ಲೂಸ್ ಮಾದನ ಹೇಳಿಕೆಗೆ ಕಿಚ್ಚ ಸುದೀಪ್ ಬೆಂಬಲ
ಮೊನ್ನೆ ಮೊನ್ನೆ ನಟ ಯೋಗೇಶ್ ಹೇಳಿಕೆ ವಿರುದ್ಧ ನಿರ್ಮಾಪಕರ ಸಂಘ ಗರಮ್ ಆಗಿದ್ದು ಗೊತ್ತೇ ಇದೆ. ಯೋಗಿ ಸಿನಿಮಾ ನಿರ್ಮಾಣ ಮಾಡದಿರಲು ಹಾಗೂ ಯೋಗಿಗೆ ಆ ಮೂಲಕ ಅಸಹಕಾರ ನೀಡಲು ನಿರ್ಧರಿಸಿದ್ದ ನಿರ್ಮಾಪಕರ ಸಂಘ ದಿಢೀರ್ ಬೆಳವಣಿಗೆ ಎಂಬಂತೆ ಅಷ್ಟಕ್ಕೇ ಸುಮ್ಮನಾಗಿದೆ ಎಂಬ ಸುದ್ದಿ ಒಂದಾದರೆ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಿದೆ ಎನ್ನಲಾಗುತ್ತಿರುವದು ಇನ್ನೊಂದು ಸುದ್ದಿ.
ಆದರೆ ನಡೆದ ಎಲ್ಲಾ ವಿದ್ಯಮಾನಗಳ ಕಾರಣ ಮತ್ತು ಪರಿಣಾಮ ಎರಡೂ ಅಸ್ಪಷ್ಟ ಎಂಬಂತಾಗಿದೆ. ಯೋಗೇಶ್ ಕ್ಷಮೆ ಕೇಳುವ ಮೂಲಕ ತಮ್ಮ ಮಾತನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ನಿರ್ಮಾಪಕರ ಸಂಘ ಹೇಳಿಕೊಂಡಿದೆ. ಆದರೆ ಅತ್ತ ಯೋಗಿ ತಾನು ಕ್ಷಮೆ ಕೇಳುವುದು ಹಾಗಿರಲಿ, ದುಬೈನಲ್ಲಿ ಚಿತ್ರೀಕರಣದಲ್ಲಿದ್ದೆ, ಇಲ್ಲಿನ ವಿಷಯಗಳ ಬಗ್ಗೆ ತನಗೆ ಮಾಹಿತಿಯೇ ಇಲ್ಲ ಎನ್ನುತ್ತಿದ್ದಾರಂತೆ.
ಆದರೆ ಕಿಚ್ಚ ಸುದೀಪ್ ಯೋಗೇಶ್ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆಂದು ಸುದ್ದಿಯಾಗಿದೆ. "ನಾವೇನೂ ನಿರ್ಮಾಪಕರ ಮನೆ ಬಾಗಿಲಿಗೆ ಹೋಗಿ ಸಿನಿಮಾ ಮಾಡಿ ಅಂಥ ಕೇಳ್ತೀವಾ? ಅವರೇ ಬಂದು ಡೇಟ್ಸ್ ಕೇಳುತ್ತಾರೆ. ಯಾವ ನಾಯಕನೂ ಬಿಕಾರಿಯಲ್ಲ. ಆತ ದುಡಿಯುವ ಹಣದಲ್ಲಿ ಬೇಕಾದ ಸೌಲಭ್ಯಗಳನ್ನು ಮಾಡಿಕೊಳ್ಳುವ ತಾಕತ್ತು ಅವನಿಗಿದೆ. ಅದಕ್ಕೆ ನಿರ್ಮಾಪಕರ ಹಣವೇ ಬೇಕಿಲ್ಲ.
ಕಲಾವಿದರು ಎಂದರೆ ಸಮಾಜದಲ್ಲಿ ಗೌರವ ಇದೆ. ನಿರ್ಮಾಪಕರಿಗೂ ಅಷ್ಟೇ. ನಾನಂತೂ ಕಲಾವಿದರು ಮೇಲು, ನಿರ್ಮಾಪಕರು ಕೀಳು ಎಂದು ಭಾವಿಸಿಲ್ಲ. ಇಬ್ಬರೂ ಸಮಾನರು. ಇಬ್ಬರಲ್ಲೂ ಸಹಕಾರ ಮನೋಭಾವ ಅತ್ಯಗತ್ಯ" ಎಂದು ಹೇಳುವ ಮೂಲಕ ಪರೋಕ್ಷವಾಗಿ ಯೋಗಿ ಹೇಳಿಕೆಯನ್ನು ಕಿಚ್ಚ ಸುದೀಪ್ ಬೆಂಬಲಿಸಿದ್ದಾರೆ. ಮುಂದಿನ ಪುಟ ನೋಡಿ...


Click it and Unblock the Notifications











