ಸಿಧು ಮೂಸೆವಾಲಾ ಹಾಡಿದ್ದ ಕೊನೆಯ ಹಾಡು ಬಿಡುಗಡೆ ಆದ ಮೂರೇ ದಿನಕ್ಕೆ ಡಿಲೀಟ್!
ಕಳೆದ ತಿಂಗಳು ದುಷ್ಕರ್ಮಿಗಳಿಂದ ಸಿನಿನಿಮೀಯ ಮಾದರಿಯಲ್ಲಿ ಹತ್ಯೆಗೊಳಗಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹಾಡಿದ್ದ ಕೊನೆಯ ಹಾಡು ಕೆಲವು ದಿನಗಳ ಹಿಂದಷ್ಟೆ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿತ್ತು. ಆದರೆ ಆ ಹಾಡನ್ನು ತೆಗೆದು ಹಾಕಿದೆ ಯೂಟ್ಯೂಬ್.
ಸಿಧು ಮೂಸೆವಾಲಾ ಹಾಡಿದ್ದ ಕೊನೆಯ ಹಾಡು ಆತನ ನಿಧನದ ಬಳಿಕ ಜೂನ್ 23 ರಂದು ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿತ್ತು. ಹಾಡನ್ನು ಸಿಧು ಮೂಸೆವಾಲಾ ಅಭಿಮಾನಿಗಳು ಮುಗಿಬಿದ್ದ ನೋಡಿದ್ದರು. ಹಾಡನ್ನು 2.70 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿತ್ತು. 33 ಲಕ್ಷಕ್ಕೂ ಹೆಚ್ಚು ಮಂದಿ ಹಾಡಿಗೆ ಲೈಕ್ ಒತ್ತಿದ್ದರು. ಆದರೆ ಈಗ ಹಾಡನ್ನು ಡಿಲೀಟ್ ಮಾಡಲಾಗಿದೆ.
ಹಾಡಿನಲ್ಲಿ ಕೆಲವು ವಿವಾದಾತ್ಮಕ ಅಂಶಗಳ ಬಗ್ಗೆ ಸಾಹಿತ್ಯವಿತ್ತು. ಇಂದಿರಾ ಗಾಂಧಿ ಹತ್ಯೆ, ಗೋಲ್ಡನ್ ಟೆಂಪಲ್ ಮೇಲೆ ದಾಳಿ, ಸತ್ಲೇಜ್-ಯಮುನಾ ನದಿ ಜೋಡಣೆ, ಡೆಲ್ಲಿ ಚಲೋ ಪ್ರತಿಭಟನೆ, ಪಂಜಾಬ್ ರೀ ಆರ್ಗನೈಜೇಶನ್ ಕಾಯ್ದೆ ಇನ್ನೂ ಕೆಲವು ವಿಷಯಗಳ ಬಗ್ಗೆ ಹಾಡಿನಲ್ಲಿ ಹೇಳಲಾಗಿತ್ತು. ಅದಕ್ಕೆ ಸಂಬಂಧಿಸಿದ ಕೆಲವು ಚಿತ್ರಗಳು, ವಿಡಿಯೋ ಅನ್ನು ಹಾಡಿನಲ್ಲಿ ಬಳಸಲಾಗಿತ್ತು.

ಹಾಡಿನಲ್ಲಿ ವಿವಾದಾತ್ಮಕ ಅಂಶಗಳಿದ್ದವು
ಹಾಡಿನಲ್ಲಿ ಕೆಲವು ವಿವಾದಾತ್ಮಕ ಅಂಶಗಳಿದ್ದವೂ ಎಂಬ ಕಾರಣಕ್ಕೆ ಹಾಡನ್ನು ಡಿಲೀಟ್ ಮಾಡಿರುವುದಾಗಿ ಯೂಟ್ಯೂಬ್ನ ಭಾರತದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಭಾರತದ ಕೆಲವು ರಾಜ್ಯ ಸರ್ಕಾರ ಸೇರಿದಂತೆ ವಿದೇಶದ ಕೆಲವು ಸರ್ಕಾರಗಳು ಸಹ ಹಾಡನ್ನು ಹಿಂಪಡೆಯುವಂತೆ ಮನವಿ ಮಾಡಿದ್ದವು ಅಲ್ಲದೆ, ಹಾಡಿನ ಸಾಹಿತ್ಯ ಯೂಟ್ಯೂಬ್ನ ಪಾಲಿಸಿಗೆ ವಿರುದ್ಧವಾಗಿದ್ದ ಕಾರಣ ಹಾಡನ್ನು ಡಿಲೀಟ್ ಮಾಡಲಾಗಿದೆ ಎಂದಿದ್ದಾರೆ.

