'ನಗುತಾ ನಗುತಾ ಬಾಳು ನೀನು' ಹಾಡಿಗೆ ಹಂಸಲೇಖ ಬರೆದ ಸಾಹಿತ್ಯ ಏನು? ಅದು ಬದಲಾಗಿದ್ದು ಯಾಕೆ?
ಹುಟ್ಟುಹಬ್ಬ ಅಂದಾಕ್ಷಣ ಕನ್ನಡ ಸಿನಿರಸಿಕರಿಗೆ ನೆನಪಾಗೋದು 'ಪರಶು ರಾಮ್' ಚಿತ್ರದ 'ನಗುತಾ ನಗುತಾ ಬಾಳು ನೀನು' ಹಾಡು. ಇದನ್ನು ಮೀರಿಸುವಂತಹ ಕನ್ನಡ ಬರ್ತ್ಡೇ ಆಂಥಮ್ ಬರಲೇ ಇಲ್ಲ ಬಿಡಿ. ಇದೇ ಹಾಡನ್ನು ಪ್ಲೇ ಮಾಡಿ ಇವತ್ತಿಗೂ ಕೇಕ್ ಮಾಡುತ್ತಾರೆ. ಆದರೆ ಈ ಹಾಡು ಹುಟ್ಟಿದ ಸಮಯ ಬಹಳ ವಿಶೇಷ. ಕೇವಲ ಐದತ್ತು ನಿಮಿಷಗಳಲ್ಲಿ ಸಾಹಿತ್ಯ ಸಿದ್ಧವಾಗಿತ್ತು.
ಹಂಸಲೇಖ ಸಂಗೀತ ಸಂಯೋಜನೆಯ 'ಪರಶು ರಾಮ್' ಸಿನಿಮಾ ಆಲ್ಬಮ್ ಸೂಪರ್ ಹಿಟ್ ಆಗಿತ್ತು. ಸ್ವತಃ ನಾದಬ್ರಹ್ಮ ಎರಡು ಹಾಡುಗಳಿಗೆ ಸಾಹಿತ್ಯ ಬರೆದರೆ ಮತ್ತೆರೆಡು ಹಾಡುಗಳಿಗೆ ಚಿ. ಉದಯ್ ಶಂಕರ್ ಸಾಲುಗಳನ್ನು ಗೀಚಿದ್ದರು. ಅದ್ಯಾವ ಘಳಿಗೆಯಲ್ಲಿ 'ನಗುತಾ ನಗುತಾ ಬಾಳು ನೀನು' ಎಂದು ಹರಸಿ ಚಿ. ಉದಯ್ ಶಂಕರ್ ಬರೆದರೆ ಗೊತ್ತಿಲ್ಲ. ಇದು ಕನ್ನಡದ ಎವರ್ಗ್ರೀನ್ ಸಾಂಗ್ ಎನಿಸಿಕೊಂಡುಬಿಡ್ತು. ಅಚ್ಚರಿ ಅಂದರೆ ನಾದಬ್ರಹ್ಮ ಈ ಹಾಡಿಗೆ ಬೇರೆ ಸಾಹಿತ್ಯ ಬರೆದುಕೊಂಡಿದ್ದರು. ಅದು ಕೊನೆಗೆ 'ನಗುತಾ ನಗುತಾ ಬಾಳು ನೀನು' ಎಂದು ಬದಲಾಯಿತು. ಜನಪ್ರಿಯವಾಯಿತು.
ನಾದಬ್ರಹ್ಮ ಹಂಸಲೇಖ ತಮ್ಮ ಸಂಗೀತದ ಹಾಡುಗಳಿಗೆ ತಾವೇ ಸಾಹಿತ್ಯ ಬರೆಯುತ್ತಾರೆ. ಆರಂಭದಿಂದಲೂ ಅದನ್ನು ರೂಢಿಸಿಕೊಂಡು ಬಂದಿದ್ದಾರೆ. ಅವರು ಬೇರೆ ಸಂಗೀತ ನಿರ್ದೇಶಕರ ಟ್ಯೂನಿಗೆ ಹಾಡು ಬರೆದಿದ್ದು ಇದೆ. ಅವರ ಸಂಗೀತಕ್ಕೆ ಬೇರೆ ಸಾಹಿತಿಗಳು ಸಾಹಿತ್ಯ ಗೀಚಿದ್ದು ಇದೆ.

