ಹಾಸ್ಯ ನಟ ಕೋಮಲ್ ನಿರ್ಮಾಪಕರ ಮೇಲೆ ಹಲ್ಲೆ?
'ಗೋವಿಂದಾಯ ನಮಃ' ಚಿತ್ರ ನಿರ್ವಿಘ್ನವಾಗಿ ರಾಜ್ಯದಾದ್ಯಂತ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸಲ್ಲೂ ಚಿತ್ರ ಸದ್ದು ಮಾಡುತ್ತಿದ್ದು ನಿರ್ಮಾಪಕರ ಬ್ಯಾಗು ಮತ್ತು ಜೇಬನ್ನು ಭರ್ತಿ ಮಾಡಿದೆ. ಏತನ್ಮಧ್ಯೆ ಚಿತ್ರದ ನಾಯಕ ನಟ ಕೋಮಲ್ ಹಾಗೂ ನಿರ್ಮಾಪಕ ಸುರೇಶ್ ಬಾಬು ನಡುವೆ ಡಿಶುಂ ಡಿಶುಂ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ.
'ಗೊವಿಂದಾಯ ನಮಃ' ಚಿತ್ರದ ನಿರ್ಮಾಪಕರು ಕೋಮಲ್ಗೆ ಸಂಭಾವನೆಯ ಕೊನೆಯ ಕಂತು ರು.10 ಲಕ್ಷ ಕೊಡಬೇಕಾಗಿತ್ತಂತೆ. ಬಾಕಿ ಹಣಕ್ಕೆ ಬದಲಾಗಿ ನಿರ್ಮಾಪಕರು 'ಗೋವಿಂದಾಯ ನಮಃ' ಚಿತ್ರದ ಹೈದರಾಬಾದ್ ಕರ್ನಾಟಕದ ವಿತರಣೆ ಹಕ್ಕುಗಳನ್ನು ಕೋಮಲ್ಗೆ ನೀಡಿದ್ದಾರೆ.
ಕೋಮಲ್ ಅದೃಷ್ಟವೋ ಅಥವಾ ಸುರೇಶ್ ಬಾಬು ದುರಾದೃಷ್ಟವೋ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ರು.70 ಲಕ್ಷ ಕಲೆಕ್ಷನ್ ಆಗಿದೆ. ಈಗ ಸುರೇಶ್ ರು.10 ಲಕ್ಷ ಕೊಡುತ್ತೇನೆ ಹೈದರಾಬಾದ್ ಕರ್ನಾಟಕ ವಿತರಣೆ ಹಕ್ಕುಗಳನ್ನು ವಾಪಸ್ ಕೊಡುವಂತೆ ಕೋಮಲ್ರನ್ನು ಕೇಳಿದ್ದಾರೆ.
ಈ ಸಂಬಂಧ ಇವರಿಬ್ಬರ ನಡುವೆ ಮಾತಿನ ಸಮರ ನಡೆದು ಕಡೆಗೆ ಇಬ್ಬರೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಮೆಟ್ಟಿಲೇರಿದ್ದಾರೆ. ಅಲ್ಲಿ ಇಬ್ಬರನ್ನೂ ಮಾತುಕತೆ ಆಹ್ವಾನಿಸಲಾಗಿದೆ. ಅಲ್ಲೂ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಕಣ್ಣಾರೆ ಕಂಡವರ ಕಥನ ಹೀಗಿದೆ. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡು ಕೋಮಲ್ ಚಿತ್ರದ ನಿರ್ಮಾಪಕ ಸುರೇಶ್ ಮೇಲೆ ಕೈ ಮಾಡಿದ್ದಾರಂತೆ. 'ಗೋವಿಂದಾಯ ನಮಃ' ಚಿತ್ರ ಇದುವರೆಗೂ ಬಾಕ್ಸಾಫೀಸಲ್ಲಿ ರು.7 ಕೋಟಿ ಲಾಭ ಮಾಡಿದೆ. ಇನ್ನೂ ದುಡ್ಡು ಕೊಡಿ ಎಂದು ಕೇಳುವುದರಲ್ಲಿ ಅರ್ಥವಿಲ್ಲ ಎಂದಿರುವ ಕೋಮಲ್, ನಿರ್ಮಾಪಕರ ಮೇಲೆ ಕೈ ಮಾಡಿರುವ ಸುದ್ದಿಯನ್ನು ಅಲ್ಲಗಳೆದಿದ್ದಾರೆ. (ಏಜೆನ್ಸೀಸ್)


Click it and Unblock the Notifications











