ಹೊಸಬರ ಆಲ್ಬಂ ಹಾಡು ಬಿಡುಗಡೆ ಮಾಡಿ ಹರಸಿದ ಉಪೇಂದ್ರ
ಉತ್ಸಾಹಿ ಯುವ ತಂಡ ಮಾಡಿರುವ ಪ್ರೇಮಗೀತೆಯ ಆಲ್ಬಂ ಹಾಡನ್ನು ನಟ ಉಪೇಂದ್ರ ಅವರು ಬಿಡುಗಡೆ ಮಾಡಿ ತಂಡಕ್ಕೆ ಹರಸಿದ್ದಾರೆ.
'ನಾನು ನಾನು ಪ್ರೀತಿಸುತ್ತಿರುವೆ' ಆಲ್ಬಂ ಹಾಡನ್ನು ಉಪೇಂದ್ರ ಬಿಡುಗಡೆ ಮಾಡಿದ್ದು, 'ಇವಳು ಸುಜಾತ' ಧಾರಾವಾಹಿ, ಕೃಷ್ಣ ತುಳಸಿ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ನಟಿ ಮೇಘಶ್ರೀ ಇದೇ ಮೊದಲ ಬಾರಿಗೆ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರೇಮ ಕತೆಯುಳ್ಳ ಈ 'ನಾನು ನಾನು ಪ್ರೀತಿಸುತ್ತಿರುವೆ' ಆಲ್ಬಂ ಹಾಡಿನಲ್ಲಿ ಮೇಘಶ್ರೀ ಜೊತೆಗೆ ಹೊಸ ಪ್ರತಿಭೆ ಅರುಣ್ ಚಂದ್ರಪ್ಪ ನಾಯಕರಾಗಿ ನಟಿಸಿದ್ದಾರೆ. ಹಾಡು ಬಿಡುಗಡೆ ಆದ 24 ಗಂಟೆಗಳಲ್ಲಿ 1.5 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದುಕೊಂಡಿರುವುದು ವಿಶೇಷ.

ಇಡೀ ಹಾಡನ್ನು ಮಂಗಳೂರಿನ ಕಡಲ ತೀರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಸೌಂದರ್ಯಕ್ಕಿಂತ ಪ್ರೀತಿ ಮುಖ್ಯ ಎಂಬ ಸಂದೇಶ ಈ ಹಾಡಿನಲ್ಲಿದೆ. 'ತನಿಖೆ' ಎಂಬ ಚಿತ್ರಕ್ಕೆ ನಿರ್ದೇಶನ ಮಾಡಿರುವ ಜಿ.ಎಸ್. ಕಲಿಗೌಡ ಈ ಹಾಡಿಗೆ ಸಾಹಿತ್ಯ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಮುರಳಿ ಮಾಸ್ಟರ್, ಹುಸೇನ್ ನೃತ್ಯ ನಿರ್ದೇಶನ ಮಾಡಿದ್ದು, ಕ್ರಿಸ್ಟೋಫರ್ ಜೈಸನ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಣದ ಹೊಣೆ ಶ್ಯಾಮ್ ಸಿಂಧನೂರು ಅವರದ್ದು.
ಡಿಎಂಎಫ್ (ಡೈಮೆಂಡ್ ಟ್ರೀ ಮ್ಯೂಸಿಕ್ ಫ್ಯಾಕ್ಟರಿ) ಆಡಿಯೋ ಸಂಸ್ಥೆಯ ಮಮತಾ ಶ್ರೀ ಈ ಆಲ್ಬಂ ಸಾಂಗ್ನ ನಿರ್ಮಾಣವನ್ನು ಮಾಡಿದ್ದಾರೆ. 'ಹೊಸಬರಿಗೆ ವೇದಿಕೆ ಕಲ್ಪಿಸಬೇಕೆಂಬ ಉದ್ದೇಶದಿಂದ ಮಾಡಿದ ನಮ್ಮ ಮೊದಲ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಪ್ರಯತ್ನದಲ್ಲೇ ಗೆದ್ದಿರುವ ಖುಷಿ ತಂಡಕ್ಕಿದೆ. ತಿಂಗಳಿಗೊಂದು ಆಲ್ಬಂ ಸಾಂಗ್ ಮಾಡಬೇಕೆಂಬ ಕನಸು ಈಗ ಮತ್ತಷ್ಟು ಗಟ್ಟಿಯಾಗಿದೆ. ಹೊಸ ಸಿನಿಮಾದ ಹಾಡುಗಳ ರೈಟ್ಸ್ ಪಡೆದುಕೊಳ್ಳಲು ಡೈಮಂಡ್ ಟ್ರೀ ಮ್ಯೂಸಿಕ್ ಫ್ಯಾಕ್ಟರಿ ಮುಂದಾಗಿದೆ' ಎಂದು ಅವರು ಹೇಳಿದ್ದಾರೆ.


Click it and Unblock the Notifications











