ಕಂಠೀರವದಲ್ಲಿ ಕಿಶೋರ್ 'ಹುಲಿ' ಗರ್ಜನೆ
ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ನಟ ಕಿಶೋರ್ ಇದೀಗ 'ಹುಲಿ' ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕರಾಗುತ್ತಿರುವುದು ಗೊತ್ತೆ ಇದೆ. ಎನ್ ಓಂ ಪ್ರಕಾಶ್ ರಾವ್ ನಿರ್ದೇಶಿಸುತ್ತಿರುವ 'ಹುಲಿ' ಚಿತ್ರೀಕರಣಕ್ಕೆ ಕಂಠೀರ ಸ್ಟುಡಿಯೋದಲ್ಲಿ ಚಾಲನೆ ನೀಡಲಾಯಿತು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲಾಪ್ ಮಾಡುವ ಮೂಲಕ 'ಹುಲಿ' ಚಿತ್ರ ಸೆಟ್ಟೇರಿದೆ. ಈ ಚಿತ್ರವನ್ನು ಸುಧೀಂದ್ರ ಮತ್ತು ಶಿವಕುಮಾರ್ ನಿರ್ಮಿಸುತ್ತಿದ್ದಾರೆ. ಬೆಂಗಳೂರು, ಮೈಸೂರು ಮತ್ತು ಉತ್ತರ ಕನ್ನಡದಲ್ಲಿ ಚಿತ್ರೀಕರಣ ನಡೆಯಲಿದೆ.
ಪೊಲೀಸ್ ಅಧಿಕಾರಿಯಾಗಿ ಕಿಶೋರ್ ಹಾಗೂ ಟಿವಿ ನಿರೂಪಕಿಯಾಗಿ ಜೆನ್ನಿಫರ್ ಕೊತ್ವಾಲ್ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ಇಬ್ಬರ ವೃತ್ತಿಗಳು ಬೇರೆ ಬೇರೆಯಾದರೂ ಗುರಿ ಮಾತ್ರ ಒಂದೇ, ಜನರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಹಾಗೂ ಅವರ ಉದ್ಧಾರಾಕ್ಕಾಗಿ ಶ್ರಮಿಸುವುದು ಎಂದು ಚಿತ್ರದ ಸಣ್ಣ ಎಳೆಯೊಂದನ್ನು ಬಿಚ್ಚಿಟ್ಟರು ಕಿಶೋರ್.
ಕಿಶೋರ್ ಅವರಲ್ಲಿನ ನಟನಾ ಸಾಮರ್ಥ್ಯವನ್ನು ಇದುವರೆಗೂ ಯಾರು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. 'ಹುಲಿ' ಚಿತ್ರದ ಮೂಲಕ ತಾನು ಆ ಪ್ರಯತ್ನ ಪಡುತ್ತಿದ್ದೇನೆ. ಮುವ್ವತ್ತೈದು ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ಚಿತ್ರವನ್ನು ಮೇ ತಿಂಗಳಲ್ಲಿ ತೆರೆಗೆ ತರುತ್ತಿರುವುದಾಗಿ ಓಂ ಪ್ರಕಾಶ್ ರಾವ್ ತಿಳಿಸಿದರು.


Click it and Unblock the Notifications











