ತಾರೆಯರ 'ವಂದೇ ಮಾತರಂ' ಗೀತೆ ಅದ್ಭುತ: ಉಪ್ಪಿ, ದರ್ಶನ್, ಯಶ್ ಯಾಕಿಲ್ಲ?
ದೇಶಾದ್ಯಂತ 75ನೇ ವರ್ಷದ 'ಸ್ವಾತಂತ್ರ್ಯದ ಅಮೃತ ಮಹೋತ್ಸವ'ದ ಸಂಭ್ರಮ ಮನೆ ಮಾಡಿದೆ. 'ಹರ್ ಘರ್ ತಿರಂಗಾ' ಅಭಿಯಾನದಿಂದ ದೇಶದ ಮೂಲೆ ಮೂಲೆಯಲ್ಲೂ ತ್ರಿವರ್ಣ ಧ್ವಜ ಹಾರಾಡುತ್ತಿದೆ. ವಿಶ್ವದಾದ್ಯಂತ ಇರುವ ಭಾರತೀಯರು ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸುತ್ತಿದ್ದಾರೆ. ವಿಶೇಷವಾದ ಗೀತೆಯ ಮೂಲಕ ಸ್ಯಾಂಡಲ್ವುಡ್ ಸ್ಟಾರ್ಸ್ ತಾಯಿ ಭಾರತಿಗೆ ಗೌರವ ಸಮರ್ಪಿಸಿದ್ದಾರೆ.
ವಿಜಯ ಪ್ರಕಾಶ್ ಗಾಯನದಲ್ಲಿ 'ವಂದೇ ಮಾತರಂ' ಗೀತೆ ಮತ್ತೊಮ್ಮೆ ಮಾರ್ದನಿಸುತ್ತಿದೆ. ವಿ. ರವಿಚಂದ್ರನ್, ಕಿಚ್ಚ ಸುದೀಪ್, ಶಿವಣ್ಣ, ಜಗ್ಗೇಶ್, ರಮೇಶ್ ಅರವಿಂದ್, ಅನಂತ್ ನಾಗ್, ಧ್ರುವ ಸರ್ಜಾ, ಶ್ರೀಮುರಳಿ, ರಿಷಬ್ ಶೆಟ್ಟಿ, ರವಿಚಂದ್ರನ್, ಗಣೇಶ್, ಧನಂಜಯ್, ಅರ್ಜುನ್ ಸರ್ಜಾ ಸೇರಿದಂತೆ ಸಾಕಷ್ಟು ಕಲಾವಿದರು ಹಾಡಿನ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಲುಮರದ ತಿಮ್ಮಕ್ಕ, ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ಎಸ್.ಎಲ್. ಬೈರಪ್ಪ, ಜೋಗತಿ ಮಂಜಮ್ಮರಂತಹ ಬೇರೆ ಕ್ಷೇತ್ರಗಳ ಸಾಧಕರು ಹಾಡಿನ ಭಾವಕ್ಕೆ ತಕ್ಕಂತೆ ಜೀವ ತುಂಬಿದ್ದಾರೆ. ನಿಜಕ್ಕೂ ಬಹಳ ಸೊಗಸಾಗಿ ಗೀತೆಯನ್ನು ರೂಪಿಸಲಾಗಿದೆ.
ಕಳೆದೊಂದು ವಾರದಿಂದ ರಾಷ್ಟ್ರಮಟ್ಟದಲ್ಲಿ 'ಹರ್ ಘರ್ ತಿರಂಗಾ' ಗೀತೆ ಸದ್ದು ಮಾಡುತ್ತಿದೆ. ಇದೀಗ ಕನ್ನಡ ಸಿನಿಮಾ ನಟರು ಹಾಗೂ ಸಾಧಕರು ಭಾಗಿಯಾಗಿರುವ 'ವಂದೇ ಮಾತರಂ' ಗೀತೆ ಎಲ್ಲರ ಗಮನ ಸೆಳೆದಿದೆ. ಜನರ ವಾಟ್ಸಾಪ್ ಸ್ಟೇಟಸ್, ಫೇಸ್ಬುಕ್, ಇನ್ಸ್ಟಾ ಸ್ಟೋರಿಯಲ್ಲಿ ರಾರಾಜಿಸುತ್ತಿದೆ. 'ಸ್ವಾತಂತ್ರ್ಯದ ಅಮೃತ ಮಹೋತ್ಸವ'ಕ್ಕೆ ಈ ಗೀತೆ ನಿಜಕ್ಕೂ ಒಳ್ಳೆ ತ್ರಿಬ್ಯೂಟ್. ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಟ್ವಿಟ್ಟರ್ನಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ.
ಸಾಧಕರು ಇಷ್ಟೇ ಜನನಾ?
'ವಂದೇ ಮಾತರಂ' ಗೀತೆ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಸಾಧಕರು ಅಂದರೆ ಇಷ್ಟೇ ಜನನಾ ಅನ್ನುವ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ. ಉಳಿದ ಸಾಧಕರು ಯಾಕಿಲ್ಲ. ಸಿನಿಮಾರಂಗದ ನಾಯಕರೇ ಹಾಡಿನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ನಟಿಯರು ಯಾರು ಚಿತ್ರರಂಗಕ್ಕೆ ಕೊಡುಗೆ ನೀಡಿಲ್ಲವೇ ಎನ್ನುವುದು ಇನ್ನೂ ಕೆಲವರ ಪ್ರಶ್ನೆ. ಎಲ್ಲಾ ಕ್ಷೇತ್ರಗಳ ಮತ್ತಷ್ಟು ಸಾಧಕರು ಹಾಡಿನಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಉಪ್ಪಿ, ದರ್ಶನ್, ಯಶ್ ಇಲ್ಲ!
ಚಿತ್ರರಂಗದ ನಟರನ್ನು ಬಳಸಿಕೊಂಡು 'ವಂದೇ ಮಾತರಂ' ಗೀತೆ ಕಟ್ಟಿಕೊಟ್ಟಿದ್ದೀವಿ. ಅಂದರೂ ಕೂಡ ಎಲ್ಲಾ ನಟರು ಕಾಣಿಸುತ್ತಿಲ್ಲವಲ್ಲ. ಉಪೇಂದ್ರ, ದರ್ಶನ್, ಯಶ್, ರಕ್ಷಿತ್ ಶೆಟ್ಟಿರಂತಹ ಸ್ಟಾರ್ಗಳೇ ಹಾಡಿನಲ್ಲಿ ಇಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ದುನಿಯಾ ವಿಜಿ, ಲವ್ಲಿಸ್ಟಾರ್ ಪ್ರೇಮ್, ನೀನಾಸಂ ಸತೀಶ್, ಪ್ರಜ್ವಲ್ ದೇವರಾಜ್ ಸೇರಿದಂತೆ ಬಹುತೇಕ ನಟರು ಹಾಡಿನಲ್ಲಿ ಇಲ್ಲ. ಹಾಡಿಗಾಗಿ ಇವರನ್ನೆಲ್ಲಾ ಸಂಪರ್ಕಿಸಿಲ್ವಾ ಅಥವ ಇವರು ಯಾರೂ, ಒಪ್ಪಲಿಲ್ವಾ? ಅನ್ನುವ ಚರ್ಚೆ ನಡೀತಿದೆ.

