ವಾಸು ದೀಕ್ಷಿತ್ ಕಂಠದಿಂದ ಪುರಂದರ ದಾಸರ ಪದ ಕೇಳಲು ಮರೆಯಬೇಡಿ
ರಘು ದೀಕ್ಷಿತ್ ಸಹೋದರ ವಾಸು ದೀಕ್ಷಿತ್ ಹಾಡಿರುವ ಒಂದು ಹಾಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಯೂಟ್ಯೂಬ್, ಫೇಸ್ ಬುಕ್... ಎಲ್ಲಿ ನೋಡಿದರೂ ವಾಸು ದೀಕ್ಷಿತ್ ಗಾನ ಲಹರಿಯದ್ದೇ ಸದ್ದು.
ವಾಸು ದೀಕ್ಷಿತ್ ಹಾಡಿರುವ ''ರಾಗಿ ತಂದೀರಾ... ಭಿಕ್ಷೆಗೆ ರಾಗಿ ತಂದೀರಾ...'' ಎಂಬ ಹಾಡು ಈಗ ಎಲ್ಲರೂ ಗುನುಗುವಂತೆ ಮಾಡಿದೆ. ಪುರಂದರದಾಸರ ಈ ಕೀರ್ತನೆಗೆ ಮ್ಯೂಸಿಕ್ ನೀಡಿ ಹಾಡಿನ ರೂಪದಲ್ಲಿ ತಂದಿದ್ದಾರೆ. 'ರಾಗಿ'ಯ ಮಹತ್ವವನ್ನು ಸಾರುವ ಈ ಹಾಡಿಗೆ ಆಧುನಿಕ ಟಚ್ ನೀಡಿದ್ದಾರೆ.

ಈ ಹಾಡಿನ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮಾಡಲಾಗಿದೆ. ಬೆಂಗಳೂರಿನ ಬಸ್ಸು, ರಸ್ತೆ, ದೇವಸ್ಥಾನ, ಬಸ್ ನಿಲ್ದಾಣ, ಹೋಟೆಲ್ ಎಲ್ಲ ಕಡೆ ಪುರಂದರದಾಸರ ಈ ಪದವನ್ನು ಹಾಡಿ ಜನರಿಗೆ ತಲುಪಿಸಿದ್ದಾರೆ. ಅಷ್ಟೇ ಅಲ್ಲದೆ ಇಂದಿನ ಜನರ ಬಾಯಲ್ಲಿ ದಾಸರ ಹಾಡನ್ನು ಹಾಡಿಸಿದ್ದಾರೆ.

ರಘು ದೀಕ್ಷಿತ್ ಸಂತ ಶಿಶುನಾಳ ಶರೀಫರ ಹಾಡನ್ನು ದೇಶ ವಿದೇಶಗಳಲ್ಲಿನ ಜನರಿಗೆ ತಲುಪಿಸುತ್ತಿದ್ದಾರೆ. ಇತ್ತ ಅವರ ಸಹೋದರ ವಾಸು ದೀಕ್ಷಿತ್ ಸಹ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಮೂರು ತಿಂಗಳ ಹಿಂದೆಯೇ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ರಿಲೀಸ್ ಆಗಿದ್ದರೂ, ಈಗೀಗ ಹಾಡಿಗೆ ಸಖತ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ವಾಸು ದೀಕ್ಷಿತ್ ಕಂಠದಲ್ಲಿ ಪುರಂದರದಾಸರ ಪದ ಕೇಳಲು ಈ ಲಿಂಕ್ ಕ್ಲಿಕ್ ಮಾಡಿ.


Click it and Unblock the Notifications











