'ಗಂಧದಗುಡಿ' ಆಲ್ಬಮ್ ಸೀಕ್ರೆಟ್ಸ್.. 'ನಾವಾಡುವ ನುಡಿಯೇ' ಹಾಡನ್ನು ಹಾಡೋದ್ಯಾರು? ಅಜನೀಶ್ ಲೋಕನಾಥ್ ಪ್ರತಿಕ್ರಿಯೆ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕನಸಿನ ಪ್ರಾಜೆಕ್ಟ್ 'ಗಂಧದಗುಡಿ' ಪ್ರೇಕ್ಷಕರ ಮುಂದೆ ಬರಲು ದಿನಗಣನೆ ಶುರುವಾಗಿದೆ. ಈಗಾಲೇ ಟ್ರೈಲರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಅಕ್ಟೋಬರ್ 21ಕ್ಕೆ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ಪ್ಲ್ಯಾನ್ ನಡೀತಿದೆ. ಇನ್ನು 'ಗಂಧದಗುಡಿ' ಡಾಕ್ಯುಡ್ರಾಮ ಸಿನಿಮಾದಲ್ಲಿ ಹಾಡುಗಳು ಇವೆ. ಇದರ ಬಗ್ಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಎಕ್ಸ್ಕ್ಲೂಸಿವ್ ಆಗಿ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.
ಕರ್ನಾಟಕದ ಬಯಲುಸೀಮೆಯಿಂದ ಹಿಡಿದು ಕಡಲ ತೀರದವರೆಗೆ, ಬರಡು ಭೂಮಿಯಿಂದ ಪಶ್ಚಿಮಘಟ್ಟಗಳವರೆಗೆ ಸುತ್ತಾಡಿ ಈ ಡಾಕ್ಯುಮೆಂಟರಿ ಕಟ್ಟಿಕೊಡಲಾಗಿದೆ. ಕನ್ನಡ ಮಣ್ಣಿನ ಘಮವನ್ನು ಪ್ರಪಂಚಕ್ಕೆ ಪರಿಚಯಿಸುವ ಪ್ರಯತ್ನ ಈ ಮೂಲಕ ನಡೀತಿದೆ. ಪುನೀತ್ ರಾಜ್ಕುಮಾರ್ ಪವರ್ ಸ್ಟಾರ್ ಆಗಿ ಅಲ್ಲದೇ ಪುನೀತ್ ರಾಜ್ಕುಮಾರ್ ಆಗಿಯೇ ಕಾಣಿಸಿಕೊಂಡಿರುವ ಪ್ರಾಜೆಕ್ಟ್ ಇದು. ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಇಲ್ಲಿದೆ. 'ಗಂಧದಗುಡಿ' ಬರೀ ಡಾಕ್ಯುಡ್ರಾಮಾ ಅಲ್ಲ ಮ್ಯೂಸಿಕಲ್ ಡಾಕ್ಯುಡ್ರಾಮಾ. ಹಾಗಾಗಿ ಸಂಗೀತಕ್ಕೆ ಹೆಚ್ಚಿನ ಮಹತ್ವ ಇದೆ.
'ಕಾಂತಾರ' ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತದಿಂದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತೆ ಸುದ್ದಿಯಲ್ಲಿದ್ದಾರೆ. ಅಜ್ಜು ಸಂಗೀತದಲ್ಲೂ ಅಪ್ಪು ಹಾಡುಗಳನ್ನು ಹಾಡಿದ್ದರು. ಆದರೆ ಮೊದಲ ಬಾರಿಗೆ ಪುನೀತ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವ ಅವಕಾಶ ಸಿಕ್ಕಿತ್ತು. ಈಗಾಗಲೇ ಟ್ರೈಲರ್ ಬಿಜಿಎಂ ಕೇಳಿದವರು ಫಿದಾ ಆಗಿದ್ದಾರೆ. 'ಗಂಧದಗುಡಿ' ಆಲ್ಬಮ್ ಬಗ್ಗೆ ಅಜನೀಶ್ ಏನ್ ಹೇಳಿದ್ದಾರೆ ಮುಂದೆ ಓದಿ.

'ಗಂಧದಗುಡಿ' ಡಾಕ್ಯುಡ್ರಾಮದಲ್ಲಿ 4 ಸಾಂಗ್ಸ್
ಆರಂಭದಲ್ಲಿ ಪ್ರಾಜೆಕ್ಟ್ ಶುರುವಾದಾಗ ಒಂದು ಹಾಡು ಮಾತ್ರ ಮಾಡಬೇಕು ಎಂದುಕೊಂಡಿದ್ದರಂತೆ. ನಿಧಾನವಾಗಿ ಮತ್ತಷ್ಟು ಹಾಡುಗಳನ್ನು ಸೇರಿಸಲು ಅವಕಾಶ ಇದೆ ಅಂದಾಗ ಆ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. "1973ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಅಣ್ಣಾವ್ರ 'ಗಂಧದಗುಡಿ' ಚಿತ್ರದ 'ನಾವಾಡುವ ನುಡಿಯೇ' ಹಾಡನ್ನು ಮರುಸೃಷ್ಟಿ ಮಾಡಿದ್ದೇವೆ. ಸನ್ನಿವೇಶಕ್ಕೆ ತಕ್ಕಂತೆ ಅಪ್ಪು ಕರ್ನಾಟಕದ ವಿವಿಧ ಭಾಗಗಳಲ್ಲಿ ಸುತ್ತಾಡುವಾಗ ಬರುವಂತೆ ಮತ್ತೊಂದು ಹಾಡನ್ನು ಮಾಡಿದ್ದೇವೆ. ಮತ್ತೆರಡು ಹಾಡುಗಳು ಚಿತ್ರದಲ್ಲಿದೆ" ಎಂದು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಾಹಿತಿ ನೀಡಿದ್ದಾರೆ.

