ಆರೋಗ್ಯ ಏರುಪೇರು ನಿಜ, ಸೀರಿಯಸ್ ಆಗಿಲ್ಲ: ಎಸ್ಪಿಬಿ
ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ದಕ್ಷಿಣ ಆಫ್ರಿಕಾದಲ್ಲಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಎಂದು ಫ್ಲಾಷ್ ನ್ಯೂಸ್ ನಿನ್ನೆ ಬರುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಉಂಟಾಗಿತ್ತು.
ಜೊಹಾನ್ಸ್ ಬರ್ಗ್ನಲ್ಲಿ ನಡೆದ International Indian Film Festival of South Africa ಚಲನಚಿತ್ರೋತ್ಸವ ಸಮಾರಂಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಸ್ವಲ್ಪ ಹೊತ್ತಿನಲ್ಲೇ ಅಸ್ವಸ್ಥರಾದರು.ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಭಾರತಕ್ಕೆ ಕಳುಹಿಸುವ ಸಿದ್ಧತೆ ನಡೆಸಿದ್ದಾರೆ. ಪ್ರಶಸ್ತಿ ಗೌರವ ಸ್ವೀಕರಿಸಿದ ಎಸ್ಪಿಬಿ ಸುಮಾರು 15 ಭಾಷೆಗಳ ಒಂದೊಂದು ಸಾಲು ಹಾಡನ್ನು ಹಾಡಿ ರಂಜಿಸಿದರು. ಎಂಬ ಸುದ್ದಿ ಎಸ್ಪಿ ಬಾಲಸುಬ್ರಮಣ್ಯಂ ಅವರ ಕಿವಿಗೂ ಬಿದ್ದಿದೆ. ಈ ಸುದ್ದಿಗೆ ತಕ್ಷಣದ ಪ್ರತಿಕ್ರಿಯೆ ನೀಡಿರುವ ಗಾನ ಗಂಧರ್ವ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿದ್ದು ನಿಜ ಆದರೆ, ಸೀರಿಯಸ್ ಆಗಿಲ್ಲ, ಮಾಧ್ಯಮಗಳಲ್ಲಿ ಬಂದಿರುವ ರೋಚಕ ಸುದ್ದಿ ನಂಬಬೇಡಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.

67 ವರ್ಷದ ಗಾಯಕ ಬಾಲಸುಬ್ರಮಣ್ಯಂ ಅವರು ಇತ್ತೀಚೆಗೆ ಯಶಸ್ವಿ ಹಿಂದಿ ಚಿತ್ರ ಚೆನ್ನೈ ಎಕ್ಸ್ ಪ್ರೆಸ್ ನ ಶೀರ್ಷಿಕೆ ಗೀತೆ ಹಾಡುವ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಿದ್ದರು. ಐಎಫ್ ಎಫ್ ಎಸ್ ಎ ಕಾರ್ಯಕ್ರಮದ ನಂತರ ಆಯೋಜನೆಗೊಂಡಿದ್ದ ಡಿನ್ನರ್ ಕ್ಯಾನ್ಸಲ್ ಆಗಿದ್ದು ಬಾಲು ಅವರ ಆರೋಗ್ಯದ ಬಗ್ಗೆ ಇನ್ನಷ್ಟು ಆತಂಕ ಹೆಚ್ಚಿಸಿತ್ತು. ಆದರೆ, ಯಾವುದೇ ಗಾಳಿಸುದ್ದಿಗೆ ಅಭಿಮಾನಿಗಳು ಕಿವಿಗೊಡುವುದು ಬೇಡ ಎಂದು ಬಾಲು ಹೇಳಿದ್ದಾರೆ.
ಬೆಂಗಳೂರಿಗೆ ಬರುತ್ತಿದ್ದಾರೆ: ದಕ್ಷಿಣ ಆಫ್ರಿಕಾದಿಂದ ಹೊರಟು ಹೈದರಾಬಾದಿಗೆ ಹೋಗಿ ನಂತರ ಜ.26ಕ್ಕೆ ಬೆಂಗಳೂರಿಗೆ ಎಸ್ ಪಿ ಬಾಲಸುಬ್ರಮಣ್ಯಂ ಬರುತ್ತಿದ್ದಾರೆ. ಜ.26ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ 'ಸಂತೋಷಕ್ಕೆ.. ಹಾಡು ಸಂತೋಷಕ್ಕೆ' ಸಂಗೀತ ಕಾರ್ಯಕ್ರಮದಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಪಾಲ್ಗೊಳ್ಳಲಿದ್ದಾರೆ.
ಗಾಂಧಾರ್ ಸಂಸ್ಥೆ ಪರವಾಗಿ ಗಾಯಕಿ ಅರ್ಚನಾ ಉಡುಪ ಅವರು ಕಾರ್ಯಕ್ರಮದ ವಿವರ ನೀಡಿದ್ದು, ಸಂಗೀತ ಮಾಂತ್ರಿಕ 'ಇಳಯರಾಜ ಗೀತಧಾರೆ' ಸರಣಿಯಲ್ಲಿ ಪದ್ಮಭೂಷಣ ಡಾ. ಎಸ್.ಪಿ ಬಾಲಸುಬ್ರಮಣ್ಯಂ ಅವರು ನಮ್ಮೊಂದಿಗೆ ಹಾಡಲಿದ್ದಾರೆ.
ಜತೆಗೆ ಶ್ರೀನಿವಾಸ ಉಡುಪ, ಅನುರಾಧಾ ಭಟ, ಮೋಹನ್, ಶ್ರೀನಿವಾಸಮೂರ್ತಿ, ಉದಯ್ ಅಂಕೋಲ, ಉಷಾ ಉಮೇಶ್, ದಿವ್ಯಾ ಜೈಶಂಕರ್, ರಜನಿ, ಪ್ರಾರ್ಥನಾ, ಬಿಎಸ್ ರವಿಶಂಕರ್, ಅಂತರ್ಧ್ವನಿ ದನಿಗೂಡಿಸಲಿದ್ದಾರೆ. ಸಂಗೀತ ನಿರ್ವಹಣೆ: ಡಿ. ಶ್ರೀನಿವಾಸ್, ಆಚಾರ್, ಜಿಎಸ್ ವೇಣುಗೋಪಾಲ್,
ಅಂದ ಹಾಗೆ ಈ ಸಂಗೀತ ರಸಧಾರೆ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಎಸ್ ಪಿ ಬಾಲಸುಬ್ರಮಣ್ಯ ಗಾನಸುಧೆಯಲ್ಲಿ ಅಭಿಮಾನಿಗಳು ಮಿಂದೇಳಬಹುದು.


Click it and Unblock the Notifications











