ಏಪ್ರಿಲ್ 12ಕ್ಕೆ ಅಣ್ಣಾವ್ರ ಸುಪ್ರಭಾತ ಬಿಡುಗಡೆ
ಮುತ್ತುರಾಜನಾಗಿ ಬೆಳ್ಳಿಪರದೆಗೆ ಪರಿಚಿತನಾದ ನಟ. ದಶಕಗಳ ಕಾಲ ಕನ್ನಡಿಗರ ಪಾಲಿನ ಆರಾಧ್ಯದೈವನಾಗಿ ಬೆಳೆದ ಮಹಾನ್ ಚೇತನ. ಕನ್ನಡ ಕಲಾಲೋಕ ಎಂದಿಗೂ ಮರೆಯದ ಮಾಣಿಕ್ಯ 'ನಟಸಾರ್ವಭೌಮ' ಡಾ.ರಾಜ್ ಕುಮಾರ್.
ಡಾ.ರಾಜ್ ನಮ್ಮನ್ನಗಲಿ 9 ವರ್ಷ ಕಳೆದರೂ, ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಅಣ್ಣಾವ್ರು ಸದಾ ಚಿರಾಯು. ಅದಕ್ಕೆ ಉದಾಹರಣೆ ಇತ್ತೀಚೆಗೆ ಬಿಡುಗಡೆಯಾದ 'ಕಸ್ತೂರಿ ನಿವಾಸ' ಚಿತ್ರದ ಅಭೂತಪೂರ್ವ ಯಶಸ್ಸು.

ಇದೇ ಏಪ್ರಿಲ್ 12 ರಂದು ಡಾ.ರಾಜ್ ರವರ 9 ನೇ ವರ್ಷದ ಪುಣ್ಯತಿಥಿ. ಇದರ ಪ್ರಯುಕ್ತ ಅಣ್ಣಾವ್ರ ಮೇಲೆ ಸಿದ್ದವಾಗಿರುವ ಸುಪ್ರಭಾತ ಸಿ.ಡಿ ಬಿಡುಗಡೆಯಾಗಲಿದೆ. 27 ನಿಮಿಷದ ಈ ಸುಪ್ರಭಾತವು 18 ವಿವಿಧ ರಾಗಗಳಲ್ಲಿ ಮೂಡಿ ಬರಲಿದೆ.
ಡಾ.ರಾಜ್ ಸುಪ್ರಭಾತಕ್ಕೆ ಅಜಯ್ ವಾರಿಯರ್ ದನಿಯಾಗಿದ್ದು, ಎಲ್.ಎನ್.ಗೂಚಿ ಸಂಗೀತ ನೀಡಿದ್ದಾರೆ. ಚಿತ್ರದುರ್ಗದ ಕನ್ನಡ ಪ್ರಾಧ್ಯಾಪಕ ಕೃಷ್ಣಮೂರ್ತಿ ಈ ಸುಪ್ರಭಾತವನ್ನು ರಚಿಸಿದ್ದು, ಲಹರಿ ಆಡಿಯೋ ಸಂಸ್ಥೆ ಏಪ್ರಿಲ್ 12 ರಂದು ಬಿಡುಗಡೆ ಮಾಡಲಿದೆ. [ನಾವು ನೀವು ಅರಿಯದ ರಾಜ್ ಅಪರೂಪದ ಸಂಗತಿಗಳು]

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಚಿತ್ರನಟರೊಬ್ಬರ ಮೇಲೆ ಸುಪ್ರಭಾತ ತಯಾರಾಗಿರುವುದು ಇದೇ ಮೊದಲು. ಅಂತಹ ವಿನೂತನ ಗೌರವಕ್ಕೆ ಪಾತ್ರರಾಗಿದ್ದಾರೆ ಅಪ್ಪಾಜಿ. ಅಲ್ಲಿಗೆ, ಏಪ್ರಿಲ್ 12 ರಿಂದ ಮುಂಜಾನೆ ಎದ್ದ ತಕ್ಷಣ ಅಣ್ಣಾವ್ರ ಅಭಿಮಾನಿಗಳ ಬಾಯಲ್ಲಿ ರಾಜಣ್ಣನದ್ದೇ ಗುಣಗಾನ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











