ಕನ್ನಡ ಸಿನಿಮಾ ಪ್ರೇಕ್ಷಕರಿಗೆ 'ಬ್ಲಾಕ್' ಫ್ರೈಡೇ
ಇಂದು (ಮೇ 04, 2012) ಕನ್ನಡ ಸಿನಿಪ್ರೇಕ್ಷಕರಿಗೆ 'ಬ್ಲಾಕ್' ಫ್ರೈಡೇ ಎನ್ನುವಂತಾಗಿದೆ. ಕಾರಣ, ಯಾವುದೇ ಹೊಸ ಕನ್ನಡ ಚಿತ್ರ ಬಿಡುಗಡೆಯಾಗಿಲ್ಲ. ಈ ಮೊದಲು ಕೇವಲ ಕೆಲವೇ ಶುಕ್ರವಾರ ಹೀಗಾಗಿದೆ ಅಷ್ಟೇ. ಸಾಮಾನ್ಯವಾಗಿ ಪ್ರತಿ ಶುಕ್ರವಾರ ಎರಡ್ಮೂರು ಹೊಸ ಚಿತ್ರಗಳ ಬಿಡುಗಡೆ ಗ್ಯಾರಂಟಿ. ಹೀಗಿದ್ದೂ ಇಂದು ಒಂದೇ ಒಂದು ಚಿತ್ರ ಬಿಡುಗಡೆಯಿಲ್ಲದ ಶುಕ್ರವಾರವಾಗಿದೆ.
ಇದು ಕಾಕತಾಳೀಯವೋ ಅಥವಾ ಯಾವುದಾದರೂ ಕಾರಣಕ್ಕೆ ಬದ್ಧವೋ ಎಂಬುದು ಕನ್ನಡ ಸಿನಿಪ್ರೇಕ್ಷಕರಿಗೆ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ಕಾರಣ, ಸಿನಿಮಾ ನೋಡುವ ಯುವಜನಾಂಗವೀಗ ರಜೆಯ ಮಜದಲ್ಲಿದೆ. ಇದೇ ವೇಳೆಯನ್ನು ಕಾದು ಚಿತ್ರ ಬಿಡುಗಡೆ ಮಾಡುವ ಸಂಪ್ರದಾಯವೇ ಕನ್ನಡ ಚಿತ್ರರಂಗದಲ್ಲಿದೆ. ಬಿಡುಗಡೆಗೆ ಸಿದ್ಧವಾಗಿರುವ ಕನ್ನಡಚಿತ್ರಗಳ ಸಂಖ್ಯೆಯ ಸಾಕಷ್ಟಿದೆ. ಹಾಗಿದ್ದೂ ಹೀಗೇಕೆ? ಉತ್ತರ ಬಲ್ಲವರು ಹೇಳಬೇಕಾಗಿದೆ.
ಬಹುನಿರೀಕ್ಷಿತ ಅಣ್ಣಾಬಾಂಡ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮತ್ತೊಂದು ಬಹುನಿರೀಕ್ಷಿತ ಚಿತ್ರ ಉಪೇಂದ್ರರ 'ಕಠಾರಿವೀರ' ಮೇ 10ಕ್ಕೆ ಬಿಡುಗಡೆ ಎಂದು ನಿರ್ಮಾಪಕ ಮುನಿರತ್ನ ಘೋಷಿಸಿ ಜಾಹೀರಾತು ನೀಡಿದ್ದಾರೆ. ಹೀಗಾಗಿ ತಮ್ಮ ಚಿತ್ರವನ್ನು ಡಬ್ಬದಿಂದ ತೆಗೆದು ಚಿತ್ರಮಂದಿರದ ಪರದೆಗೆ ಯಾವ ನಿರ್ಮಾಪಕರೂ ಬಿಟ್ಟಿಲ್ಲ ಎನ್ನುವ ಹಲವರ ವಾದಕ್ಕೆ ಹುರುಳಿರಬಹುದೇ? ನಿಮ್ಮ ಅಭಿಪ್ರಾಯ ತಿಳಿಸಿ... (ಒನ್ ಇಂಡಿಯಾ ಕನ್ನಡ)


Click it and Unblock the Notifications











