ಬೆಳ್ಳಿತೆರೆಗೆ ನರ್ಸ್ ಜಯಲಕ್ಷ್ಮಿ ಜೀವನ ಕತೆ
ನರ್ಸ್ ಜಯಲಕ್ಷ್ಮಿ ಜೀವನದ ಘಟನೆ ಆಧಾರಿತ ಕನ್ನಡ ಚಲನಚಿತ್ರವೊಂದು ಶೀಘ್ರದಲ್ಲೇ ಸೆಟ್ಟೇರಲಿದೆ. ಈ ಚಿತ್ರವನ್ನು ಠಾಣ್ಗೆ ಕ್ರಿಯೇಷನ್ಸ್ ನಿರ್ಮಿಸಲಿದ್ದು 16ಗಂಟೆಗಳ ದಾಖಲೆ ಸಮಯದಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದೆ. ಚಿತ್ರಕ್ಕೆ 'ಚಕ್ರವ್ಯೂಹ' ಎಂದು ಹೆಸರಿಡಲಾಗಿದೆ ಎಂದು ಚಿತ್ರದ ನಿರ್ದೇಶಕ ಟಿಕೆ ಜಯರಾಮ್ ತಿಳಿಸಿದ್ದಾರೆ.
ಮಾರ್ಚ್ 16ರ ಯುಗಾದಿ ಹಬ್ಬದ ದಿನದಂದು 'ಚಕ್ರವ್ಯೂಹ' ಚಿತ್ರದ ಧ್ವನಿಸುರುಳಿಗಳು ಬಿಡುಗಡೆಯಾಗಲಿವೆ. ಏಪ್ರಿಲ್ ತಿಂಗಳಿಂದ ಚಕ್ರವ್ಯೂಹ ಚಿತ್ರೀಕರಣ ನಡೆಯಲಿದೆ. ಚಿತ್ರದ ಪಾತ್ರವರ್ಗದಲ್ಲಿ ಯಾರು ನಟಿಸಲಿದ್ದಾರೆ ಎಂಬ ಬಗ್ಗೆ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.
ಕನ್ನಡದ ಇಬ್ಬರು ಖ್ಯಾತ ನಟರು ಚಿತ್ರದಲ್ಲಿ ನಟಿಸಲಿದ್ದು ನಾಯಕಿಯಾಗಿ ಟಿವಿ ವರದಿಗಾರ್ತಿಯೊಬ್ಬರು ಕಾಣಿಸಲಿದ್ದಾರೆ. ಚಿತ್ರಕ್ಕೆ ಎಸ್ ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣವಿರುತ್ತದೆ. ಉಳಿದತಾಂತ್ರಿಕ ವರ್ಗ ಹಾಗೂ ಪಾತ್ರಗಳ ಬಗ್ಗೆ ಶೀರ್ಘದಲ್ಲೆ ತಿಳಿಸಲಾಗುತ್ತದೆ ಎಂದು ಚಿತ್ರದ ನಿರ್ಮಾಪಕ ಮನೋಜ್ ಕುಮಾರ್ ಠಾಣ್ಗೆ ವಿವರ ನೀಡಿದರು.
ಈ ಹಿಂದೆ ಅಂಬರೀಶ್ ಮತ್ತು ಅಂಬಿಕಾ ಅಭಿನಯದ 'ಚಕ್ರವ್ಯೂಹ' ಹೆಸರಿನ ಚಿತ್ರ ತೆರೆಕಂಡಿತ್ತು. ಎನ್ ವೀರಸ್ವಾಮಿ ನಿರ್ಮಿಸಿದ್ದ ಚಿತ್ರವನ್ನು ವಿ ಸೋಮಶೇಖರ್ ನಿರ್ದೇಶಿಸಿದ್ದರು. ಪೋಷಕ ವರ್ಗದಲ್ಲಿ ವಜ್ರಮುನಿ, ಪ್ರಭಾಕರ್ ಮತ್ತು ರವಿಚಂದ್ರನ್ ನಟಿಸಿದ್ದರು. ಇಪ್ಪತ್ತೇಳು ವರ್ಷಗಳ ಬಳಿಕ ಇದೀಗ ಮತ್ತೆ 'ಚಕ್ರವ್ಯೂಹ' ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರುತ್ತಿದೆ.


Click it and Unblock the Notifications











