ಸಂಕಲನ, ಮಾಲೂರ್ ಶ್ರೀನಿವಾಸ್ ಅವರ ನೃತ್ಯ ನಿರ್ದೇಶನ ಇರುವ ಈ ಚಿತ್ರದ ಇನ್ನಿತರ ತಾರಾಗಣದಲ್ಲಿ ನಾಗೇಂದ್ರ, ರೂಪಶ್ರೀ, ರಕ್ಷಿತಾ ಪೊನ್ನಮ್ಮ, ಸಾಧು ಕೋಕಿಲ, ಗಿರಿಜ ಲೋಕೇಶ್, ಸುಧಾಕರ್, ಸುಧ ಬೆಳವಾಡಿ, ಲಕ್ಕಿ, ಕುರಿ ಪ್ರತಾಪ್, ಮಿತ್ರ, ವಿಜಯ್ ಚೆಂಡೂರ್ ಸಹ ಇದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











