ಸೋಲು ನಂಗೆ ಆಗೋದಿಲ್ಲಪ್ಪ ಎಂದು ಹಾಡಿದ ಪುನೀತ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೊಮ್ಮೆ ಹಾಡಿದ್ದಾರೆ. ಈ ಬಾರಿ ಅವರು 'ಅಲೆ' ಚಿತ್ರಕ್ಕಾಗಿ ಯೋಗರಾಜ್ ಭಟ್ ಬರೆದಿರುವ ಈ ಗೀತೆ ಪುನೀತ್ ಅವರ ಕಂಠಸಿರಿಯಲ್ಲಿ ಮಧುರವಾಗಿ ಮೂಡಿಬಂದಿದೆ. ಈ ಹಾಡನ್ನು ಇತ್ತೀಚೆಗೆ ಸಂಗೀತ ನಿರ್ದೇಶಕ ಮನೋಮೂರ್ತಿ ಅವರ ಸ್ಟುಡಿಯೋದಲ್ಲಿ ಹಾಡಿದರು.
"ಸೋಲು ನಂಗೆ ಆಗೋದಿಲ್ಲಪ್ಪ ಅದಕ್ಕೆ ನಾನು ಹಾಡುತೀನಪ್ಪ..." ಎಂಬ ಯೋಗರಾಜ್ ಭಟ್ ರಚಿಸಿರುವ ಹಾಡು ಎಲ್ಲರ ಮೆಚ್ಚುಗೆ ಗಳಿಸಲಿದೆ ಎನ್ನುತ್ತಾರೆ ನಿರ್ದೇಶಕ ಆದತ್. ಕೆ.ಕೆ.ಆರ್ ಮೂವೀ ಹೌಸ್ ಲಾಂಛನದಲ್ಲಿ ಕಿರಣ್ ಕುಮಾರ್ ರೆಡ್ಡಿ ಅವರು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.
ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ವಿಜಯ್ ಭರಮಸಾಗರ ಸಂಭಾಷಣೆ ಬರೆದಿದ್ದಾರೆ. ಎ.ಕೆ.ಎನ್ ಸೆಬಾಸ್ಟೇನ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಕೆ. ಎಂ.ಪ್ರಕಾಶ್ ಸಂಕಲನ, ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಹಾಗೂ ಬಾಬುಖಾನ್ ಕಲಾ ನಿರ್ದೇಶನ 'ಅಲೆ' ಚಿತ್ರಕ್ಕಿದೆ.
ತನುಷ್ ಈ ಚಿತ್ರದ ನಾಯಕ. ಹರ್ಷಿಕ ಪೂಣಚ್ಚ ನಾಯಕಿ. ಈ ಹಿಂದೆ ಪುನೀತ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಶೈಲೂ ಚಿತ್ರಕ್ಕಾಗಿ ಹಾಡಿದ್ದರು. ಈಗ ಮತ್ತೊಮ್ಮೆ ಅವರಿಗೆ ಹಾಡುವ ಅವಕಾಶ ಸಿಕ್ಕಿದೆ. ಮನೋಮೂರ್ತಿ ಅವರ ಒತ್ತಾಯದ ಮೇರೆಗೆ ಪುನೀತ್ ಈ ಹಾಡನ್ನು ಹಾಡಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











