ಯಶ್ ಮಾತು ಗೌರವಿಸಿ ಸಂಗೀತಗಾರರಿಗೆ ನೆರವು ನೀಡಿದ ಲಹರಿ ವೇಲು
ಕೊರೊನಾ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಸಿನಿಮಾ ಸಂಗೀತಗಾರರ ಖಾತೆಗಳಿಗೆ ಐದು ಸಾವಿರ ರುಪಾಯಿ ಹಣ ಹಾಕಿದ್ದಾರೆ ಲಹರಿ ಆಡಿಯೋ ಸಂಸ್ಥೆ ಮಾಲೀಕ ಲಹರಿ ವೇಲು.
ಹಿನ್ನೆಲೆ ಗಾಯಕರು, ಕೋರಸ್ ಗಾಯಕರು, ಪಕ್ಕ ವಾದ್ಯಗಾರರು, ಹಿರಿಯ ಸಂಗೀತ ನಿರ್ದೇಶಕರು, ಸಹಾಯಕ ಸಂಗೀತ ನಿರ್ದೇಶಕರು ಹೀಗೆ ಸಿನಿಮಾ ಸಂಗೀತದೊಂದಿಗೆ ಸಂಪರ್ಕವಿರುವ ಎಲ್ಲ ಕಲಾವಿದರ ಖಾತೆಗಳಿಗೆ ಐದು ಸಾವಿರ ಹಣವನ್ನು ಲಹರಿ ಸಂಸ್ಥೆ ವತಿಯಿಂದ ಹಾಕಲಾಗಿದೆ.
ಲಹರಿ ವೇಲು ಸಹ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿ, ''ನಟ ಯಶ್ ಕರೆ ಮಾಡಿ ಸಂಗೀತ ಕಲಾವಿದರಿಗೆ ನಿಮ್ಮ ಸಂಸ್ಥೆಯಿಂದ ಏನಾದರು ಸಹಾಯ ಮಾಡಿ ಎಂದರು. ನಾವು ಸಹ ಅದರ ಬಗ್ಗೆ ಯೋಚಿಸುತ್ತಿದ್ದೆವು. ಹಾಗಾಗಿ ಯಶ್ ಮಾಡಿದ ರೀತಿಯಲ್ಲಿಯೇ ನಾವು ಸಹ ಸಂಗೀತ ಕಲಾವಿದರ ಖಾತೆಗೆ ಹಣ ಹಾಕಿದೆವು'' ಎಂದಿದ್ದಾರೆ ಲಹರಿ ವೇಲು.

''ಯಶ್ ಕರೆ ಮಾಡಿ ಸಂಗೀತಗಾರರಿಗೆ ಸಹಾಯ ಮಾಡಿ ಎಂದರು''
''ಯಶ್ ಕರೆ ಮಾಡಿ, ಭಗವಾನ್ ನಾಯ್ಡು ಅವರ ಬಳಿ ಒಮ್ಮೆ ಮಾತನಾಡಿ ನಿಮ್ಮ ಸಂಸ್ಥೆಯಿಂದ ಸಂಗೀತ ಕಲಾವಿದರಿಗೆ ಸಹಾಯ ಮಾಡಿ ಎಂದರು. ಕೂಡಲೇ ನಾನು ಅಣ್ಣ ಭಗವಾನ್ ನಾಯ್ಡು ಬಳಿ ಮಾತನಾಡಿ ಯಶ್ ಕರೆ ಮಾಡಿದ್ದ ವಿಷಯವನ್ನೂ ತಿಳಿಸಿದೆ. ಕೂಡಲೇ ಅವರು ನೆರವು ಘೋಷಿಸು ಎಂದು ಹೇಳಿದರು'' ಎಂದಿದ್ದಾರೆ ಲಹರಿ ವೇಲು.

ಸಂಗೀತಗಾರರಿಂದ ನಾವು ಜೀವನ ಕಟ್ಟಿಕೊಂಡಿದ್ದೇವೆ: ವೇಲು
''ನಾವು ಸಂಗೀತಗಾರರಿಂದಾಗಿಯೇ ಜೀವನ ಕಟ್ಟಿಕೊಂಡಿದ್ದೇವೆ, ಸಂಗೀತಗಾರರು ಕಟ್ಟಿದ ಹಾಡುಗಳಿಂದ, ನುಡಿಸಿದ ವಾದ್ಯಗಳಿಂದ ನಾವು ನಮ್ಮ ಕುಟುಂಬ ಜೀವನ ಕಟ್ಟಿಕೊಂಡಿದೆ. ಹಾಡುಗಳಿಂದಾಗಿ ನಾವು ಊಟ ಮಾಡಿದ್ದೇವೆ. ಈಗ ಅವರು ಕಷ್ಟದಲ್ಲಿರುವ ಸಮಯದಲ್ಲಿ ನಾವು ಅವರಿಗೆ ಸಹಾಯ ಮಾಡದಿರಲು ಆಗುತ್ತದೆಯೇ? ಹಾಗಾಗಿ ನಾವು ನೆರವು ನೀಡಿದ್ದೇವೆ'' ಎಂದಿದ್ದಾರೆ ಲಹರಿ ವೇಲು.

ಯಶ್ ಮಾಡಿದ ಸಹಾಯ ಅನುಕರಣನೀಯ: ಲಹರಿ ವೇಲು
''ನಾವು ಮಾಡಿರುವ ಸಹಾಯ ಏನೂ ಅಲ್ಲ ಇನ್ನೂ ಸಹಾಯ ಮಾಡಬೇಕಿದೆ. ಮಾಡುವ ಮನಸಿರುವವರ ಬಳಿ ಹಣವಿರುವುದಿಲ್ಲ, ಅಧಿಕಾರವಿರುವುದಿಲ್ಲ. ಏನೂ ಮಾಡದೇ ಇರುವವರ ಬಳಿ ಎಲ್ಲವೂ ಇರುತ್ತದೆ'' ಎಂದು ಮಾರ್ಮಿಕವಾಗಿ ನುಡಿದಿರುವ ಲಹರಿ ವೇಲು, ''ಯಶ್ ಒಂದುವರೆ ಕೋಟಿ ಹಣ ನೀಡಿದರು. ಅದನ್ನು ಕಂಡು ನನಗೆ ಬಹಳ ಸಂತೋಷವಾಯಿತು. ಅವರು ಮಾಡಿದ ಕಾರ್ಯ ಅನುಕರಣನೀಯ'' ಎಂದಿದ್ದಾರೆ.

ನಾನು ಯಶ್ ಜೊತೆ ಮಾತನಾಡಿದೆ: ಲಹರಿ ವೇಲು
''ನಾನು ಯಶ್ ಜೊತೆ ಮಾತನಾಡುತ್ತಾ ಹೇಳಿದೆ. ನಾವೆಲ್ಲ ಕಷ್ಟದಿಂದ ಬಂದಿದ್ದೀವಿ ಸರ್, ಹಾಗಾಗಿ ನಿಮಗೆ, ನಮಗೆ ಕಷ್ಟದ ಬೆಲೆ ಗೊತ್ತಿದೆ. ಯಾರು ಹಸಿವಿನಿಂದ ಬಳಲಿರುತ್ತಾನೆಯೋ ಅವನಿಗಷ್ಟೆ ಹಸಿವಿನ ಬೆಲೆ ಗೊತ್ತಾಗುತ್ತದೆ'' ಎಂದಿದ್ದಾರೆ ಲಹರಿ ವೇಲು.


Click it and Unblock the Notifications











