ಇನ್ನೊಂದು ಜನ್ಮ ಅಂತಿದ್ದರೆ ಕರ್ನಾಟಕದಲ್ಲೇ ಹುಟ್ಟುತ್ತೇನೆ
ಹಾಡು ಯಾರಿಗೂ ಸ್ವಂತ ಅಲ್ಲ. ಅದನ್ನು ಜನರಿಗೆ ಇನ್ನೂ ಹತ್ತಿರವಾಗುವಂತೆ ತಲುಪಿಸುವುದು ಇಂದಿನ ಯುವ ಗಾಯಕರ ಕರ್ತವ್ಯವಾಗಿದೆ. ನಾನು ಸೂಪರ್ ಸ್ಟಾರ್ ನಟನ ಪಾತ್ರಕ್ಕಾಗಲಿ, ಹೊಸದಾಗಿ ಪರಿಚಯವಾಗುತ್ತಿರುವ ನಟನ ಪಾತ್ರಕ್ಕಾಗಲಿ ಹಾಡುವಾಗ ಆ ಹಾಡಿನ ಮೇಲಷ್ಟೇ ಗಮನವಿರುತ್ತದೆ. ಹಾಡು ಚೆನ್ನಾಗಿ ಬರಬೇಕೆಂಬುದಷ್ಟೇ ನಮ್ಮ ಉದ್ದೇಶವಾಗಿರುತ್ತದೆ ಎಂದು ದಕ್ಷಿಣಭಾರತದ ಹೆಸರಾಂತ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹೇಳಿದ್ದಾರೆ.
ಅವರು ಭಾನುವಾರ (ಜು.21) ಸಂಜೆ ಸೌಂಡ್ ಅಂಡ್ ಮ್ಯೂಸಿಕ್ ನ ಗುರುರಾಜ್ ಅವರು ಸಂಗ್ರಹಿಸಿ ಹೊರತಂದ 'ಮಧುರ ಮಧುರವೀ ಮಂಜುಳಗಾನ' ಎಂಬ 514 ಹಳೇ ಚಿತ್ರಗೀತೆಗಳ ಸಾಹಿತ್ಯ ಸಂಗ್ರಹದ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಈ ಸಂಗ್ರಹದಲ್ಲಿ ತುಂಬಾ ಉಪಯುಕ್ತ ಮಾಹಿತಿಗಳಿವೆ. ಕರ್ನಾಟಕದಲ್ಲಿ ಸಂಗೀತ ಕಲಿಯುತ್ತಿರುವ ಪ್ರತಿಯೊಬ್ಬ ಉದಯೋನ್ಮುಖ ಗಾಯಕ-ಗಾಯಕಿಯರಿಗೆ ಈ ಪುಸ್ತಕ ತುಂಬಾ ಉಪಯೋಗವಾಗಲಿದೆ.ನಾನು 1966ರಲ್ಲಿ ಗಾಯಕನಾಗಿ ಚಿತ್ರರಂಗಕ್ಕೆ ಬಂದ ನಂತರ ಹಾಡಿದ ಎರಡನೇ ಹಾಡು ಕನ್ನಡ ಚಿತ್ರದ್ದು. ನನ್ನನ್ನು ಅಂದಿನಿಂದ ಇಂದಿನವರೆಗೂ ಹರಸಿ ಬೆಳೆಸಿ ಪ್ರೋತ್ಸಾಹಿಸಿದ ಕನ್ನಡಿಗರಿಗೆ ನಾನು ಎಷ್ಟು ಕೃತಜ್ಞತೆ ಅರ್ಪಿಸಿದರೂ ಸಾಲದು. ನನಗೇನಾದರೂ ಇನ್ನೊಂದು ಜನ್ಮ ಎಂಬುದಿದ್ದರೆ ಕರ್ನಾಟಕದಲ್ಲೇ ಹುಟ್ಟಬೇಕೆಂಬುದು ನನ್ನ ಆಸೆ ಎಂದು ಎಸ್.ಪಿ.ಬಿ ಕರ್ನಾಟಕದ ಜನತೆ ಹೃದಯಪೂರ್ವಕ ಧನ್ಯವಾದ ತಿಳಿಸಿದರು.
ಸೌಂಡ್ ಅಂಡ್ ಮ್ಯೂಸಿಕ್ ನ ಗುರುರಾಜ್ ಅವರು ಈ ಪುಸ್ತಕದ ಬಗ್ಗೆ ಮಾತನಾಡುತ್ತ ಸುಮಾರು ಎರಡು ವರ್ಷಗಳ ಕಾಲ ಶ್ರಮವಹಿಸಿ ಈ ಪುಸ್ತಕವನ್ನು ಹೊರತಂದಿದ್ದೇನೆ. ಇದರಲ್ಲಿ ಹಲವಾರು ಮಹನೀಯರ ಸಹಕಾರವಿದೆ ಎಂದರು. ಗಾಯಕ ಎಸ್.ಪಿ.ಬಿ ಅವರಿಗೆ ವಿಶೇಷ ಧನ್ಯವಾದ ತಿಳಿಸಿದರು. (ಒನ್ಇಂಡಿಯಾ ಕನ್ನಡ)


Click it and Unblock the Notifications












