ರಾಜ್ಯದ 30 ಜಿಲ್ಲೆಗಳಲ್ಲಿ ವಿಜೃಂಭಿಸಿದ ವಿಷ್ಣುವರ್ಧನ
ಡಾ.ವಿಷ್ಣುವರ್ಧನರವರ 2ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ, ಕರ್ನಾಟಕ ವಾರ್ತಾ ಇಲಾಖೆ, ಡಾ.ವಿಷ್ಣುವರ್ಧನ ಪ್ರತಿಷ್ಠಾನ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದೊಂದಿಗೆ ವಿಭಾ ಚಾರಿಟೆಬಲ್ ಟ್ರಸ್ಟ್, ಡಿಸೆಂಬರ್ 30ರಂದು ಕರ್ನಾಟದಾದ್ಯಂತ 30 ಜಿಲ್ಲೆಗಳಲ್ಲಿ ಆಯೋಜಿಸಿದ್ದ,
ಡಾ.ವಿಷ್ಣುವರ್ಧನರವರ ಚಿತ್ರೋತ್ಸವವು, ಅಪಾರ ಜನಮನ್ನಣೆಯೊಂದಿಗೆ ಅಭೂತಪೂರ್ವ ಯಶಸ್ಸನ್ನು ಕಂಡಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸಂಬಂಧಿಸಿದ ಬೆಳ್ಳಿಮಂಡಲಗಳೂ ಸೇರಿದಂತೆ ಬಾಗಲಕೋಟೆ, ಬಿಜಾಪುರ, ಗದಗ ಮತ್ತು ಹೊಸಕೋಟೆಯ ರೋಟರಿ ಕ್ಲಬ್ಗಳು, ರಾಯಚೂರು, ತುಮಕೂರು, ಚಿತ್ರದುರ್ಗದಲ್ಲಿನ ವಿಷ್ಣು ಸೇವಾ ಸಮಿತಿಯವರು, ಮೈಸೂರಿನ ನಟನ ಮತ್ತು ಉಡುಪಿಯ ರಂಗಭೂಮಿ ತಂಡಗಳು, ಕೆ.ಹೆಚ್.ಕಬ್ಬೂರ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜ್ ಬಳಗವು ಈ ಉತ್ಸವದಲ್ಲಿ ತಮ್ಮ ಜಿಲ್ಲೆಯನ್ನು ಪ್ರತಿನಿಧಿಸುತ್ತ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದು ಚಿತ್ರೋತ್ಸವದ ವಿಶೇಷ.
ಕರ್ನಾಟಕದಾದ್ಯಂತ 30 ಜಿಲ್ಲೆಗಳಲ್ಲಿ ಸುಮಾರು 1,50, 000 ಪ್ರೇಕ್ಷಕರು ಡಾ.ವಿಷ್ಣುವರ್ಧನರವರ ಚಿತ್ರಗಳನ್ನು ವೀಕ್ಷಿಸುವ ಮೂಲಕ ತಮ್ಮ ನೆಚ್ಚಿನ ಕಲಾವಿದರನ್ನು ಅಭಿಮಾನದಿಂದ ಸ್ಮರಿಸಿದ್ದಾರೆ. ಈ ಮೂಲಕ ತಮ್ಮ ಭಾವಪೂರ್ಣ ನಮನಗಳನ್ನು ಸಲ್ಲಿಸಿದ್ದಾರೆ. ನಾಡಿನ ಮನೆ ಮಾತಾದ ಮಹಾನ್ ಕಲಾವಿದ ಡಾ.ವಿಷ್ಣುವರ್ಧನರವರ ಸಿನಿಮಾ ಬದುಕು ಸಾಗಿ ಬಂದ ಹಾದಿಯನ್ನು ಕುರಿತಂತೆ ಉದಯ ಟಿ.ವಿ ರೂಪಿಸಿದ್ದ ವಿಶೇಷ ದೃಶ್ಯ ಮಾಲಿಕೆಯು ನೋಡುಗರ ಮನಸೂರೆಗೊಂಡಿತ್ತು.
ಪ್ರತಿ ಜಿಲ್ಲೆಯಿಂದಲೂ ಚಿತ್ರೋತ್ಸವದ ಮೆರುಗನ್ನು ಹೆಚ್ಚಿಸುವಂತೆ ಅಲ್ಲಿನ ಹಲವು ಗಣ್ಯರು, ಸ್ವಾಮೀಜಿಗಳು ಪಾಲ್ಗೊಂಡಿದ್ದು ಸಹ ಸ್ಮರಣೀಯ. ಉಡುಪಿ ಮಠದ ಪರ್ಯಾಯ ಸ್ವಾಮೀಜಿಗಳು ಸೇರಿದಂತೆ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾ ಆಯುಕ್ತರು, ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರಾದ ರಾಮಕೃಷ್ಣ, ಮಂಡ್ಯ ರಮೇಶ್, ಕಾಲೇಜು ಉಪನ್ಯಾಸಕರು, ವಿವಿಧ ಸಂಸ್ಥೆಗಳ ಮುಖ್ಯಸ್ಥರು ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.
ಕೆಲವು ಸಂಘ ಸಂಸ್ಥೆಗಳು ಚಿತ್ರೋತ್ಸವದ ಜೊತೆಗೆ, ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿದ್ದವು. ಚಿತ್ರೋತ್ಸವದಲ್ಲಿ ಸಂಬಂಧಪಟ್ಟ ಚಿತ್ರಗಳ ಕಥಾಸಾರಂಶ ಮತ್ತು ತಾಂತ್ರಿಕ ವಿವರಗಳನ್ನೊಳಗೊಂಡ ಪಟ್ಟಿಯನ್ನು ಹಂಚಲಾಯಿತು. (ಒನ್ಇಂಡಿಯಾ ಕನ್ನಡ)


Click it and Unblock the Notifications