ಎಲ್ಲಾ 3ರಿಂದ 4 ನಿಮಿಷದ ಹಾಡುಗಳು
ಡಾಕ್ಯುಮೆಂಟರಿಯಲ್ಲಿ ಕಾಡು, ನದಿ, ಬೆಟ್ಟ, ಜಲಪಾತವನ್ನು ನೋಡುತ್ತಾ ಅಪ್ಪು ಕಳೆದುಹೋಗಿದ್ದಾರೆ. ಕರ್ನಾಟಕದ ಜನಪದ ಕಲೆ, ಸಂಸ್ಕೃತಿಯ ಬಗ್ಗೆ ಚರ್ಚೆಸಿದ್ದಾರೆ. ವನ್ಯ ಜೀವಿನ ಸಂಕುಲವನ್ನು ನೋಡಿ ಪುನೀತ್ ರಾಜ್ಕುಮಾರ್ ಬೆರಗಾಗಿದ್ದಾರೆ. "ಪ್ರಕೃತಿ ಸೌಂದರ್ಯ ಸವಿಯಲು ಎಲ್ಲವೂ ಹೊರ ರಾಜ್ಯಗಳಿಗೆ ಹೊರ ದೇಶಗಳಿಗೆ ಹೋಗುತ್ತಾರೆ. ಅದಕಿಂತಲೂ ಅದ್ಭುತ ಸೌಂದರ್ಯ ಕರ್ನಾಟಕದಲ್ಲೇ ಇದೆ ಎಂದು ಪುನೀತ್ ರಾಜ್ಕುಮಾರ್ ಈ ಡಾಕ್ಯುಡ್ರಾಮಾ ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ. ಮಾಂಟೇಜ್ ಹಾಡುಗಳು ಅಲ್ಲಲ್ಲಿ ಬರುತ್ತದೆ. ಒಂದು ಕಡೆ 1 ನಿಮಿಷದ ಹಾಡು ಬಂದರೆ ಸ್ವಲ್ಪ ಸಮಯದ ನಂತರ ಹಾಡು ಮತ್ತೆ ಮುಂದುವರೆಯುತ್ತದೆ. ಹೀಗೆ 3ರಿಂದ 4 ನಿಮಿಷದ ಹಾಡುಗಳು ಗಂಧದಗುಡಿಯಲ್ಲಿದೆ"

ವಿಜಯ್ ಪ್ರಕಾಶ್ ಕಂಠದಲ್ಲಿ ಅಣ್ಣಾವ್ರ ಹಾಡು
ಡಾ. ರಾಜ್ಕುಮಾರ್ ನಟನೆಯ 'ಗಂಧಧಗುಡಿ' ಚಿತ್ರದ ಟೈಟಲ್ ಸಾಂಗ್ನ ಮರುಸೃಷ್ಟಿ ಮಾಡುವುದೇನೊ ಸರಿ. ಆದರೆ ಯಾರು ಈಗ ಆ ಹಾಡನ್ನು ಹಾಡುತ್ತಾರೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಉತ್ತರ ನೀಡಿದ್ದಾರೆ. "ವಿಜಯ್ ಪ್ರಕಾಶ್ ಅವರು ಈ ಹಾಡು ಹಾಡಬೇಕು ಎನ್ನುವುದು ನಮ್ಮೆಲ್ಲರ ಆಸೆ. ಈ ಬಗ್ಗೆ ಅವರೊಟ್ಟಿಗೆ ಚರ್ಚೆ ಕೂಡ ನಡೀತಿದೆ. ಶೀಘ್ರದಲ್ಲೇ ವಿಜಯ್ ಸರ್ ಹಾಡು ಹಾಡುತ್ತಾರೆ".

ಅಕ್ಟೋಬರ್ 28ಕ್ಕೆ 'ಗಂಧದಗುಡಿ' ರಿಲೀಸ್
ಇದೇ ಶುಕ್ರವಾರ 'ಗಂಧದಗುಡಿ' ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ. ಅಕ್ಕಪಕ್ಕದ ಚಿತ್ರರಂಗದ ದಿಗ್ಗಜ ನಟರು ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ವರ್ಣರಂಜಿತ ಕಾರ್ಯಕ್ರಮ ಆಯೋಜಿಸಲಾಗಿದೆ. ಅಕ್ಟೋಬರ್ 28ಕ್ಕೆ ಈ ಡಾಕ್ಯುಡ್ರಾಮ ಸಿನಿಮಾ ಸಿಲ್ವರ್ ಸ್ಕ್ರೀನ್ ಮೇಲೆ ಅಪ್ಪಳಿಸಲಿದೆ. ಪಿಆರ್ಕೆ ಪ್ರೊಡಕ್ಷನ್ ಹಾಗೂ ಮಡ್ಸ್ಕಿಪರ್ ಬ್ಯಾನರ್ನಲ್ಲಿ ಈ ವೈಲ್ಡ್ ಡಾಕ್ಯುಮೆಂಟರಿ ನಿರ್ಮಾಣ ಆಗಿದೆ. ಕೊನೆಯದಾಗಿ ಅಭಿಮಾನಿಗಳು ನೆಚ್ಚಿನ ನಟನನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.


Click it and Unblock the Notifications











