'ರಾಜನ್'ಗೆ ಗುರುವಂದನೆ ಸಲ್ಲಿಸಿದ ಎಸ್.ಪಿ.ಬಿ
ಭಾನುವಾರ ಸಂಜೆ ಅರ್ಧಕರ್ಧ ಬೆಂಗಳೂರು ಮಳೆಯಲ್ಲಿ ತೋಯ್ದು ಹೋದಂತಿದ್ದರೆ, ಕುಮಾರ ಸ್ವಾಮಿ ಲೇಔಟ್ ನ ದಯಾನಂದ್ ಸಾಗರ್ ಕಾಲೇಜು ಸಭಾಂಗಣದಲ್ಲಿ ಮಾತ್ರ ಸಂಗೀತ ಪ್ರೇಮಿಗಳೆಲ್ಲಾ ಮಿಂದು ಹೋಗಿದ್ದರು. ಅದಕ್ಕೆ ಕಾರಣ ರಾಜನ್ ನಾಗೇಂದ್ರರ ಸಂಗೀತ ರಸಧಾರೆ.!
ಮಹಾ ಸಿಮೆಂಟ್ ನವರು ಪ್ರಾಯೋಜಿಸಿದ್ದ 'ರಾಜನ್ ಸಹಸ್ರ ಚಂದ್ರದರ್ಶನ' ಕಾರ್ಯಕ್ರಮ ಶುರುವಾಗಿದ್ದು, ಸಂಗೀತ ನಿರ್ದೇಶಕ ರಾಜನ್ ರ 'ಸಪ್ತ ಸ್ವರಾಂಜಲಿ' ಸಂಗೀತ ವಿದ್ಯಾರ್ಥಿಗಳ ಗಣೇಶ ಪ್ರಾರ್ಥನೆಯೊಂದಿಗೆ.

ಅದಕ್ಕೂ ಮೊದಲು ಖ್ಯಾತ ಹಿನ್ನೆಲೆ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ, ಹಿರಿಯ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ, ರಾಮಚಂದ್ರ ಗುರೂಜಿ, ಶಿವಕುಮಾರ ಸ್ವಾಮಿ ಮೊದಲಾದವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯ್ತು. [ರಾಜನ್ ನಾಗೇಂದ್ರ ಜೋಡಿಗೆ ರೋಟರಿ ಕ್ಲಬ್ ಗೌರವ]

ರಾಜನ್ ಶಿಷ್ಯವರ್ಗದಿಂದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಗುರುವಂದನೆ ಸಲ್ಲಿಸಿದ ಪರಿ ಇದು - ''ಇವರ ಸಂಗೀತದಲ್ಲಿ ಹೆಚ್ಚು ಹಾಡುಗಳನ್ನು ಹಾಡುವ ಅವಕಾಶ ಪಡೆದಿರುವುದು ನಾನೇ. ನನ್ನ ಹೆಮ್ಮೆ ಸಂಖ್ಯೆಗಷ್ಟೇ ಸೀಮಿತವಲ್ಲ; ಅವರಿಂದ ಸ್ವರ ಭಿಕ್ಷೆಯನ್ನೇ ಪಡೆದಿದ್ದೇನೆ. ನನ್ನ ಗಾಯನ ಬದುಕಿನ ಬಗ್ಗೆ ನಾನೇನಾದರೂ ಪುಸ್ತಕ ಬರೆದಲ್ಲಿ ಅದರ ದೊಡ್ಡ ಅಧ್ಯಾಯವಾಗಿ ರಾಜನ್ ಇರುತ್ತಾರೆ. ಅವರಿಗೆ ಹಾಡಿ ಸಂತೃಪ್ತಿ ನೀಡುವುದು ಕಷ್ಟ. ಒಂದು ಸಣ್ಣ ಸ್ವರದ ಏರಿಳಿತವಾದರೂ 30 ಟೇಕ್ ತನಕ ತೆಗೆದುಕೊಂಡು ಹೋಗಿ ತಿದ್ದುವ ಮಹಾನುಭಾವ ಅವರು.''

ಕನ್ನಡದ ಜನಪ್ರಿಯ ಗೀತೆಗಳನ್ನ ತಮ್ಮ ಮಾತೃಭಾಷೆಯಲ್ಲಿಯೂ ಹಾಡಬೇಕೆನ್ನುವ ಆಸೆಯಿಂದ 'ಬಾನಲ್ಲೂ ನೀನೆ' ಮೊದಲಾದ ಹಾಡುಗಳನ್ನು ತೆಲುಗಿನಲ್ಲಿನೂ ಬಳಸುವಂತೆ ಒತ್ತಡ ಹೇರಿದ್ದು ತಾವೇ ಅಂತ ಇದೇ ಸಂದರ್ಭದಲ್ಲಿ ಎಸ್.ಪಿ.ಬಿ ಸ್ಮರಿಸಿಕೊಂಡರು. ಇದೇ ವೇಳೆ ಡ್ರಮ್ ಮಾಸ್ಟರ್ ಶಿವಮಣಿ, ಗಾಯಕಿ ಬಿ.ಕೆ.ಸುಮಿತ್ರಾ, ನಿರ್ದೇಶಕ ಭಗವಾನ್ ಮೊದಲಾದ ಗಣ್ಯರು ರಾಜನ್ ಅವರಿಗೆ ಅಭಿನಂದನೆ ಸಲ್ಲಿಸಿದರು. [ರಾಜನ್ ನಾಗೇಂದ್ರ ಹಳೆ ಗೀತೆಗಳಿಗೆ ಹೊಸ ಸ್ಪರ್ಶ]
'ಹಳ್ಳಿಯಾದರೇನು ಶಿವ...', 'ಜೇನಿನ ಹೊಳೆಯೋ...', 'ನಾವಾಡುವ ನುಡಿಯೇ...' ಮೊದಲಾದ ಗೀತೆಗಳಿಗೆ ಅವರ ಶಿಷ್ಯವೃಂದ ದನಿಯಾಯಿತು.


Click it and Unblock the Notifications











