ಯಜ್ಞಾ ಶೆಟ್ಟಿ ಗುಟ್ಟು ಆಕೆ ಬಾಯಿಂದಲೇ ರಟ್ಟಾಗಿದೆ
ಕನ್ನಡದ ನಟಿ ಯಜ್ಞಾ ಶೆಟ್ಟಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಎಂದೂ ಅವರು ತುಂಬಾ ಚಿತ್ರಗಳನ್ನು ಕೈಯಲ್ಲಿ ಹಿಡಿದಿರಲಿಲ್ಲ. ಅದಕ್ಕೆ ಕಾರಣ ಅವಕಾಶಗಳು ಅವರಿಗೆ ಸಿಗುತ್ತಿಲ್ಲ ಎಂದೇ ಎಲ್ಲರೂ ಭಾವಿಸುವಂತಾಗಿತ್ತು. ಆದರೆ ನಿಜವಾದ ಕಾರಣ ಬೇರೆಯೇ ಇದೆ. ಆ ಗುಟ್ಟನ್ನು ಅವರೇ ರಟ್ಟು ಮಾಡಿದ್ದಾರೆ.
"ನಾನು ಪಾತ್ರಗಳ ಆಯ್ಕೆಯಲ್ಲಿ ಬಹಳ ಕಾಳಜಿ ವಹಿಸುತ್ತೇನೆ. ಇದೇ ನನ್ನನ್ನು ಉದ್ಯಮಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ಚಿತ್ರದಲ್ಲಿ ಬ್ಯುಸಿಯಾಗಿರುವಂತೆ ಮಾಡಿದೆ. ನಾನು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತೇನೆ. ನನ್ನನ್ನು ಹುಡುಕಿಕೊಂಡು ಬಂದ ಅವಕಾಶಗಳನ್ನೆಲ್ಲ ನಾನು ಬಾಚಿಕೊಳ್ಳುವುದಿಲ್ಲ.
ನನ್ನ ಪಾತ್ರಕ್ಕೆ ಪ್ರಾಧಾನ್ಯತೆ ಇದ್ದು ಸ್ವಲ್ಪ ಮಟ್ಟಿಗಾದರೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತ ಪಾತ್ರವೆನಿಸಿದಾಗ ಮಾತ್ರ ನಟಿಸಿದ್ದೇನೆ. ನಾನು ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕ. ಆದರೆ ಈಗ ಆಯ್ಕೆ ನನ್ನ ಕೈಯಲ್ಲಿದೆ. ನಟನಾ ವೃತ್ತಿ ನನಗೆ ಖುಷಿ ಕೊಟ್ಟಿದೆ. ಪ್ರತೀ ಪಾತ್ರವನ್ನು ನಾನು ಪ್ರೀತಿಸಿದ್ದೇನೆ" ಎಂಬ ಗುಟ್ಟು ಬಿಚ್ಚಿಟ್ಟಿದ್ದಾರೆ.
ಒಂದು ಪ್ರೀತಿಯ ಕಥೆ ಚಿತ್ರದಲ್ಲಿ ಮೊದಲು ಎಂಟ್ರಿ ಕೊಟ್ಟರೂ ಬಿಡುಗಡೆಯಾಗಿದ್ದು ಎದ್ದೇಳು ಮಂಜುನಾಥ ಚಿತ್ರ. ನಂತರ ಸುಗ್ರೀವ, ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ, ಕಳ್ಳ ಮಳ್ಳ ಸುಳ್ಳ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಸಡಗರ ಹಾಗೂ ಕ್ವಾಟ್ಲೆ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











