ಎಸ್ ನಾರಾಯಣ್ ಚಿತ್ರದಲ್ಲಿ ರೆಬೆಲ್ಸ್ಟಾರ್
ಸುದೀಪ್ ನಾಯಕ ನಟನಾಗಿ ಎಸ್. ನಾರಾಯಣ್ ನಿರ್ಮಿಸಿ, ನಿರ್ದೇಶಿಸುತ್ತಿರುವ ಚಿತ್ರ 'ವೀರ ಪರಂಪರೆ'. ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್, ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್ - ಹೀಗೆ ಜನಪ್ರಿಯ ತಾರೆಗಳೊಂದಿಗೆ ಚಿತ್ರಗಳನ್ನು ನಿರ್ದೇಶಿಸಿದ ಕೀರ್ತಿ ನಾರಾಯಣ್ ಅವರಿಗಿದೆ. ಈಗ ಇವರು ನಟ ಕಿಚ್ಚ ಸುದೀಪ್ ಜೊತೆ ಸೇರಿ 'ವೀರ ಪರಂಪರೆ' ಚಿತ್ರ ನಿರ್ಮಾಣಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಹೊಸ ವಿಷಯವೇನೆಂದರೆ, ರೆಬೆಲ್ಸ್ಟಾರ್ ಅಂಬರೀಷ್ ಅವರು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲು ಒಪ್ಪಿರುವುದು. ಚಿತ್ರದಲ್ಲಿ ಬರುವ ಪ್ರಮುಖ ಪಾತ್ರವೊಂದನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಕ ನಾರಾಯಣ್ ಅಂಬರೀಷ್ರನ್ನು ಭೇಟಿ ಮಾಡಿ ಕಥೆ ಹೇಳಿದಾಗ ಅಂಬರೀಷ್ ತಕ್ಷಣ ಅಭಿನಯಿಸುವುದಾಗಿ ಒಪ್ಪಿದರಂತೆ. ಸಾಮಾನ್ಯವಾಗಿ ಅಂಬರೀಷ್ರನ್ನು ಒಪ್ಪಿಸುವುದು ಸ್ವಲ್ಪ ಕಷ್ಟ. ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಈ ಚಿತ್ರ ಬರುವ ಏಪ್ರಿಲ್ ತಿಂಗಳಿನಲ್ಲಿ ಸೆಟ್ಟೇರಲಿದೆ.
ಚೆಲುವಾಂಬಿಕಾ ಫಿಲಂಸ್ ಲಾಂಛನದಲ್ಲಿ ಎಸ್.ನಾರಾಯಣ್ ನಿರ್ಮಿಸಿ-ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಸುದೀಪ್-ನಾರಾಯಣ್ ಪ್ರಥಮ, ಅಂಬರೀಷ್-ನಾರಾಯಣ್ ಪ್ರಥಮ, ಅಲ್ಲದೇ ಸುದೀಪ್-ಅಂಬರೀಷ್ ಒಟ್ಟಾಗಿ ಅಭಿನಯಿಸುತ್ತಿರುವುದೂ ಪ್ರಥಮ ಬಾರಿಗೆ. ಹೀಗೆ ಹಲವಾರು ಪ್ರಪ್ರಥಮಗಳ ಸಂಗಮವಾದ ಈ ಚಿತ್ರಕ್ಕೆ ನಾಯಕಿಯಾಗಿ ಅಭಿನಯಿಸಲು ಕನ್ನಡದ ಹೊಸ ಪ್ರತಿಭೆಯನ್ನು ಹುಡುಕುತ್ತಿದ್ದು, ಕಳೆದ ವಾರ ನೀಡಿದ ಪತ್ರಿಕಾ ಪ್ರಕಟಣೆಗೆ ಉತ್ತರವಾಗಿ ರಾಜ್ಯದ ಮೂಲೆಮೂಲೆಗಳಿಂದ ಈಗಾಗಲೇ 3 ಸಾವಿರ ಫೋಟೋ ವಿವರಗಳು ಬಂದಿವೆ. ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ನಾಯಕಿಯ ಹೆಸರನ್ನು ನಾರಾಯಣ್ ಬಹಿರಂಗಪಡಿಸಲಿದ್ದಾರೆ.


Click it and Unblock the Notifications











