'ಕಠಾರಿವೀರ' ತ್ರಿಡಿ ಚಿತ್ರಕ್ಕೆ ಮತ್ತೊಂದು ವಿವಾದ
ಉಪೇಂದ್ರ, ರಮ್ಯಾ ಮುಖ್ಯಭೂಮಿಕೆಯಲ್ಲಿರುವ 'ಕಠಾರಿವೀರ ಸುರಸುಂದರಾಂಗಿ' ತ್ರಿಡಿ ಚಿತ್ರಕ್ಕೆ ಮತ್ತೊಂದು ವಿವಾದ ಎದುರಾಗಿದೆ. ಇದು ಕನ್ನಡದ ಮೊಟ್ಟಮೊದಲ ತ್ರಿಡಿ ಚಿತ್ರವಲ್ಲ. ಚಿತ್ರಕ್ಕೆ ಅಗ್ಗದ ಪ್ರಚಾರ ಕೊಡುವುದು ತಪ್ಪು. ಕನ್ನಡದಲ್ಲಿ ಈಗಾಗಲೆ ಮೂರು ತ್ರಿಡಿ ಚಿತ್ರಗಳು ಬಂದಿವೆ ಎನ್ನುತ್ತಾರೆ ಖ್ಯಾತ ಸಂಭಾಷಣೆಕಾರ ಕುಣಿಗಲ್ ನಾಗಭೂಷಣ್.
ಕನ್ನಡದ ಮೊಟ್ಟಮೊದಲ ತ್ರಿಡಿ ಚಿತ್ರ 'ಕಾಡಿನಲ್ಲಿ ಜಾತ್ರೆ'. 1986ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಎನ್ ಎಸ್ ಧನಂಜಯ ನಿರ್ದೇಶಿಸಿದ್ದರು. ಚಿತ್ರದ ತಾರಾಬಳಗದಲ್ಲಿ ಸುಂದರಕೃಷ್ಣ ಅರಸ್, ರತ್ನಾಕರ್, ಸುದರ್ಶನ್, ವಿಜಯೇಂದ್ರ ಮುಂತಾದವರು ಇದ್ದರು. ಈಗಿನ ಭೂಮಿಕಾ ಆಗಿರುವ ಆಗಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಈ ಚಿತ್ರ ತೆರೆಕಂಡಿತ್ತು.
ಬಳಿಕ ರವಿಕಾಂತ್ ನಯಾಬ್ ನಿರ್ದೇಶನದ 'ಸೂಪರ್ ಬಾಯ್' ಎಂಬ ಚಿತ್ರವೂ ತ್ರಿಡಿಯಲ್ಲಿ ಮೂಡಿಬಂದಿತ್ತು. ಆದರೆ ಈ ಚಿತ್ರ ಬಿಡುಗಡೆಯಾಗಿರಲಿಲ್ಲ. ಬಳಿಕ ಬಂದದ್ದು ಕನ್ನಡ, ತೆಲುಗು ಹಾಗೂ ತಮಿಳಿನ ತ್ರಿಭಾಷಾ ಚಿತ್ರ 'ನಮ್ಮ ಭೂಮಿ'. ತ್ರಿಡಿ ಚಿತ್ರವಾಗಿದ್ದ ಇದು ಬೆಂಗಳೂರಿನ ಮೇನಕಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು.

ಆರ್ ತ್ಯಾಗರಾಜ್ ನಿರ್ದೇಶನದ 'ನಮ್ಮ ಭೂಮಿ' ಚಿತ್ರದಲ್ಲಿ ಟೈಗರ್ ಪ್ರಭಾಕರ್, ದಿನೇಶ್, ಚರಣ್ ರಾಜ್ ಅಭಿನಯಿಸಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆ ಕುಣಿಗಲ್ ನಾಗಭೂಷಣ್ ಅವರದು. ಈಗಾಗಲೆ ಕನ್ನಡದಲ್ಲಿ ಮೂರು ತ್ರಿಡಿ ಚಿತ್ರಗಳು ನಿರ್ಮಾಣವಾಗಿದ್ದು ಎರಡು ಚಿತ್ರಗಳು ಬಿಡುಗಡೆಯಾಗಿವೆ. 'ಕಠಾರಿವೀರ' ಚಿತ್ರ ಕನ್ನಡದ ಮೊಟ್ಟಮೊದಲ ತ್ರಿಡಿ ಚಿತ್ರ ಎನ್ನುವುದರಲ್ಲಿ ಅರ್ಥವಿಲ್ಲ. ಇದು ನಾಲ್ಕನೆಯ ತ್ರಿಡಿ ಚಿತ್ರ. ಇತಿಹಾಸವನ್ನು ತಿರುಚುವುದು ಸರಿಯಲ್ಲ ಎನ್ನುತ್ತಾರೆ ಕುಣಿಗಲ್ ನಾಗಭೂಷಣ್. (ಏಜೆನ್ಸೀಸ್)


Click it and Unblock the Notifications