'ಕಂದ ಕಂದ ನಿನಗೆ ಹುಟ್ಟುಹಬ್ಬ'
ಹಂಸಲೇಖ ಪರಶುರಾಮ್ ಚಿತ್ರಕ್ಕೆ ಟ್ಯೂನ್ ಹಾಕಿ ಸಾಹಿತ್ಯವನ್ನು ಬರೆದುಬಿಟ್ಟಿದ್ದರು. 'ನಗುತಾ ನಗುತಾ ಬಾಳು' ಹಾಡಿಗೂ ಸಾಲುಗಳು ಸಿದ್ಧವಾಗಿತ್ತು. ಅದು ಹುಟ್ಟುಹಬ್ಬದ ಸಂಭ್ರಮಾಚರಣೆಯ ಸನ್ನಿವೇಶದಲ್ಲಿ ಬರುವ ಹಾಡು. ಹಾಗಾಗಿ 'ಕಂದ ಕಂದ ನಿನಗೆ ಹುಟ್ಟುಹಬ್ಬ' ಎಂದು ಶುರುವಾಗುವಂತೆ ಹಂಸಲೇಖ ಸಾಹಿತ್ಯ ಬರೆದಿದ್ದರು. ಆದರೆ ಚಿ. ಉದಯ್ ಶಂಕರ್ ಟ್ಯೂನ್ ಕೇಳಿ 'ನಗುತಾ ನಗುತಾ ಬಾಳು ನೀನು' ಎಂದು ಕೆಲವೇ ನಿಮಿಷಗಳಲ್ಲಿ ಬರೆದುಕೊಟ್ಟಿದ್ದರಂತೆ. ಈ ವಿಚಾರವನ್ನು ಸ್ವತಃ ಹಂಸಲೇಖ ಹೇಳಿಕೊಂಡಿದ್ದರು. ಡಾ. ರಾಜ್ಕುಮಾರ್ ಕಂಠದಲ್ಲಿ ಮೂಡಿ ಬಂದ ಹಾಡು ಎಷ್ಟು ಜನಪ್ರಿಯವಾಗಿದೆ ಎನ್ನುವುದು ಗೊತ್ತೇಯಿದೆ.

ಅಣ್ಣಾವ್ರ ಆಪ್ತಮಿತ್ರ ಚಿ. ಉದಯ್ ಶಂಕರ್
ಡಾ. ರಾಜ್ಕುಮಾರ್ ಯಶಸ್ಸಿನ ಹಿಂದಿನ ಶಕ್ತಿಗಳಲ್ಲಿ ಚಿ. ಉದಯಶಂಕರ್ ಬರವಣಿಗೆಯೂ ಒಂದು. ಅಣ್ಣಾವ್ರ ಸಾಕಷ್ಟು ಸಿನಿಮಾಗಳಿಗೆ ಅವರು ಸಾಹಿತ್ಯ, ಸಂಭಾಷಣೆ, ಚಿತ್ರಕಥೆ ಬರೆದಿದ್ದರು. ಇವರಿಬ್ಬರ ಕಾಂಬಿನೇಷನ್ ಸೂಪರ್ ಹಿಟ್ ಆಗಿತ್ತು. ಚಿ. ಉದಯ್ ಶಂಕರ್ ಅವರು ಅಣ್ಣಾವ್ರ ಪರಮಾಪ್ತ ಸ್ನೇಹಿತರಾಗಿದ್ದರು. ಡಾ. ರಾಜ್ ಸಿನಿಮಾಗಳ ಕಥೆ, ಚಿತ್ರಕಥೆ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಮುತ್ತರಾಜನ ಸೂಪರ್ ಹಿಟ್ ಸಿನಿಮಾಗಳಲ್ಲಿ ಇವರಿಗೂ ಕ್ರೆಡಿಟ್ ಸಿಗಬೇಕು.

'ಪರಶುರಾಮ್' ಸೂಪರ್ ಹಿಟ್
1989ರಲ್ಲಿ ತೆರೆಕಂಡಿದ್ದ 'ಪರಶುರಾಮ್' ಸಿನಿಮಾ ಬಾಕ್ಸಾಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಅಣ್ಣಾವ್ರ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಇದು ಅಷ್ಟಕ್ಕಷ್ಟೆ ಎನ್ನಲಾಗಿತ್ತು. ಆದರೆ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದರು. ಜಗ್ಗೇಶ್, ತೂಗುದೀಪ ಶ್ರೀನಿವಾಸ್, ದೊಡ್ಡಣ್ಣ, ವಾಣಿ ವಿಶ್ವನಾಥ್, ಮಹಾಲಕ್ಷ್ಮಿ ಚಿತ್ರದ ತಾರಾಗಣದಲ್ಲಿದ್ದರು.

ಬಾಲನಟನಾಗಿ ಪುನೀತ್ ಕೊನೆ ಚಿತ್ರ
ದಾಕ್ಷಾಯಿಣಿ ಕಂಬೈನ್ಸ್ ಬ್ಯಾನರ್ನಲ್ಲಿ ಪಾರ್ವತಮ್ಮ ರಾಜ್ಕುಮಾರ್ 'ಪರಶುರಾಮ್' ಚಿತ್ರವನ್ನು ನಿರ್ಮಾಣ ಮಾಡಿದ್ದರು. ವಿ. ಸೋಮಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಟೀನೇಜ್ ಹುಡುಗನಾಗಿ ನಟಿಸಿದ್ದರು. ಚಿತ್ರದಲ್ಲಿ ಅವರ ಪಾತ್ರದ ಹೆಸರು ಅಪ್ಪು. ಒಂದು ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದ್ದರು. ಆದರೆ ಈ ಸಿನಿಮಾ ನಂತರ ಪುನೀತ್ ಸಿನಿಮಾಗಳಲ್ಲಿ ನಟಿಸೋದು ಬೇಡ ಎಂದು ನಿರ್ಧರಿಸಿದ್ದರು. ಬಹಳ ವರ್ಷಗಳ ನಂತರ 'ಅಪ್ಪು' ಸಿನಿಮಾ ಮೂಲಕ ಹೀರೊ ಆಗಿ ಎಂಟ್ರಿ ಕೊಟ್ಟರು.


Click it and Unblock the Notifications











