ಹಂಸಲೇಖರ ಕಣ್ಣಲ್ಲಿ ನೀರು ತರಿಸಿದ ರವಿಚಂದ್ರನ್
ಸಂಗೀತದಲ್ಲಿನ ಹಂಸಲೇಖ ಸಾಧನೆಯನ್ನು ಮುಖ್ಯಮಂತ್ರಿ ಸದಾನಂದ ಗೌಡ ಬಣ್ಣಿಸಿ ಮಾತು ಮುಗಿಸುತ್ತಿದ್ದಂತೆ ಬಹಳಷ್ಟು ತಾರೆಗಳು ಹಂಸಲೇಖರಿಗೆ ಶುಭ ಹಾರೈಸಿರುವ ಕ್ಲಿಪ್ಪಿಂಗ್ಸ್ ತೋರಿಸಲಾಯಿತು. ಕೊನೆಯಲ್ಲಿ ಎಲ್ಲರಿಗೂ ಒಂದು ವಿಶೇಷ ಕಾದಿತ್ತು. ಅದು ಕ್ರೇಜಿಸ್ಟಾರ್ ರವಿಚಂದ್ರನ್, ಹಂಸಲೇಖರ ಬಗ್ಗೆ ಆಡಿದ ಮಾತುಗಳು.
ರವಿಚಂದ್ರನ್ ಹಾಗೂ ಹಂಸಲೇಖ ಜೋಡಿ ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ಜೋಡಿಗಳಲ್ಲೊಂದು. ಪ್ರೇಮಲೋಕ, ರಣಧೀರ, ಅಂಜದ ಗಂಡು, ರಾಮಾಚಾರಿ ಹೀಗೆ ಬಹಳಷ್ಟು ಸೂಪರ್ ಹಿಟ್ ಚಿತ್ರಗಳು ಈ ಜೋಡಿಯಿಂದ ಬಂದಿವೆ. ಕನ್ನಡಿಗರು ಈ ಜೋಡಿಯನ್ನು ಮೆಚ್ಚಿದ್ದಾರೆ, ಹರಸಿದ್ದಾರೆ. ಆದರೆ ಏನೋ ಮನಸ್ತಾಪಕ್ಕೆ ದಶಕಗಳ ಹಿಂದೆ ಬೇರೆಯಾಗಿದ್ದ ಈ ಜೋಡಿ ಕಳೆದ ವರ್ಷವಷ್ಟೇ ಮತ್ತೆ ಒಂದಾಗಿದೆ.
"ನನಗಾಗಿ ಹುಟ್ಟಿದ್ದಕ್ಕೆ ಧನ್ಯವಾದಗಳು" ಇದು ಕ್ಲಿಪ್ಪಿಂಗ್ ನಲ್ಲಿದ್ದ ರವಿಚಂದ್ರನ್ ಮಾತು. ಇದನ್ನು ಕೇಳಿ ವೇದಿಕೆಯ ಮೇಲಿದ್ದ ಹಂಸಲೇಖ ಕಣ್ಣೀರಾದರು. ಬಹುಶಃ ಅವರಿಬ್ಬರೂ ದಶಕಗಳಿಗಿಂತಲೂ ಹೆಚ್ಚು ಕಾಲ ಜೋಡಿಯಾಗಿ ಕನ್ನಡ ಚಿತ್ರರಂಗವನ್ನು ಆಳಿದ್ದು ನೆನಪಾಗಿರಬೇಕು. ರವಿಚಂದ್ರನ್ ಆಡಿದ ಮಾತುಗಳು ಹಂಸಲೇಖರ ಹೃದಯಕ್ಕೇ ನಾಟಿರಬೇಕು.
ಹಂಸಲೇಖರ ಹುಟ್ಟುಹಬ್ಬಕ್ಕೆ ಅವರ ಮಗಳು ರವಿಚಂದ್ರನ್ ಅವರಿಗೆ ಆಹ್ವಾನ ಕೊಡಲು ಹೋಗಿದ್ದರು. ಆಗ ಮಾತನಾಡಿದ ರವಿಚಂದ್ರನ್ "ನಾನು ಒಂದೇ ವಾಕ್ಯದಲ್ಲಿ ಹಂಸಲೇಖರ ಬಗ್ಗೆ 'ವಿಶ್' ಮಾಡಲಾರೆ. ಅವರ ಆತ್ಮೀಯ ಸ್ನೇಹಿತನಾಗಿ ನಾನು ಕನಿಷ್ಠ ಚಿಕ್ಕದೊಂದು ವಿಡಿಯೋ ಕ್ಲಿಪ್ಪಿಂಗ್ ಮೂಲಕವಾದರೂ ಕೃತಜ್ಞತೆ ಹೇಳಲೇಬೇಕು" ಎಂದು ವಿನಂತಿಸಿಕೊಂಡರಂತೆ.
ಅದರಂತೆ, ವಿಡಿಯೋ ಕ್ಲಿಪ್ಪಿಂಗ್ ಮೂಲಕ ತಮ್ಮ ಆತ್ಮೀಯ ಸ್ನೇಹಿತ ಹಂಸಲೇಖರಿಗೆ ಶುಭಾಶಯ ಕೋರಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್. ಆ ವಿಡಿಯೋ ಕ್ಲಿಪ್ಪಿಂಗ್ 15 ನಿಮಿಷ ಅವಧಿಯದ್ದಾಗಿದ್ದು ರವಿಚಂದ್ರನ್ ಅವರ ಎಂದಿನ ಶೈಲಿಯ ಮಾತುಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲ, ಬೆಳಗುತ್ತಿರುವ ಕ್ಯಾಂಡಲ್ಸ್ ಹಾಗೂ ಹಾರಾಡುತ್ತಿರುವ ಪಾರಿವಾಳಗಳಿರುವ ಸೆಟ್ ಒಂದರಲ್ಲಿ ರವಿಚಂದ್ರನ್ ಅದನ್ನು ಶೂಟ್ ಮಾಡಿದ್ದಾರೆ.
ಇದನ್ನು ನೋಡುತ್ತಿದ್ದಂತೆ ಹಂಸಲೇಖ ಮೂಕವಿಸ್ಮಿತರಾದರು. 'ನನಗಾಗಿ ಹುಟ್ಟಿದ್ದಕ್ಕೆ ಥ್ಯಾಂಕ್ಸ್' ಎಂಬ ಮಾತಿಗೆ ಅಕ್ಷರಶಃ ಕಣ್ಣೀರಾದರು. ನೆರೆದಿದ್ದ ಪ್ರೇಕ್ಷಕರೂ ಕೂಡ ಆಶ್ಚರ್ಯಚಕಿತರಾದರು. ಕೆಲವರು ಹಂಸಲೇಖರ ಕಣ್ಣೀರಿಗೆ ಜೊತೆಯಾದರು. ಹಂಸಲೇಖ ಹಾಗೂ ರವಿಚಂದ್ರನ್ ಸ್ನೇಹಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ಹಾಗೇ ದೂರವಾದಾಗಿನ ನೋವಿಗೂ ಇದೇ ಉದಾಹರಣೆ ಆಗಬಲ್ಲದು. ಒನ್ ಇಂಡಿಯಾ ಕನ್ನಡ)


Click it and Unblock the Notifications












