ಮಾಧ್ಯಮ ಕ್ಷೇತ್ರಕ್ಕೆ ತೆಲುಗು ಮೆಗಾ ಸ್ಟಾರ್ ಚಿರಂಜೀವಿ
ಈಗಾಗಲೆ ರಾಜಕೀಯ ಕ್ಷೇತ್ರಕ್ಕೆ ಅಡಿಯಿಟ್ಟಿರುವ ತೆಲುಗು ಚಿತ್ರರಂಗದ ನಟ ಚಿರಂಜೀವಿ ಈಗ ಮಾಧ್ಯಮ ಕ್ಷೇತ್ರಕ್ಕೆ ಅಡಿಯಿಡಲು ಸಿದ್ಧತೆ ನಡೆಸಿದ್ದಾರೆ. 2008ರಲ್ಲಿ 'ಪ್ರಜಾ ರಾಜ್ಯಂ' ಪಕ್ಷವನ್ನು ಸ್ಥಾಪಿಸುವ ಮೂಲಕ ಚಿರಂಜೀವಿ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ್ದರು.
ಆಂಧ್ರದಲ್ಲಿ ಈಗಾಗಲೆ ಒಂದೊಂದು ಪಕ್ಷಕ್ಕೂ ತನ್ನದೇ ಆದಂತಹ ಟಿವಿ ಚಾನಲ್, ಪತ್ರಿಕೆಗಳು ಇವೆ.ಅವೆಲ್ಲವೂ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯುತ್ತಲೂ ಇವೆ. ಇದನ್ನೂ ನೋಡುತ್ತಾ ಸುಮ್ಮನೆ ಕೂರಲು ಮನಸ್ಸಾಗದ ಚಿರಂಜೀವಿಗೆ ತಾನೂ ಏಕೆ ಚಾನಲ್ ಆರಂಭಿಸಬಾರದು ಎನ್ನಿಸಿರಬೇಕು.
ಅವರು ಆರಂಭಿಸಲಿರುವ ಟಿವಿ ಚಾನಲ್ಗೆ 'ಆರ್ ಕೆ ನ್ಯೂಸ್' ಎಂದು ಹೆಸರಿಡಲಾಗಿದೆ. ಎಲೆಕ್ಟ್ರಾನಿಕ್ ಮಾಧ್ಯಮದ ಜೊತೆಜೊತೆಗೆ ಮುದ್ರಣ ಮಾಧ್ಯಮಕ್ಕೂ ಚಿರಂಜೀವಿ ಚಾಲನೆ ನೀಡಲಿದ್ದಾರೆ ಎಂಬ ಸುದ್ದಿ ಆಂಧ್ರದಲ್ಲಿ ಸಂಚನಲ ಉಂಟು ಮಾಡಿದೆ. ಆಂಧ್ರದಲ್ಲಿ ಸಿನಿಮಾ ಮತ್ತು ರಾಜಕೀಯ ಒಂದಕ್ಕೊಂದು ತಳುಕು ಹಾಕಿಕೊಂಡೇ ಮುನ್ನಡೆಯುತ್ತಿವೆ.
ಈ ಹಿಂದೆ ವೈ ಎಸ್ ಜಗನ್ ಮೋಹನ್ ರೆಡ್ಡಿ, ಎನ್ ಚಂದ್ರಬಾಬು ನಾಯ್ಡು ಹಾಗೂ ಕೆ ಚಂದ್ರಶೇಖರ್ ರಾವ್ ಮಾಧ್ಯಮ ಕ್ಷೇತ್ರಕ್ಕೆ ಅಡಿಯಿಟ್ಟಿದ್ದರು. ಈಗ ಚಿರಂಜೀವಿ ಕೂಡ ಅದೇ ಕೆಲಸ ಮಾಡಿದ್ದಾರೆ. ಶೀಘ್ರದಲ್ಲೇ ಆಂಧ್ರ ರಾಜಕೀಯ ಮತ್ತಷ್ಟು ರಂಗೇರುವ ಲಕ್ಷಣಗಳು ದಟ್ಟವಾಗಿ ಗೋಚರಿಸುತ್ತಿವೆ.


Click it and Unblock the Notifications