ಸಿಧು ಮೂಸೆವಾಲಾ ಅಭಿಮಾನಿಗಳ ಆಕ್ರೋಶ
ಆದರೆ ಹಾಡನ್ನು ಡಿಲೀಟ್ ಮಾಡಿದ್ದಕ್ಕೆ ಸಿಧು ಮೂಸೆವಾಲಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಖ್ಖರ ವಿರುದ್ಧ ಸರ್ಕಾರಗಳು ಈ ರೀತಿಯ ದೌರ್ಜನ್ಯ, ಅನ್ಯಾಯವನ್ನು ಮುಂಚಿನಿಂದಲೂ ಎಸಗುತ್ತಲೇ ಬಂದಿವೆ ಎಂದಿದ್ದಾರೆ. ಸಿಧು ಮೂಸೆವಾಲಾ ಹಾಡಿರುವ ಕೊನೆಯ ಹಾಡನ್ನು ಮತ್ತೆ ಯೂಟ್ಯೂಬ್ನಲ್ಲಿ ಪ್ರಸಾರ ಮಾಡಬೇಕು ಎಂದು ಆನ್ಲೈನ್ನಲ್ಲಿ ಅಭಿಯಾನ ಸಹ ಆರಂಭಿಸಿದ್ದಾರೆ.

ಮೇ 29 ರಂದು ಹತ್ಯೆ ಮಾಡಲಾಗಿತ್ತು
ಸಿಧು ಮೂಸೆವಾಲಾ, ಪಂಜಾಬ್ನ ಜನಪ್ರಿಯ ಗಾಯಕರಾಗಿದ್ದರು ಹಾಗೂ ಕಾಂಗ್ರೆಸ್ ಮುಖಂಡರೂ ಆಗಿದ್ದರು. ಸಿಧು ಅವರನ್ನು ಮೇ 29 ರಂದು ಪಂಜಾಬಿನ ಜವಾಹಾರ್ಕೆಯಲ್ಲಿ ಕೊಲ್ಲಲಾಯ್ತು. ಸಿಧು ಅನ್ನು ಲಾರೆನ್ಸ್ ಬಿಶ್ಣೋಯಿ ಹಾಗೂ ಗೋಲ್ಡಿ ಬ್ರಾರ್ ಕೊಲ್ಲಿಸಿದ್ದಾರೆ ಎನ್ನಲಾಗಿದೆ. ಗೋಲ್ಡಿ ಬ್ರಾರ್ ಸಹೋದರರು ತಾವೇ ಸಿಧು ಅನ್ನು ಕೊಲ್ಲಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಸಿಧು ಮೂಸೆವಾಲಾ ಹತ್ಯೆಗೆ ಕಾರಣವೇನು?
ಸಿಧು ಮೂಸೆವಾಲಾ ಹಲವು ಪಂಜಾಬಿ ಹಾಡುಗಳನ್ನು ಹಾಡಿದ್ದಾರೆ. ಈ ಹಿಂದೆ ವ್ಯಕ್ತಿಯೊಬ್ಬರ ಕೊಲೆಗೆ ಸಿಧು ಕಾರಣರಾಗಿದ್ದರು, ಹಂತಕರಿಗೆ ಸಂಪನ್ಮೂಲ ಒದಗಿಸಿದ್ದರು ಎಂಬ ಕಾರಣಕ್ಕೆ ಸಿಧುವನ್ನು ಹತ್ಯೆ ಮಾಡಿರುವುದು ಗೋಲ್ಡಿ ಬ್ರಾರ್ ಹೇಳಿದ್ದಾರೆ. ಸಿಧು ಮೂಸೆವಾಲಾ ಹತ್ಯೆ ಪಂಜಾಬ್ನಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿದೆ. ಪಂಜಾಬ್ನಲ್ಲಿ ಅಧಿಕಾರಕ್ಕೆ ಬಂದ ಎಎಪಿ ಸರ್ಕಾರ ಸಿಧು ಮೂಸೆವಾಲಾ ಸೇರಿದಂತೆ ಸಾವಿರಾರು ಮಂದಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆದಿತ್ತು. ಇದಾದ ಒಂದೇ ದಿನಕ್ಕೆ ಸಿಧುವಿನ ಹತ್ಯೆ ನಡೆಯಿತು. ಇದರಿಂದಾಗಿ ಸರ್ಕಾರದ ವಿರುದ್ಧ ವಿಪಕ್ಷಗಳು ಆರೋಪ ಮಾಡಿದವು.


Click it and Unblock the Notifications