ಅಪ್ಪುನ ಮಿಸ್ ಮಾಡಿಕೊಂಡ ಫ್ಯಾನ್ಸ್!
ನೆಲ, ಜಲ, ಭಾಷೆ, ದೇಶ ಅಂದಾಕ್ಷಣ ಪುನೀತ್ ರಾಜ್ಕುಮಾರ್ ಸದಾ ಮುಂದೆ ನಿಲ್ಲುತ್ತಿದ್ದರು. ಅಪ್ಪು ಇದ್ದಿದ್ದರೇ ಹಾಡಿನ ಆರಂಭದಲ್ಲಿ ಅವರೇ ಕಾಣಿಸಿಕೊಳ್ಳಬೇಕಿತ್ತು. ಆದರೆ ವಿಧಿಯಾಟ, ಅಪ್ಪು ಇಂದು ನಮ್ಮೊಂದಿಗಿಲ್ಲ. ಸಾಧಕರ 'ವಂದೇ ಮಾತರಂ' ಗೀತೆಯಲ್ಲಿ ಪವರ್ ಸ್ಟಾರ್ನ ಅಭಿಮಾನಿಗಳು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಕೊನೆ ಪಕ್ಷ ಅವರ ಒಂದು ಫೋಟೊವನ್ನಾದರೂ ತೋರಿಸಬಹುದಿತ್ತು. ಸಂಪೂರ್ಣವಾಗಿ ಅಪ್ಪುನ ಮರೆತಿದ್ದಾರೆ ಅಂತ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

'ವಂದೇ ಮಾತರಂ' ಗೀತೆಗೆ ಸಂತು ಸಾರಥ್ಯ
ಸೂಪರ್ ಹಿಟ್ ಸಿನಿಮಾಗಳ ಸರದಾರ ಸಂತೋಷ್ ಆನಂದ್ರಾಮ್ ನಿರ್ದೇಶನದಲ್ಲಿ 'ವಂದೇ ಮಾತರಂ' ಗೀತೆ ನಿರ್ಮಾಣವಾಗಿದೆ. ಬಹಳ ಸೊಗಸಾಗಿ ಹಾಡಿನಲ್ಲಿ ದೇಶಭಕ್ತಿ ಭಾವವನ್ನು ಸೆರೆ ಹಿಡಿಯಲಾಗಿದೆ. ಪ್ರವೀಣ್ ಡಿ. ರಾವ್ ಸಂಗೀತ, ಶ್ರೀಶ ಕುದುವಲ್ಲಿ ಛಾಯಾಗ್ರಹಣ ಹಾಡಿಗಿದೆ. ಸ್ವತಃ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಈ ಹಾಡನ್ನು ನಿರ್ಮಾಣ ಮಾಡಿರುವುದು ವಿಶೇಷ.


Click it and Unblock the Notifications











