ಅಭಿಮಾನಿ ಜೊತೆ ಉಪೇಂದ್ರ ಭೂರಿ ಭೋಜನ
ಬೆಂಗಳೂರಿನ ಸಖತ್ ಹಾಟ್ ರೇಡಿಯೋ ಸ್ಟೇಷನ್ ರೇಡಿಯೋ ಮಿರ್ಚಿ ತನ್ನ ಶ್ರೋತೃಗಳನ್ನು ಎಂದೂ ನಿರಾಶೆ ಪಡಿಸಿಲ್ಲ. ಅತ್ಯುತ್ತಮ ಮನರಂಜನೆ, ಸಂಗೀತ, ಸಿನಿಮಾ ತಾರೆಗಳು ಮತ್ತು ಚಿತ್ರಗಳನ್ನು ಜನಮಾನಸಕ್ಕೆ ತಲುಪಿಸುತ್ತಿದೆ. ಇತ್ತೀಚೆಗೆ 'ಗಾಡ್ ಫಾದರ್' ಉಪ್ಪಿ ದಾದಾ ಅವರನ್ನು ಭೇಟಿ ಮಾಡಿಸುವ ಸುವರ್ಣಾವಕಾಶವನ್ನು ತನ್ನ ಕೇಳುಗರಿಗೆ ಕಲ್ಪಿಸಿತ್ತು.
ರೇಡಿಯೋ ಮಿರ್ಚಿ ನಡೆಸಿಕೊಟ್ಟ ಎಕ್ಸ್ಕ್ಲೂಸಿವ್ ಕಾರ್ಯಕ್ರಮದಲ್ಲಿ ಒಬ್ಬ ಮಿರ್ಚಿ ಲಕ್ಕಿ ಸ್ಪರ್ಧಿಗೆ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಭೋಜನ ಮಾಡುವ ಸದಾವಕಾಶ ಲಭಿಸಿತು. ಈ ಸ್ಪರ್ಧೆ ಪ್ರಕಟವಾಗುತ್ತಿದ್ದಂತೆ ಥ್ರಿಲ್ ಆದ ಮಿರ್ಚಿ ಕೇಳುಗರು 'ನಮ್ಮ ಉಪ್ಪಿ' ಜೊತೆ ಭೋಜನ ಮಾಡಲು ನಾನಾ ಕಾರಣಗಳನ್ನು ಕೊಟ್ಟರು.
ಯೋಗೇಶ್-ರೇಡಿಯೋ ಮಿರ್ಚಿಯ ಉತ್ಕಟ ಅಭಿಮಾನಿ ಹಾಗೂ ಉಪ್ಪ್ಪಿಯ ಮಹಾನ್ ಭಕ್ತ. ಈತ ಕನಸು ಮನಸಿನಲ್ಲೂ ಊಹಿಸಿರಲಿಲ್ಲ, ಒಂದು ದಿನ ಉಪ್ಪಿಯನ್ನು ಭೇಟಿ ಮಾಡುತ್ತೇನೆ ಎಂದು. ಉಪ್ಪಿ ಜೊತೆ ಊಟ ಮಾಡುವ ಮೂಲಕ ಆತನ ಜೀವನದ ಮಹತ್ವದ ಆಸೆಯೊಂದು ನೆರೆವೇರಿದೆ.
ಉಪ್ಪಿ ದಾದಾ ಅವರನ್ನು ಭೇಟಿ ಮಾಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಯೋಗೇಶ್, "ಉಪೇಂದ್ರ ಅವರ ಉತ್ಕಟ ಅಭಿಮಾನಿ ನಾನು. ಅವರ ಚೊಚ್ಚಲ ಚಿತ್ರ 'ತರ್ಲೆ ನನ್ಮಗ'ನಿಂದ ಹಿಡಿದು ಮೊನ್ನೆ ತೆರೆಕಂಡ 'ಸೂಪರ್' ಚಿತ್ರದತನಕ ಎಲ್ಲ ಚಿತ್ರಗಳನ್ನು ನೋಡಿದ್ದೇನೆ. ಅವರೊಂದಿಗೆ ಭೋಜನ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತಸವಾಗುತ್ತಿದೆ".
ಉಪೇಂದ್ರ ಅವರಲ್ಲಿ ನಿಮಗೆ ಇಷ್ಟವಾಗಿದ್ದೇನು ಎಂದು ಯೋಗೇಶ್ರನ್ನು ಕೇಳಿದರೆ, "ಅವರ ಸರಳತೆ ಹಾಗೂ ಅಡಿಯಿಂದ ಮುಡಿತನಕ ಅವರ ನಿಲುವು. ವಿನಯ ಮತ್ತು ಸರಳತೆಗೆ ಹೆಸರಾದವರು. ನಾನು ಉಡುಗೊರೆಯಾಗಿ ನೀಡಿದ ಲಾಕೆಟ್ಗಳನ್ನು ಅವರು 'ಗಾಡ್ ಫಾದರ್' ಚಿತ್ರದಲ್ಲಿ ಬಳಸಲು ಒಪ್ಪಿದ್ದಾರೆ ಎಂದರೆ ನೀವೇ ಊಹಿಸಿ ಅವರ ವಿನಯಶೀಲತೆ. ಚಿತ್ರೀಕರಣ ನೋಡಲು ಬರುವಂತೆಯೂ ನನ್ನನ್ನು ಉಪ್ಪಿ ಆಹ್ವಾನಿಸಿದರು.
ರೇಡಿಯೋ ಮಿರ್ಚಿಯ ಈ ಹೊಸ ಪರಿಕಲ್ಪನೆ ಬಗ್ಗೆ ಪ್ರತಿಕ್ರಿಯಿಸಿದ ಉಪೇಂದ್ರ, "ರೇಡಿಯೋ ಮಿರ್ಚಿಯ ಬಿಂದಾಸ್ ಕಾರ್ಯಕ್ರಮ ಇಷ್ಟವಾಗಿದೆ.ಪರಿಪೂರ್ಣ ಮನರಂಜನಾತ್ಮಕ ಹಾಗೂ ತಮಾಷೆಯಿಂದ ತುಂಬಿದ ಕಾರ್ಯಕ್ರಮಗಳು. ಯೋಗೇಶ್ ಅವರೊಂದಿಗೆ ಪರಸ್ಪರ ಮಾತುಕತೆ ನಡೆಸಿದ್ದು ನಿಜಕ್ಕೂ ಖುಷಿ ಕೊಡ್ತು". (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











