ಕನ್ನಡ ಹಾಡು ಹಾಡಲು ನಟ ಧನುಷ್ ಗೆ ರು. 4 ಲಕ್ಷ
ಈ ರೀತಿಯ ಹೊಸ ಹೊಸ ಸಾಹಸಗಳಿಗೆ ಸ್ಯಾಂಡಲ್ ವುಡ್ ಚಿತ್ರರಂಗ ಆಗಾಗ ಸಾಕ್ಷಿಯಾಗುತ್ತಿರುತ್ತದೆ. ಈಗ ಅಂತಹದ್ದೇ ಒಂದು ಸಾಹಸವನ್ನು 'ವಜ್ರಕಾಯ' ಚಿತ್ರತಂಡ ಮಾಡಿದೆ. ತಮಿಳು ನಟ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ಧನುಷ್ ಕೈಯಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಹಾಡನ್ನು ಹಾಡಿಸುತ್ತಿರುವುದು.
ಇದಕ್ಕಾಗಿ ಅವರಿಗೆ ಕೊಡುತ್ತಿರುವ ಸಂಭಾವನೆ ರು.4 ಲಕ್ಷ ಎಂದರೆ ನೀವು ನಂಬಲೇಬೇಕು. ಧನುಷ್ ಅವರ ಕಂಠಕ್ಕೆ ಈ ಪಾಟಿ ಬೆಲೆ ಇದೆಯಾ ಎಂದೂ ಸ್ಯಾಂಡಲ್ ವುಡ್ ಮಂದಿ ಮೂಗಿನ ಮೇಲೆ ಬೆರಳಿಡುವಂತಾಗಿದೆ. [ಕನ್ನಡಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್]

ಗೀತಸಾಹಿತಿ ಮೋಹನ್ ಅವರು ಬರೆದಿರುವ "ನೋ ಪ್ರಾಬ್ಲಂ ನೋ ಪ್ರಾಬ್ಲಂ..." ಎಂಬ ಹಾಡನ್ನು ಧನುಷ್ ಹಾಡಿದ್ದು ಈಗಾಗಲೆ ಚೆನ್ನೈನಲ್ಲಿ ಧ್ವನಿಮುದ್ರಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ಈ ಹಾಡು ಯೂಟ್ಯೂಬ್ ಗೆ ಹಾಕುವುದಾಗಿ ಚಿತ್ರದ ನಿರ್ದೇಶಕ ಹರ್ಷ ಅವರು ಹೇಳಿದ್ದಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಎ ಹರ್ಷ ಅವರ ಆಹ್ವಾನದ ಮೇರೆಗೆ ಹಾಗೂ ಡಾ.ರಾಜ್ ಕುಮಾರ್ ಅವರ ಕುಟುಂಬದ ಮೇಲಿನ ಅಭಿಮಾನಕ್ಕೆ ತಾವು ಈ ಹಾಡನ್ನು ಒಪ್ಪಿಕೊಂಡಿರುವುದಾಗಿ ಧನುಷ್ ಹೇಳಿದ್ದಾರೆ. ಇನ್ನೊಂದು ಮುಖ್ಯವಾದ ವಿಚಾರ ಎಂದರೆ ಧನುಷ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಬ್ಬರೂ ಆತ್ಮೀಯ ಗೆಳೆಯರು.
'ಭಜರಂಗಿ' ಚಿತ್ರದ ಬಳಿಕ ನಿರ್ದೇಶಕ ಎ ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಬರುತ್ತಿರುವ ಎರಡನೇ ಚಿತ್ರ 'ವಜ್ರಕಾಯ'. ಈ ಚಿತ್ರದಲ್ಲಿ ಜಯಸುಧಾ ಅವರು ವಿಶೇಷ ಪಾತ್ರವನ್ನು ಪೋಷಿಸುತ್ತಿದ್ದಾರೆ. 'ಕೊಲವರಿ ಡಿ' ಹಾಡಿನಂತೆ ಇದೂ ಸೂಪರ್ ಹಿಟ್ ಆಗುವ ನಿರೀಕ್ಷೆಗಳನ್ನು ಚಿತ್ರತಂಡ ಇಟ್ಟುಕೊಂಡಿದೆ.


Click it and Unblock the Notifications











